ಮೋದಿ ತರ ನೀವೂ ಕೆಲಸ ಮಾಡಿ:ಡಿಕೆಶಿಗೆ ಎಚ್ಡಿಕೆ ಸಲಹೆ
ಬೆಂಗಳೂರು, ಜು 15: ಪ್ರಧಾನಿ ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆ ತಂದರು. ನಿಮಗೂ ಇಂಧನ ಖಾತೆ ಎನ್ನುವ ಪ್ರಮುಖ ಖಾತೆಯಿದೆ. ನೀವೂ ಕರ್ನಾಟಕದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿ ತನ್ನಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತನ್ನ ರಾಜಕೀಯ ವಿರೋಧಿ ಡಿ ಕೆ ಶಿವಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ.
ಕಳೆದ ಇಪ್ಪತ್ತು ವರ್ಷದಿಂದ ಇಂಧನ ಸಚಿವಾಲಯ ಎಲ್ಲಾ ಸರಕಾರದ ಅವಧಿಯಲ್ಲೂ ದಿವ್ಯ ನಿರ್ಲ್ಯಕ್ಷಕ್ಕೆ ಒಳಗಾಗಿದೆ ಎನ್ನುವ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ. ಕಳೆದ ಸರಕಾರ ಮತ್ತು ನಾನು ಸಿಎಂ ಆಗಿದ್ದಾಗಿನ ವಿಷಯವೆಲ್ಲಾ ಈಗ ಇತಿಹಾಸ. ಈಗ ನಿಮ್ಮ ಕಾಲ, ಮಾಡಿ ತೋರಿಸಿ ಎಂದು ಕುಮಾರಸ್ವಾಮಿ, ಇಂಧನ ಸಚಿವ ಡಿ ಕೆ ಶಿವಕುಮಾರಿಗೆ ಮಾತಿನ ಚಾಟಿ ನೀಡಿದ್ದಾರೆ. (ವಿದ್ಯುತ್ ಸಮಸ್ಯೆ ದೇವರಿಂದಲೂ ಬಗೆಹರಿಯೋಲ್ಲ)
ಸೋಮವಾರ (ಜು 14) ಸದನದಲ್ಲಿ ಇಂಧನ ಇಲಾಖೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ರಾಜ್ಯ ಇಂದು ಕಗ್ಗತ್ತಲಲ್ಲಿದೆ. ಸರಕಾರಕ್ಕೆ ಸಮರ್ಪಕ ಧೋರಣೆ ಇಲ್ಲದೇ ಇರುವುದು ವಿದ್ಯುತ್ ಸಮಸ್ಯೆಗೆ ಪ್ರಮುಖ ಕಾರಣವೆಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
1991 ಇಸವಿಯಿಂದ ಇದುವರೆಗೆ ಅಧಿಕಾರದಲ್ಲಿದ್ದ ಸರಕಾರಗಳು ವಿದ್ಯುತ್ ವಲಯವನ್ನು ಕಡೆಗಣಿಸಿಕೊಂಡು ಬಂದಿವೆ. ನಂತರದ ದಿನದಲ್ಲಿ ವಿದ್ಯುತ್ ಸಂಬಂಧ ಮಾಡಿಕೊಂಡ ಒಡಂಬಡಿಕೆಗಳು ಬರೀ ಜನರ ಕಣ್ಣೊರೆಸುವ ಮತ್ತು ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸವಾಗಿರುವುದು ವಿಷಾದನೀಯ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಮೋದಿಯನ್ನು ಹೊಗಳಿದ ಕುಮಾರಸ್ವಾಮಿ, ಮುಂದೆ ಓದಿ...
ವಿದ್ಯುತ್ ಸಮಸ್ಯೆಗೆ ನಾನೂ ಕಾರಣ
ಬೆಂಗಳೂರು ನಗರದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿ ಕಾಡುವುದಿಲ್ಲ. ಇದರರ್ಥ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇಲ್ಲವೆಂದಲ್ಲ. ಗ್ರಾಮೀಣ ಭಾಗದಲ್ಲೂ ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿರಬೇಕು. ಆಗಲೇ ರೈತರಿಗೆ ಅನುಕೂಲವಾಗುವುದು. ವಿದ್ಯುತ್ ಉತ್ಪಾದನೆಗೆ ಯಾವುದೇ ಸರಕಾರ ಹೆಚ್ಚಿನ ಒತ್ತು ನೀಡಲಿಲ್ಲ. ಬದಲಿಗೆ ವಿದ್ಯುತ್ ಖರೀದಿಗೆ ಮುಂದಾಗಿದ್ದೇ ಈ ಸಮಸ್ಯೆಗೆ ಮೂಲ ಕಾರಣ. ನನ್ನ ಸರಕಾರವೂ ಇದಕ್ಕೆ ಕಾರಣ - ಕುಮಾರಸ್ವಾಮಿ.
ಮೋದಿಗೆ ಪವರ್ ನೀಡಿದರು
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನರೇಂದ್ರ ಮೋದಿ ವಿದ್ಯುತ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದರು. ಜನರಿಗೆ 'ಪವರ್' ಸಮಸ್ಯೆ ಇಲ್ಲದಂತೆ ನೋಡಿಕೊಂಡರು. ಈಗ ಜನರು ಅವರನ್ನು 'ಸೂಪರ್ ಪವರ್' ಮಾಡಿ ಕೇಂದ್ರಕ್ಕೆ ಪ್ರಧಾನಿಯಾಗಿ ಕಳುಹಿಸಿಕೊಟ್ಟಿದ್ದಾರೆ. ನಿಮಗೂ ಅಧಿಕಾರವಿದೆ, ನೀವೂ ಮೋದಿಯಂತೆ ಕ್ರಾಂತಿ ತನ್ನಿ - ಡಿ ಕೆ ಶಿವಕುಮಾರಿಗೆ ಕುಮಾರಸ್ವಾಮಿ ಸಲಹೆ.
ಸರಕಾರ ಎನ್ನುವುದು ಟ್ವೆಂಟಿ ಟ್ವೆಂಟಿ ಮ್ಯಾಚ್ ಇದ್ದಂತೆ
ಈಗಿನ ಸರಕಾರಗಳು ಟ್ವೆಂಟಿ ಟ್ವೆಂಟಿ ಮ್ಯಾಚ್ ಇದ್ದಂತೆ. ಅಧಿಕಾರದ ಅವಧಿಯಲ್ಲಿ ಚೆನ್ನಾಗಿ ಕೆಲಸ ಮಾಡಿದರೆ, ಜನರು ಮತ್ತೆ ಆರಿಸಿ ಕಳುಹಿಸುತ್ತಾರೆ. ಸುಮ್ಮನೆ ಕಾಲಹರಣ ಮಾಡಿಕೊಂಡು ಇದ್ದರೆ, ಜನರು ಅಧಿಕಾರದ ಸೌಭಾಗ್ಯವನ್ನು ನೀಡುವುದೇ ಇಲ್ಲ.
ಬಂಗಾರಪ್ಪನವರ ಅಧಿಕಾರದ ಅವಧಿಯಲ್ಲಿ ಒಡಂಬಡಿಕೆ
ರಾಜ್ಯ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗೆ ನಾನೂ ಸೇರಿದಂತೆ ಎಲ್ಲರೂ ಕಾರಣ. ಇದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅಮೆರಿಕದ ಕಂಪೆನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡರು. ಅವರು ಈ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದರು - ಕುಮಾರಸ್ವಾಮಿ
ದೇವೇಗೌಡ್ರು ಚಾಲನೆ ನೀಡಿದ್ದರು
ದೇವೇಗೌಡ್ರು ಪ್ರಧಾನಿಯಾಗಿದ್ದಾಗ ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕದ 5-6 ಘಟಕ ಆರಂಭಕ್ಕೆ 1500 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು ಎಂದು ಕುಮಾರಸ್ವಾಮಿ ಸ್ಮರಿಸಿಕೊಳ್ಳುವುದನ್ನು ಮರೆಯಲಿಲ್ಲ.