ಕೊಡಗಿನಲ್ಲಿ ವಿದ್ಯುತ್ ಮಾರ್ಗಕ್ಕಾಗಿ ಮರ ಕಡಿಯೋಲ್ಲ
ಬೆಂಗಳೂರು, ಏ. 30 : ಮೈಸೂರು-ಕೋಳಿಕ್ಕೋಡ್ ನಡುವಿನ ವಿದ್ಯುತ್ ಮಾರ್ಗ ಕಾಮಗಾರಿಗೆ ಪರ್ಯಾಯ ಮಾರ್ಗ ಹುಡುಕಿ 15 ದಿನದಲ್ಲಿ ವರದಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಇದರಿಂದ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಕೈಗೊಂಡಿರುವ ಕಾಮಗಾರಿಗೆ ಉಂಟಾಗಿರುವ ಅಡ್ಡಿ ನಿವಾರಣೆಯಾಗುವ ಸಾಧ್ಯತೆ ಇದೆ.
ಮೈಸೂರು-ಕೋಳಿಕ್ಕೋಡ್ ನಡುವೆ 400 ಕೆವಿ ಹೈಟೆಂಕ್ಷನ್ ವಿದ್ಯುತ್ ಮಾರ್ಗ ಕಾಮಗಾರಿಯನ್ನು ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಕೈಗೊಂಡಿದೆ. ಆದರೆ, ಕಾಮಗಾರಿಗೆ ಸಾವಿರಾರು ಮರಗಳನ್ನು ಬಲಿ ತೆಗೆದುಕೊಳ್ಳಲಾಗುತ್ತಿದೆ ಎಂದು ಕೊಡಗು ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.
ಮಂಗಳವಾರ ಸಿಎಂ ಸಿದ್ದರಾಮಯ್ಯ, ಇಂಧನ ಸಚಿವ ಡಿಕೆ ಶಿವಕುಮಾರ್ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೊಡಗು ಜಿಲ್ಲೆಯ ಜನಪ್ರತಿನಿಧಿಗಳು, ಪರಿಸರ ಕಾರ್ಯಕರ್ತರು ಹಾಗೂ ಇಂಧನ, ಅರಣ್ಯ ಮತ್ತು ಪವರ್ ಗ್ರಿಡ್ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಪರ್ಯಾಯ ಮಾರ್ಗ ಹುಡುಕಿ 15 ದಿನದಲ್ಲಿ ವರದಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಪರ್ಯಾಯ ಮಾರ್ಗವನ್ನು ಹುಡುಕಲು ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆ ನೇತೃತ್ವದಲ್ಲಿ ರಾಜ್ಯ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ್ ಲೂತ್ರಾ, ವನ್ಯಜೀವಿ ತಜ್ಞ ರಮಣ್ ಸುಕುಮಾರ್, ಪರಿಸರ ಕಾರ್ಯಕರ್ತರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, 15 ದಿನಗಳಲ್ಲಿ ಈ ಸಮಿತಿ ಸರ್ಕಾರಕ್ಕೆ ವರದಿ ನೀಡಲಿದೆ.
ಡಿಕೆ ಶಿವಕುಮಾರ್ ಹೇಳಿದ್ದೇನು?
ಗೃಹ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಇಂಧನ ಸಚಿವ ಡಿಕೆ ಶಿವಕುಮಾರ್, ಕಳೆದ 9 ವರ್ಷಗಳಿಂದ ವಿಳಂಬವಾಗುತ್ತಿರುವ ಈ ಯೋಜನೆ ಪೂರ್ಣಗೊಂಡಲ್ಲಿ ರಾಜ್ಯಕ್ಕೆ 500 ಮೆಗಾವ್ಯಾಟ್ ವಿದ್ಯುತ್ ದೊರೆಯಲಿದೆ ಎಂದರು. 2005ರಲ್ಲಿ ಈ ಕಾಮಗಾರಿಯನ್ನು ಆರಂಭಿಸಲಾಗಿತ್ತು ಇದು 2007ಕ್ಕೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಕೊಡಗು ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿರುವುದರಿಂದ ಯೋಜನೆಯ ಪೈಕಿ 55 ಕಿ.ಮೀ ಕಾಮಗಾರಿ ವಿಳಂಬವಾಗುತ್ತಿದೆ ಎಂದರು.
ಪರಿಹಾರ ನೀಡುತ್ತೇವೆ
ಸಮಿತಿ ನೀಡುವ ಪರ್ಯಾಯ ಮಾರ್ಗದಲ್ಲಿ ಅರಣ್ಯ, ವನ್ಯ ಪ್ರಾಣಿಗಳು ಮತ್ತು ಜನರಿಗೆ ತೊಂದರೆಯಾಗದಂತೆ ಕಾಮಗಾರಿಯನ್ನು ಮಾಡಲು ಸರ್ಕಾರ ಸಿದ್ಧವಿದೆ. ಈ ಯೋಜನೆಗೆ ಬಳಸಿಕೊಳ್ಳುವ ಜಮೀನಿನ ಮಾಲೀಕರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ 60 ಕೋಟಿ ರೂ. ನಿಗದಿ ಪಡಿಸಿದ್ದು, ಈಗಾಗಲೇ 10 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಹೇಳಿದರು.
ಸಭೆಯಲ್ಲಿ ಯಾರು ಪಾಲ್ಗೊಂಡಿದ್ದರು
ಸಿಎಂ ಸಿದ್ದರಾಮಯ್ಯ, ಇಂಧನ ಸಚಿವ ಡಿಕೆ ಶಿವಕುಮಾರ್, ಅರಣ್ಯ ಸಚಿವ ರಮಾನಾಥ ರೈ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಶಾಸಕ ಅಪ್ಪಚ್ಚು ರಂಜನ್, ವಿಧಾನಪರಿಷತ್ ಸದಸ್ಯರಾದ ಎಂ.ಸಿ.ನಾಣಯ್ಯ, ಟಿ.ಜಾನ್ ಸೇರಿದಂತೆ ಮೈಸೂರು, ಕೊಡಗು ಜಿಲ್ಲೆಯ ಹಲವು ಜನಪ್ರತಿನಿಧಿಗಳು ಹಾಗೂ ಪರಿಸರ ಕಾರ್ಯಕರ್ತರು, ರೈತ ಮುಖಂಡರಾದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೆ.ಜಿ.ಬೋಪಯ್ಯ ಹೇಳುವುದೇನು?
ಸಭೆಯ ಬಳಿಕ ಮಾತನಾಡಿದ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, 2005ರಿಂದಲೂ ಈ ಯೋಜನೆಯನ್ನು ವಿರೋಧಿಸುತ್ತಿದ್ದೇವೆ. ಕಾಮಗಾರಿಯಿಂದ ಕೊಡಗಿನ ಪರಿಸರಕ್ಕೆ ಹಾನಿಯಾಗಲಿದ್ದು, ಜನ ಜೀವನಕ್ಕೂ ಪೆಟ್ಟು ಬೀಳಲಿದೆ. ಆದ್ದರಿಂದ ಯೋಜನೆ ಕೈಬಿಡಿ ಇಲ್ಲವೇ ಪರ್ಯಾಯ ಮಾರ್ಗ ಹುಡುಕಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೇವೆ ಎಂದರು.