ತೆರೆದ ಬಾವಿಗಳನ್ನು ಮುಚ್ಚಕ್ಕೆ ಗಡುವು ಘೋಷಣೆ
ಬೆಂಗಳೂರು.ಆ.13: ಬಾಗಲಕೋಟ ಜಿಲ್ಲೆಯ ಸೂಳೀಕೇರಿ ಗ್ರಾಮದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ತಿಮ್ಮಣ್ಣ ಬದುಕಿ ಬರಲಿಲ್ಲ. ಆದರೆ ಇನ್ನು ಮುಂದೆ ಇಂಥ ಅವಘಡಗಳು ಸಂಭವಿಸದಂತೆ ತಡೆಯಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ. ನಿರುಪಯುಕ್ತ ಕೊಳವೆ ಬಾವಿಗಳನ್ನು ಆಗಸ್ಟ್ 31ರೊಳಗೆ ಮುಚ್ಚಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್, ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸುಮಾರು 13,509 ತೆರೆದ ಕೊಳವೆ ಬಾವಿಗಳಿದ್ದು ಅವುಗಳ ಪೈಕಿ 12,385 ಬೋರ್ ವೆಲ್ ಗಳನ್ನು ಈಗಾಗಲೇ ಮುಚ್ಚಲಾಗಿದೆ. ಖಾಸಗಿ ವ್ಯಕ್ತಿಗಳಿಗೆ ಸೇರಿದ ಕೊಳವೆಬಾವಿಗಳ ಸಮೀಕ್ಷೆ ನಡೆಯುತ್ತಿದ್ದು ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸೂಳೀಕೇರಿಯಂಥ ಅವಘಡಗಳು ನಡೆಯಲು ಸರ್ಕಾರದ ಸುತ್ತೋಲೆ ಸಮರ್ಪಕವಾಗಿ ಅನುಷ್ಠಾನವಾಗದಿರುವುದೇ ಕಾರಣ. ಈ ರೀತಿಯ ದುರ್ಘಟನೆ ಮತ್ತೆ ರಾಜ್ಯದಲ್ಲಿ ಸಂಭವಿಸಬಾರದು. ಅವಘಡಗಳು ನಡೆದರೆ ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.(ಕೊಳವೆ ಬಾವಿ ಮುಚ್ಚದಿದ್ದರೆ ಪೊಲೀಸ್ ಕೇಸ್)
ಕರೆ ಮಾಡಿ : ಆಗಸ್ಟ್ 20ರ ನಂತರ ರಾಜ್ಯದ ಯಾವುದೇ ಭಾಗದಲ್ಲಿ ತೆರೆದ ಕೊಳವೆ ಬಾವಿ ಕಂಡುಬಂದರೆ ಟೋಲ್ ಫ್ರೀ ನಂಬರ್ 18004258666 ಕರೆ ಮಾಡಿ ತಿಳಿಸಬಹುದು. ಕರೆ ಮಾಡುವವರು ಹೆಸರು ಮತ್ತು ವಿಳಾಸ ನೀಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.