ಕರ್ನಾಟಕದಲ್ಲಿ 4.6 ಕೋಟಿ ಮತದಾರರು
ಬೆಂಗಳೂರು, ಏ. 2 : ಕರ್ನಾಟಕದಲ್ಲಿ ಏ.17ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಒಟ್ಟು 4,62,11,844 ಮಂದಿ ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದ್ದ ಮತದಾರರಿಗಿಂತ ಈ ಬಾರಿ 20.97 ಲಕ್ಷ ಹೊಸ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ, ಮತದಾನದ ಬಗ್ಗೆ ಮೂಡಿಸಿದ ಜಾಗೃತಿ ಮತ್ತು ಹೊಸ ಮತದಾರರ ನೋಂದಣಿಗೆ ಕೈಗೊಂಡ ಕ್ರಮಗಳಿಂದಾಗಿ ಹೆಚ್ಚು ಮತದಾರರು ಈ ಬಾರಿ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದ್ದ ಮತದಾರರಿಗಿಂತ ಈ ಬಾರಿ 20.97 ಲಕ್ಷ ಹೊಸ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
2013ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ 4,40,74,093 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಸದ್ಯ ಲೋಕಸಭೆ ಚುನಾವಣೆಯಲ್ಲಿ 4,62,11,844 ಹಕ್ಕು ಚಲಾಯಿಸಲು ಅವಕಾಶ ಪಡೆದಿದ್ದಾರೆ ಎಂದು ಹೇಳಿದರು. ಈ ಬಾರಿ ಪುರುಷ - ಮಹಿಳಾ ಮತದಾರ ಅನುಪಾತದಲ್ಲಿ ಕೊಂಚ ಇಳಿಕೆಯಾಗಿದೆ. ವಿಧಾನಸಭೆ ಚುನಾವಣೆ ವೇಳೆ ಸಾವಿರ ಪುರುಷ ಮತದಾರರಿಗೆ 958 ಮಹಿಳಾ ಮತದಾರರಿದ್ದು, ಈ ಚುನಾವಣೆಯಲ್ಲಿ ಮಹಿಳಾ ಮತದಾರರ ಸಂಖ್ಯೆ 960 ಕ್ಕೆ ಹೆಚ್ಚಿದೆ ಎಂದು ಅನಿಲ್ ಕುಮಾರ್ ಝಾ ತಿಳಿಸಿದರು. ಪತ್ರಿಕಾಗೋಷ್ಠಿಯ ವಿವರಗಳು
ಒಟ್ಟು ಮತದಾರರು
ಏ.17ರಂದು ನಡೆಯಲಿರುವ ಚುನಾವಣೆಯಲ್ಲಿ ಒಟ್ಟು 4,62,11,844 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. ಇವರಲ್ಲಿ 2,35,55, 074 ಪುರುಷರು ಹಾಗೂ 2,26,12,084 ಮಹಿಳೆಯರು ಹಾಗೂ 3,557 ಇತರೆ ಮತದಾರರಿದ್ದು, 40729 ಸರ್ವೀಸ್ (ಸೇನೆಯಲ್ಲಿರುವವರು) ಮತದಾರರಿದ್ದಾರೆ. ಅವರಿಗೆ ಈಗಾಗಲೇ ಅಂಚೆ ಮೂಲಕ ಮತಪತ್ರ ಕಳುಹಿಸಲಾಗಿದ್ದು, ಚುನಾವಣೆ ವೇಳೆಗೆ ಆಯೋಗದ ಕೈ ಸೇರಲಿದೆ ಎಂದು ಅನಿಲ್ ಕುಮಾರ್ ಝಾ ಹೇಳಿದರು.
