ಮತದಾನ ಮಾಡುವಂತೆ ಅಮೀರ್ ಖಾನ್ ಸಂದೇಶ
ಬೆಂಗಳೂರು, ಏ. 3 : ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಚುನಾವಣಾ ಆಯೋಗ ನಟ ಅಮೀರ್ ಖಾನ್ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿಕೊಂಡಿದೆ. ಮತದದಾನ ಮಾಡುವಂತೆ ಅಮೀರ್ ಖಾನ್ ನೀಡುವ ಸಂದೇಶ ಗುರುವಾರದಿಂದ ಪ್ರಸಾರವಾಗಲಿದೆ ಎಂದು ವೆಚ್ಚ ನಿರ್ವಹಣೆಯ ವಿಶೇಷ ಕರ್ತವ್ಯಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ವಿ.ಪೊನ್ನುರಾಜ್, ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ನಟ ಅಮೀರ್ ಖಾನ್ ಅವರನ್ನು ರಾಯಭಾರಿಯನ್ನಾಗಿಸಿದೆ. ಮತದದಾನ ಮಾಡುವಂತೆ ಅಮೀರ್ ಖಾನ್ ನೀಡುವ ಸಂದೇಶ ಗುರುವಾರದಿಂದ ಪ್ರಸಾರವಾಗಲಿದೆ ಎಂದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಮತದಾನದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ವಾರ್ತಾ ಇಲಾಖೆ 65 ಲಕ್ಷ ರೂ. ವೆಚ್ಚದಲ್ಲಿ 1200 ಬೀದಿ ನಾಟಕ ನಡೆಸಲಾಗುತ್ತದೆ. ಮತದಾನ ಪ್ರಮಾಣ ಕಡಿಮೆ ಆಗುತ್ತಿರುವ ಪ್ರದೇಶಗಳಲ್ಲಿ ಈ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಶಾಲಾ ಮಕ್ಕಳ ಮೂಲಕವೂ ಮತದಾನದ ಮಹತ್ವದ ಬಗ್ಗೆ ಪೋಷಕರಿಗೆ ಮನವಿ ಪತ್ರ ತಲುಪಿಸಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯ ವಿವರಗಳು
ಮತದಾನ ಮಾಡಿದ್ದಕ್ಕೆ ಧನ್ಯವಾದ ಪತ್ರ
ಮತದಾನ ಪ್ರಮಾಣ ಹೆಚ್ಚಿಸಲು ಮತದಾನದ ಚೀಟಿ ಮನೆ ಮನೆಗೆ ತಲುಪಿಸುವ ಜೊತೆಗೆ, ಮತದಾನ ಮಾಡಿದವರಿದೆ ಈ ಬಾರಿ ಧನ್ಯವಾದ ಪತ್ರ ನೀಡಲು ಕೂಡ ಚುನಾವಣಾ ಆಯೋಗ ಚಿಂತನೆ ನಡೆಸಿದೆ ಎಂದು ವಿ.ಪೊನ್ನುರಾಜ್ ಹೇಳಿದರು.
ಮನೆಗೆ ವೋಟರ್ ಸ್ಲಿಪ್
ಮತದಾನದ ದಿನಕ್ಕಿಂತ ನಾಲ್ಕೈದು ದಿನಗಳ ಮೊದಲು ಎಲ್ಲರ ಮನೆಗೆ ಮತದಾನದ ಚೀಟಿ ತಲುಪಿಸಿ ಅವರಿಗೆ ಚೀಟಿ ತಲುಪಿರುವುದನ್ನು ಖಾತರಿ ಪಡಿಸಿಕೊಳ್ಳಲು ಈ ಬಾರಿ ಸ್ವೀಕೃತಿಯನ್ನೂ ಪಡೆಯಲಾಗುವುದು ಎಂದು ವಿ.ಪೊನ್ನುರಾಜ್ ಹೇಳಿದರು.
ಮತದಾನ ಮಾಡಲು ಜಾಗೃತಿ
ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ವಿಭಾಗದ ವಾಯವ್ಯ ಸಾರಿಗೆ ಬಸ್ಸುಗಳಲ್ಲಿ ಪ್ರತಿ ಪ್ರಯಾಣಿಕರಿಗೂ ಮತದಾನ ಜಾಗೃತಿಯ ಘೋಷಣೆಗಳನ್ನು ತಲುಪಿಸಲಾಗುತ್ತಿದೆ. "ಮತದಾನ ನನ್ನ ಹಕ್ಕು. ಅದನ್ನು ನಾನೇ ಚಲಾಯಿಸುವೆ" ಎಂಬ ಜಾಗೃತಿಯ ಸಾಲು ಪ್ರತಿ ಟಿಕೆಟ್ ಕೊನೆ ಭಾಗದಲ್ಲಿ ಮುದ್ರಣಗೊಳ್ಳುತ್ತಿದೆ. ಧಾರವಾಡ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳು ಇದನ್ನು ಕಾರ್ಯಗತಗೊಳಿಸಿದ್ದಾರೆ ಎಂದು ಪೊನ್ನುರಾಜ್ ಮಾಹಿತಿ ನೀಡಿದರು.
757 ಪ್ರಕರಣ
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತು ಇದುವರೆಗೂ 757 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ವಿ.ಪೊನ್ನುರಾಜ್ ಮಾಹಿತಿ ನೀಡಿದರು. ರಾಯಚೂರು ಜಿಲ್ಲೆಯಲ್ಲಿ 2.42 ಲಕ್ಷ ರೂ., ರಾಮನಗರ ಜಿಲ್ಲೆಯಲ್ಲಿ 5.84 ಲಕ್ಷ ರೂ., ಗೋಕಾಕ್ ತಾಲೂಕಿನಲ್ಲಿ 13.36 ಲಕ್ಷ ರೂ., ದೇವನಹಳ್ಳಿಯ ರಾಣಿ ಸರ್ಕಲ್ನಲ್ಲಿ 2.45 ಲಕ್ಷ ರೂ., ಹಾಗೂ ಬ್ಯಾಡರಹಳ್ಳಿಯಲ್ಲಿ 69 ಸಾವಿರ ರೂ., ಸೇರಿದಂತೆ ಇದುರೆಗೂ 3.31 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದರು.