ಎಚ್ಡಿಕೆ ಸಿಡಿ ವಿವಾದ : ಯಾರು, ಏನು ಹೇಳಿದರು?
ಬೆಂಗಳೂರು, ಜು. 7 : ಮೇಲ್ಮನೆ ಸದಸ್ಯತ್ವಕ್ಕೆ ಕೋಟಿ ಕೋಟಿ ಹಣ ನೀಡಬೇಕಾಗುತ್ತದೆ ಎಂಬ ಮಾಜಿ ಸಿಎಂ ಮತ್ತು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿವಿಧ ರಾಜಕೀಯ ಮುಖಂಡರು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಹಾಕಲು ಪಕ್ಷದ ಶಾಸಕರು 1 ಕೋಟಿ ಕೇಳುತ್ತಿದ್ದಾರೆ ಎಂದು ಪಕ್ಷ ನಾಯಕರ ಜೊತೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೊಳ್ಳುತ್ತಿರುವ ಧ್ವನಿಮುದ್ರಿತ ಸಿ.ಡಿ ಶನಿವಾರ ಬಹಿರಂಗವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ನಾಯಕರು ಇದಕ್ಕೆ ತಿರುಗೇಟು ನೀಡಿದ್ದಾರೆ. [ಸಿಡಿಯಲ್ಲಿರುವುದೇನು? : ಇಲ್ಲಿದೆ ವಿವರ]
ಬೆಕ್ಕು ಕಣ್ಣುಮಚ್ಚಿಕೊಂಡು ಹಾಲು ಕುಡಿದರೆ ಜಗತ್ತಿಗೆ ತಿಳಿಯುವುದಿಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದರೆ, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂಬ ಮಾತಿಗೆ ಕುಮಾರಸ್ವಾಮಿ ವಿರುದ್ಧದ ಆರೋಪ ಸಾಕ್ಷಿಯಾಗಿದೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕೇಂದ್ರ ಸಚಿವ ಅನಂತ್ ಕುಮಾರ್ ಪ್ರಕರಣದ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ. ವಿವಿಧ ನಾಯಕರ ಪ್ರತಿಕ್ರಿಯೆ ಇಲ್ಲಿದೆ. [ಎಚ್ಡಿಕೆ 'ಟಿಕೆಟ್' ಹಗರಣದ ಬಗ್ಗೆ ಸಿದ್ದು ಗುದ್ದು]
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು?
ಕುಮಾರಸ್ವಾಮಿ ಅವರ ಮೇಲೆ ಬಂದಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೆ ಜನರು ತಕ್ಕ ಪಾಠ ಕಲಿಸುತ್ತಿದ್ದಾರೆ. ಬೆಕ್ಕು ಕಣ್ಣುಮಚ್ಚಿಕೊಂಡು ಹಾಲು ಕುಡಿದು, ತನ್ನ ಕೆಲಸ ಯಾರಿಗೂ ತಿಳಿಯುವುದಿಲ್ಲ ಎಂದುಕೊಳ್ಳುತ್ತದೆ. ಆ ರೀತಿ ಕುಮಾರಸ್ವಾಮಿ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಅದು ಯಾರಿಗೂ ಗೊತ್ತಾಗಿಲ್ಲ ಎಂದು ಭಾವಿಸಿದ್ದಾರೆ ಎಂದು ಕುಟುಕಿದ್ದಾರೆ.
ಪಕ್ಷದ ವಾಸ್ತವ ಚಿತ್ರಣ ಲಭ್ಯವಾಗಿದೆ
ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಆರೋಪದ ಕುರಿತು ಮಾತನಾಡಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಬೆಂಕಿ ಇಲ್ಲದೆ ಹೊಗೆಯಾಡಲ್ಲ ಎಂಬುದಕ್ಕೆ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಹೇಳಿಕೆ ಸಾಕ್ಷಿಯಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಜೆಡಿಎಸ್ ನಲ್ಲಿರುವ ವಾತಾವರಣ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಈ ಹೇಳಿಕೆಯಿಂದ ಜೆಡಿಎಸ್ ಪಕ್ಷದೊಳಗಿನ ವಾಸ್ತವಾಂಶ ಬಯಲಾಗಿದೆ. ಆ ಪಕ್ಷದ ವಾಸ್ತವ ಚಿತ್ರಣ ತೆರೆದಿಟ್ಟಿದೆ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಸೂಕ್ತ ತನಿಖೆಯಾಗಬೇಕು
ಕುಮಾರಸ್ವಾಮಿ ಸಿ.ಡಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಸಚಿವ ಅನಂತ್ ಕುಮಾರ್, ಶಾಸಕರನ್ನು ಖರೀದಿಸುವುದು ಜೆಡಿಎಸ್ ಪಕ್ಷಕ್ಕೆ ಅನಿವಾರ್ಯವಾಗಿದ್ದರೆ ಈ ಕುರಿತು ಸೂಕ್ತ ತನಿಖೆಯಾಗಲಿ. ಶಾಸಕರನ್ನು ಖರೀದಿಸುವ ಅನಿವಾರ್ಯತೆ ಜೆಡಿಎಸ್ ಪಕ್ಷಕ್ಕೆ ಇರಬಹುದು ಎಂದು ಹೇಳಿದ್ದಾರೆ.
ವಿವಾದ ಹುಟ್ಟು ಹಾಕಿರುವ ಸಿ.ಡಿಯಲ್ಲೇನಿದೆ?
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಹಾಕಲು ಪಕ್ಷದ ಶಾಸಕರು 1 ಕೋಟಿ ಕೇಳುತ್ತಿದ್ದಾರೆ ಎಂದು ಪಕ್ಷ ನಾಯಕರ ಜೊತೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೊಳ್ಳುತ್ತಿರುವ ಧ್ವನಿಮುದ್ರಿತ ಸಿ.ಡಿ ಶನಿವಾರ ಬಹಿರಂಗವಾಗಿತ್ತು. ವಿಜಾಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ ವಿಜುಗೌಡ ಪಾಟೀಲ್ ಅವರನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡಬೇಕೆಂದು ಅವರ ಬೆಂಬಲಿಗರು ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅಲ್ಲಿದ್ದವರು ಎಚ್ಡಿಕೆ ಹೇಳಿಕೆಯನ್ನು ರಹಸ್ಯವಾಗಿ ಧ್ವನಿಮುದ್ರಿಸಿಕೊಂಡಿದ್ದರು. 'ವಿಜುಗೌಡ ಪಾಟೀಲ ಅಭಿಮಾನಿ ಬಳಗ' ಎಂಬ ಹೆಸರಿನಲ್ಲಿ ಮಾತುಕತೆಯ ವಿವರಗಳುಳ್ಳ ಸಿ.ಡಿಯನ್ನು ಮಾಧ್ಯಮ ಕಚೇರಿಗಳಿಗೆ ತಲುಪಿಸಲಾಗಿದ್ದು.