ರಾಜ್ಯ ಇಪಿಎಫ್ ಕಚೇರಿಯಲ್ಲಿ ಆಂಧ್ರದವರ ದರ್ಬಾರ್
ಬೆಂಗಳೂರು. ಮೇ.22: ಕರ್ನಾಟಕ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಸಂಸ್ಥೆಯಲ್ಲಿ ಆಂಧ್ರಪ್ರದೇಶದವರ ದರ್ಬಾರ್ ಸಿಕ್ಕಾಪಟ್ಟೆ ಹೆಚ್ಚಾಗಿದೆ.
ಭವಿಷ್ಯ ನಿಧಿ ಸಂಸ್ಥೆಯಲ್ಲಿ 2007-08 ಮತ್ತು 2013-14ರ ನಡುವೆ ಹೊಸದಾಗಿ 400 ಉದ್ಯೋಗಿಗಳು ನೇಮಕವಾಗಿದ್ದು ಇದರಲ್ಲಿ 80 ಉದ್ಯೋಗಿಗಳು ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದಾರೆ.
ಬಸವೇಶ್ವರ ನಗರದ ಕೆ.ಎಚ್ಬಿ ಕಾಲೋನಿಯ ನಿವಾಸಿ ಕೆ.ರವಿಯವರು ಮಾಹಿತಿ ಹಕ್ಕಿನ ಕಾಯಿದೆ ಅಡಿಯಲ್ಲಿ ಪ್ರಶ್ನಿಸಿದಾಗ ಈ ಮಾಹಿತಿ ಬಹಿರಂಗಗೊಂಡಿದೆ. ಇದರಲ್ಲೂ ವಿಶೇಷವೆನೆಂದರೆ ನೇಮಕವಾದ 80 ಉದ್ಯೋಗಿಗಳಲ್ಲಿ 56 ಮಂದಿ ಕರ್ನೂಲ್ನ ಅದೋನಿ ಪ್ರದೇಶಕ್ಕೆ ಸೇರಿದ್ದರೆ, ಒಂದೇ ಕುಟುಂಬದ ನಾಲ್ಕು ಮಂದಿ ಆಯ್ಕೆಯಾಗಿದ್ದಾರೆ.
ಈ ಎಲ್ಲಾ ಉದ್ಯೋಗಿಗಳು ಬೆಂಗಳೂರಿನ ಇಪಿಎಫ್ ಕಚೇರಿಯಲ್ಲಿ ಪ್ರಥಮ ದರ್ಜೆಯ ಕ್ಲರ್ಕ್ ಆಗಿ ನೇಮಕವಾಗಿದ್ದು ಎಲ್ಲಾ ಸಾಮಾಜಿಕ ಭದ್ರತೆಯ ಸೇವೆಯನ್ನು ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಎರಡು ಉದ್ಯೋಗಿಗಳ ಭವಿಷ್ಯ ನಿಧಿ ಪ್ರಾದೇಶಿಕ ಕಚೇರಿಗಳಿದ್ದು, ಒಂದು ರಾಜರಾಮ್ ಮೋಹನ್ ರಾಯ್ ರಸ್ತೆಯಲ್ಲಿದ್ದರೆ ಇನ್ನೊಂದು ಪೀಣ್ಯದಲ್ಲಿದೆ. ಇಷ್ಟೇ ಅಲ್ಲದೇ ಬೆಂಗಳೂರಿನಲ್ಲೇ ನಾಲ್ಕು ಉಪ ಪ್ರಾದೇಶಿಕ ಕಚೇರಿಗಳನ್ನು ಇಪಿಎಫ್ ಹೊಂದಿದ್ದು ಒಂದು ಸಾವಿರಕ್ಕೂ ಅಧಿಕ ಮಂದಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.
ಇಪಿಎಫ್ನಲ್ಲಿ ಆಂಧ್ರ ಮೂಲದ ಉದ್ಯೋಗಿಗಳು ನೇಮಕವಾಗಿದ್ದಕ್ಕೆ ವರ್ಲ್ಡ್ ಫೆಡರೇಶನ್ ಟ್ರೇಡ್ ಯೂನಿಯನ್ ಉಪಾಧ್ಯಕ್ಷ(ದಕ್ಷಿಣ ಏಷ್ಯಾ) ಜಿ.ಆರ್ ಶಿವಶಂಕರ್ ಖಂಡಿಸಿದ್ದು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.