ಬೆಂಗಳೂರು ಉತ್ತರ ದೊಡ್ಡ ಕ್ಷೇತ್ರ
ಮತದಾರರ ಸಂಖ್ಯೆಯ ಆಧಾರದ ಮೇಲೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಅತಿ ದೊಡ್ಡದಾಗಿದೆ. ಕ್ಷೇತ್ರದಲ್ಲಿ ಒಟ್ಟು 23,99,994 ಮತದಾರರಿದ್ದು ಇವರಲ್ಲಿ, 12,59,145 ಪುರುಷ ಹಾಗೂ 11,40,484 ಮಹಿಳೆಯರಿದ್ದಾರೆ. ಉಡುಪಿ-ಚಿಕ್ಕಮಗಳೂರು ಅತಿ ಸಣ್ಣ ಕ್ಷೇತ್ರವಾಗಿದ್ದು, ಇಲ್ಲಿ 6,78,710 ಪುರುಷರು ಹಾಗೂ 7,07,742 ಮಹಿಳೆಯರು ಸೇರಿದಂತೆ ಒಟ್ಟು 13,86,515 ಮತದಾರಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು
ಲೋಕಸಭೆ ಚುನಾವಣೆಗೆ ಬಿಜೆಪಿ, ಬಿಎಸ್ಪಿ ಹಾಗೂ ಕಾಂಗ್ರೆಸ್ ಕಾಂಗ್ರೆಸ್ ಪಕ್ಷಗಳು ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜೆಡಿಎಸ್ -25, ಸಿಪಿಐ-3, ಸಿಪಿಎಂ-2, ಹಾಗೂ ಎನ್ ಸಿಪಿ ಯಿಂದ ಒಬ್ಬ ಅಭ್ಯರ್ಥಿ ಚುನಾವಣಾ ಕಣದಲ್ಲಿದ್ದಾರೆ ಎಂದು ಅನಿಲ್ ಕುಮಾರ್ ಝಾ ಹೇಳಿದರು. ನೋಂದಾಯಿತ ಆದರೆ ಮಾನ್ಯತೆ ಹೊಂದಿಲ್ಲದ ಪಕ್ಷಗಳಿಂದ 124 ಅಭ್ಯರ್ಥಿಗಳು ಹಾಗೂ 195 ಪಕ್ಷೇತರರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದರು.
15ಕ್ಕೂ ಅಧಿಕ ಅಭ್ಯರ್ಥಿಗಳು
28 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ 15 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು ಈ ಕ್ಷೇತ್ರ ಮತಯಂತ್ರಗಳಲ್ಲಿ ಒಂದು ಹೆಚ್ಚುವರಿ ಬ್ಯಾಲೆಟ್ ಯೂನಿಟ್ನ್ನು ಬಳಸಲಾಗುತ್ತದೆ. ಬೀದರ್, ಕೊಪ್ಪಳ, ಹಾವೇರಿ, ಧಾರವಾಡ, ದಾವಣಗೆರೆ, ತುಮಕುರು, ಮಂಡ್ಯ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳಲ್ಲಿ 15 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಅನಿಲ್ ಕುಮಾರ್ ಝಾ ಹೇಳಿದರು.
ಚುನಾವಣಾ ಅಕ್ರಮ
ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕು ಖಾನೇಕುಂದಿಯಲ್ಲಿ 20 ಲಕ್ಷ ರೂ. ನಗದು, ಕೊಡಗು ಜಿಲ್ಲೆಯಲ್ಲಿ 2.00 ಲಕ್ಷ ರೂ. ನಗದು, ಚಿಕ್ಕಬಳ್ಳಾಪುರದ ಚಡ್ಲಾಪುರದಲ್ಲಿ 1.5 ಲಕ್ಷ ರೂ. ನಗದು, ಧಾರವಾಡದಲ್ಲಿ 1.35 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದ್ದು, ಇದುವರೆಗೂ 3.08 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅನಿಲ್ ಕುಮಾರ್ ಝಾ ಹೇಳಿದರು. ಧಾರವಾಡ ಜಿಲ್ಲೆಯಲ್ಲಿ 830 ಕೆ.ಜಿ. ಬೆಲ್ಲ, ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕು ಹಾರೋಹಳ್ಳಿಯಲ್ಲಿ 2000 ಸೀರೆ, ಚಿಕ್ಕಬಳ್ಳಾಪುರದಲ್ಲಿ 2022 ಸೀರೆ, ಬಾಗಲಕೋಟೆಯಲ್ಲಿ ಟಿಶರ್ಟ್, ಕರಪತ್ರ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.