ಪ್ರಜ್ಞೆ ತಪ್ಪಿಸಿ ಬೆಂಗಳೂರು ಪ್ರಯಾಣಿಕನ ದೋಚಿದ
ಬೆಂಗಳೂರು, ಜೂನ್ 2: ಅಪರಿಚಿತರು ಚಾಕೊಲೇಟ್, ಕೂಲ್ ಡ್ರಿಂಕ್ಸ್, ಮಾವಿನ ಹಣ್ಣು ನೀಡಿದರೆ ಅದನ್ನು ಸೇವಿಸಬೇಡ ಎಂದು ಮನೆಯಲ್ಲಿ ಹಿರಿಯರು ತಮ್ಮ ಮಕ್ಕಳಿಗೆ ಹೇಳುವುದುಂಟು. ಆದರೆ ವಯಸ್ಸುಇಗೆ ಬಂದವರೂ ಹೀಗೆ ಅಪರಿಚಿತರು ನೀಡಿದ ಕೂಲ್ ಡ್ರಿಂಕ್ಸ್ ಕುಡಿದು, ಪ್ರಜ್ಞೆ ತಪ್ಪಿ ದುಡ್ಡು ಕಳೆದುಕೊಂಡರೆ ಹೇಗೆ?
ಕಳೆದ ವಾರ ಇಂತಹುದೇ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಅಜ್ಜಮಾಡ ಗಣಪತಿ ಎಂಬ 29 ವರ್ಷದ ಯುವಕ ತನ್ನೂರಾದ ಕೊಡಗಿನ ಶ್ರೀಮಂಗಳದಿಂದ ಮೇ 29ರಂದು ಬಸ್ಸಿನಲ್ಲಿ ಬೆಂಗಳೂರಿಗೆ ಬಂದಿದ್ದಾರೆ.
ಆದರೆ ಸಹ ಪ್ರಯಾಣಿಕನೊಬ್ಬ ಗಣಪತಿ ಜತೆ ಅಗತ್ಯಕ್ಕಿಂತ ಹೆಚ್ಚೇ ಅನ್ನಿಸುವಷ್ಟು ಸ್ನೇಹ ಬೆಳೆಸಿದ್ದಾನೆ. ಆದರೆ ಗಣಪತಿ ಮುಂದೆ ಅವನಿಂದಲೇ ತನಗೆ ಅನಾಹುತ ಕಾದಿದೆ ಎಂಬುದನ್ನು ಅರಿಯದೆ ಮುಗ್ಧನಾಗಿ ಸಹ ಪ್ರಯಾಣಿಕನಿಗೆ ಮರುಳಾಗಿದ್ದಾರೆ.
ಊರಿಂದ ಮರಳುವ ಹಾದಿಯಲ್ಲಿ ಮದ್ದೂರಿಗೆ ಬರುವ ವೇಳೆಗೆ ಸ್ನೇಹ ಹೆಚ್ಚಾಗಿ ಸಹ ಪ್ರಯಾಣಿಕನು ಗಣಪತಿ ಕೂಲ್ ಡ್ರಿಂಕ್ಸ್ ಅಫರ್ ಮಾಡಿದ್ದಾನೆ. ಯಾಮಾರಿದ ಗಣಪತಿ ಕೂಲಾಗಿ ಡ್ರಿಂಕ್ಸ್ ಸೇವಿಸಿದ್ದಾರೆ, ಅಷ್ಟೇ. ಎಚ್ಚರವಾಗಿ ನೋಡುವಷ್ಟರಲ್ಲಿ ಮೇಮೇಲಿದ್ದ ಒಡವೆ, ಜೇಬಿನಲ್ಲಿದ್ದ ಪರ್ಸು, ಎಲ್ಲಾ ಸೇರಿ ಒಂದು ಲಕ್ಷ ರೂ. ಗೆ ಪಂಗನಾಮ ಹಾಕಿಸಿಕೊಂಡಿದ್ದಾರೆ.
