ಬೈನಾ ಬೀಚ್: ಕನ್ನಡಿಗರ ರಕ್ಷಣೆಗೆ ಸಚಿವರ ನಿಯೋಗ
ಬೆಂಗಳೂರು,ಜು.22: ಗೋವಾ ರಾಜ್ಯಕ್ಕೆ ಹಿರಿಯ ಸಚಿವರ ನಿಯೋಗವನ್ನು ಸದ್ಯದಲ್ಲೇ ಕಳುಹಿಸುವ ಮೂಲಕ ನಿರಾಶ್ರಿತ ಕನ್ನಡಿಗರ ಯೋಗಕ್ಷೇಮವನ್ನು ಕಾಪಾಡಲಾಗುವುದೆಂದು ಗೃಹ ಸಚಿವ ಕೆ. ಜೆ. ಜಾರ್ಜ್ ಹೇಳಿದ್ದಾರೆ.
ಬಸವರಾಜ್ ಹೊರಟ್ಟಿ ವಿಧಾನ ಪರಿಷತ್ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆ. ಜೆ. ಜಾರ್ಜ್ ಈಗಾಗಲೇ ಮುಖ್ಯಮಂತ್ರಿಗಳು ಕನ್ನಡಿಗರ ಯೋಗಕ್ಷೇಮವನ್ನು ಕಾಪಾಡುವಂತೆ ಗೋವಾ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
ಸರ್ಕಾರದೊಂದಿಗೆ ಈ ಸಮಸ್ಯೆ ಬಗ್ಗೆ ಚರ್ಚಿಸಲು ಶೀಘ್ರದಲ್ಲಿಯೇ ಸರ್ಕಾರದ ಹಿರಿಯ ಸಚಿವರನ್ನು ಗೋವಾ ರಾಜ್ಯಕ್ಕೆ ಕಳುಹಿಸಿಕೊಡಲಾಗುತ್ತಿದ್ದು, ಕನ್ನಡಿಗರಿಗೆ ಅನ್ಯಾಯವಾಗದಂತೆ ಸರ್ಕಾರ ಅಗತ್ಯಕ್ರಮ ವಹಿಸಲಿದೆ ಎಂದು ಸಚಿವರು ಮಾಹಿತಿ ನೀಡಿದರು.[ಗೋವಾ ಕನ್ನಡಿಗರ ನೆರವಿಗೆ ಧಾವಿಸಿದ ಪೊಲೀಸರು]
ಪೊಲೀಸ್ ಅಧಿಕಾರಿಗಳ ತಂಡ ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ವರದಿಯಲ್ಲಿ ಗೋವಾದ ಬೈನಾ ಬೀಚ್ನಲ್ಲಿ 4-5 ದಶಕಗಳಿಂದ ದಿನಗೂಲಿ ಕೆಲಸ ಮಾಡಿಕೊಂಡು ವಾಸಿಸುತ್ತಿರುವ, ಸುಮಾರು 500 ಕ್ಕಿಂತ ಹೆಚ್ಚು ಜನ ಪರಿಶಿಷ್ಟ ಪಂಗಡದ ಕುಟುಂಬಗಳ ಗುಡಿಸಲುಗಳನ್ನು ಜುಲೈ 11 ರಂದು ಗೋವಾ ಸರ್ಕಾರವು ತೆರವುಗೊಳಿಸಿ ಅವರನ್ನು ನಿರಾಶ್ರಿತರನ್ನಾಗಿ ಮಾಡಿದೆ ಎಂದು ತನ್ನ ವರದಿಯಲ್ಲಿ ತಿಳಿಸಿತ್ತು.