ಆತ್ಮಹತ್ಯೆ ಯತ್ನ: ನರ್ಸ್ ಜಯಲಕ್ಷ್ಮಿಗೆ ಕೋರ್ಟ್ ಶಿಕ್ಷೆ
ಅದು ಪೊಲೀಸ್ ಕೇಸಾಗಿ (ದೊಡ್ಡ ರಾಜಕೀಯ ರಾದ್ಧಾಂತವಾಗಿ) ಸುದೀರ್ಘ ವಿಚಾರಣೆಯ ನಂತರ ಕೋರ್ಟಿನಲ್ಲಿ ಅವರಿಗೆ ಶಿಕ್ಷೆಯಾಗುವುದರ ಮೂಲಕ ಪ್ರಕರಣ ''ಸುಖಾಂತ್ಯ'' ಕಂಡಿದೆ!
ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ನರ್ಸ್ ಜಯಲಕ್ಷ್ಮಿಗೆ 1ನೇ ಎಸಿಎಂಎಂ ನ್ಯಾಯಾಲಯವು ಎರಡು ಗಂಟೆ ಕಾಲ ನ್ಯಾಯಾಲಯದಲ್ಲಿ ಕುಳಿತುಕೊಳ್ಳುವಂತೆ ಶಿಕ್ಷೆ ನೀಡಿದ್ದೂ ಅಲ್ಲದೆ ಮೂರು ಸಾವಿರ ರೂ. ದಂಡವನ್ನೂ ವಿಧಿಸಿದೆ.
ಶುಕ್ರವಾರ ನಡೆದ ವಿಚಾರಣೆಗೆ ಹಾಜರಾದ ನರ್ಸ್ ಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದು ತಪ್ಪಾಯಿತು ಎಂದು ಲಿಖಿತ ಹೇಳಿಕೆ ನೀಡಿದರು. ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದರಿಂದ ನ್ಯಾಯಾಧೀಶರು ನ್ಯಾಯಾಲಯ ಕಾರ್ಯನಿರ್ವಹಿಸುವ ಅವಧಿ ಮುಗಿಯುವವರೆಗೆ ಕೋರ್ಟ್ ಹಾಲ್ ನಲ್ಲಿ ಕುಳಿತುಕೊಳ್ಳುವಂತೆ ಆದೇಶ ನೀಡಿದರು.
ಇದರಿಂದ ಪಾಪ ಪ್ರಾಯಶ್ಚಿತ್ತವಾಗಿ ಪಾಪ ಜಯಲಕ್ಷ್ಮಿ ಅವರು ಅನಿವಾರ್ಯವಾಗಿ ಕೋರ್ಟಿನಲ್ಲಿ ಮಧ್ಯಾಹ್ನ 3.30 ರಿಂದ ಸಂಜೆ 5.30ರವರೆಗೆ ಆಕಳಿಸುತ್ತಾ ಕುಳಿತರು. ನ್ಯಾಯಾಧೀಶರು ನ್ಯಾಯಾಲಯದಿಂದ ನಿರ್ಗಮಿಸುವವರೆಗೆ ಅಲ್ಲೇ ಇದ್ದು, ನಂತರ ದಂಡ ಪಾವತಿಸಿ ವಾಪಸಾದರು.
ಮಾಜಿ ಬಿಜೆಪಿ ಸಚಿವ ರೇಣುಕಾಚಾರ್ಯ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನರ್ಸ್ ಜಯಲಕ್ಷ್ಮಿ 2007ರ ಜುಲೈ 17 ರಂದು ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ 'ಪ್ಲಾಟಿನಂ ಸಿಟಿ' ಅಪಾರ್ಟಮೆಂಟಿನಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಪೊಲೀಸರು ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆ 309ರ ಪ್ರಕಾರ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿದ್ದರು.