ದೀರ್ಘ ಪ್ರಯಾಣದ ಬಸ್ಸು ಕಳೆದ ಗುರುವಾರ ರಾತ್ರಿ 10.30ರಲ್ಲಿ ಮದ್ದೂರಿನಲ್ಲಿ ಶಾರ್ಟ್ ಬ್ರೇಕಿಗೆ ನಿಂತಿದೆ. ಆಗ ಗಣಪತಿ ತಮ್ಮ ಪತ್ನಿಗೆ ಮೊಬೈಲ್ ಕರೆ ಮಾಡಿ 'ಇನ್ನೇನು ಬಂದುಬಿಟ್ಟೆ. ಮದ್ದೂರಿನಲ್ಲಿದ್ದೇನೆ' ಎಂದು ಹೇಳಿದ್ದಾರೆ. ಆದರೆ ಪತಿರಾಯ ಮಧ್ಯರಾತ್ರಿ ದಾಟಿದರೂ ಬಾರದೆ ಹೋದಾಗ ಗಾಬರಿಗೊಂಡ ಪತ್ನಿ ಹುಡುಕಾಟ ಶುರು ಮಾಡಿಕೊಂಡಿದ್ದಾರೆ. ಮಧ್ಯರಾತ್ರಿ ವೇಳೆಗೆ ಬ್ಯಾಟರಾಯನಪುರ ಸೆಟಲೈಟ್ ಬಸ್ಟಾಂಡಿಗೆ ಬಂದು ನೋಡಿದಾಗ ಪತಿರಾಯ ಚೇರೊಂದರ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಗಣಪತಿಯ ಪತ್ನಿಗೆ ಕಂಡುಬಂದಿದೆ.
ಸರಿ ಬದುಕಿದೆಯಾ ಬಡಜೀವವೇ ಎಂದು ಪತ್ನಿ, ಗಣಪತಿಯನ್ನು ಎಬ್ಬಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಸೂಕ್ತ ಚಿಕಿತ್ಸೆಯ ನಂತರ ಗಣಪತಿಗೆ ಪ್ರಜ್ಞೆ ಮರಳಿಬರುತ್ತಿದ್ದಂತೆ ಸಹಪ್ರಯಾಣಿಕನಿಂದ ತಾನು ಬೇಸ್ತುಬಿದ್ದಿರುವುದು ಅವರ ಅರಿವಿಗೆ ಬಂದಿದೆ. ಸಹಪ್ರಯಾಣಿಕ ಜ್ಯೂಸ್ ಕೊಟ್ಟಿದ್ದಷ್ಟೇ ತನಗೆ ನೆನಪಿರುವುದಾಗಿ ಗಣಪತಿ ಬಡಬಡಿಸಿದ್ದಾರೆ. ಅತ್ತ ಗಣಪತಿಗೆ ಜ್ಯೂಸು ಕುಡಿಸಿದ ಸಹಪ್ರಯಾಣಿಕ ಆತ ಪ್ರಜ್ಞೆ ತಪ್ಪುತ್ತಿರುವುದನ್ನು ಗಮನಿಸಿದ್ದಾನೆ. ಮುಂದೆ ಗಣಪತಿಯ ಚಿನ್ನದುಂಗುರು, ಕತ್ತಿನಲ್ಲಿದ್ದ ಸರ, ಬೇಬಲ್ಲಿದ್ದ ಪರ್ಸು ಎಲ್ಲವನ್ನೂ ಎಗರಿಸಿ, ತನ್ನ ಹಾದಿಹಿಡಿದಿದ್ದಾನೆ.
ಪ್ರಕರಣ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮದ್ದೂರು ಮತ್ತು ಬೆಂಗಳೂರು ಬಸ್ ನಿಲ್ದಾಣಗಳಲ್ಲಿರುವ ಸಿಸಿಟಿವಿ ತುಣುಕುಗಳನ್ನು ಗುಡ್ಡೆಹಾಕಿಕೊಂಡು ಸಹಪ್ರಯಾಣಿಕನಿಗಾಗಿ ತಲಾಶೆ ನಡೆಸಿದ್ದಾರೆ.
ಇತ್ತ ವೈದ್ಯರು ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ಒಟ್ಟು 7 ವಿಧದ ವಿಷಗಳುಳ್ಳ ಜ್ಯೂಸನ್ನು ಸಹಪ್ರಯಾಣಿಕನಿಂದ ಗಣಪತಿ ಕುಡಿದಿದ್ದಾರೆ. ಹಾಗಾಗಿ ಅನಾಹುತ ತುಸು ಹೆಚ್ಚೇ ಆಗಿರಬಹುದೆಂದು ವೈದ್ಯರು ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ಎಚ್ಚರಾ ಪ್ರಯಾಣಿಕರೇ, ಸಹ ಪ್ರಯಾಣಿಕರ ವಿಷಯದಲ್ಲಿ ಎಚ್ಚರ ತಪ್ಪದಿರಿ!