ಸಿಖ್ ದಂಗೆ: ಸೋನಿಯಾ ವಿರುದ್ಧದ ಪ್ರಕರಣ ವಜಾ
ನ್ಯೂಯಾರ್ಕ್, ಜೂ.11: 1984ರಲ್ಲಿ ಭಾರತದಲ್ಲಿ ನಡೆದ ಸಿಖ್ ದಂಗೆ ಸಂಬಂಧಿಸಿದಂತೆ ಆರೋಪ ಹೊತ್ತಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಿಲೀಫ್ ಸಿಕ್ಕಿದೆ. ಬ್ರೂಕ್ಲೀನ್ ನ ನ್ಯಾಯಾಲಯವೊಂದು ಸೋನಿಯಾ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದೆ.
ಸಿಖ್ ಫಾರ್ ಜಸ್ಟೀಸ್ ಎಂಬ ಸಂಸ್ಥೆ ಸಲ್ಲಿಸಿದ್ದ ದೂರಿನ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬ್ರಿಯಾನ್ ಕೋಗನ್ ಅವರು ಸರಿಯಾದ ಸಾಕ್ಷಿ ಆಧಾರಗಳಿಲ್ಲದ ಕಾರಣ ಸೋನಿಯಾ ಗಾಂಧಿ ಅವರ ಮೇಲಿನ ಆರೋಪವನ್ನು ಕೈಬಿಡಲಾಗಿದೆ ಎಂದು ತಮ್ಮ 13 ಪುಟಗಳ ತೀರ್ಪಿನಲ್ಲಿ ಹೇಳಿದ್ದಾರೆ.
ಆದರೆ, ಅರ್ಜಿದಾರರು ಸೂಕ್ತ ಸಾಕ್ಷಿ ಸಿಕ್ಕರೆ ಮತ್ತೊಮ್ಮೆ ದೂರು ಸಲ್ಲಿಸುವ ಅವಕಾಶವಿದೆ. ಸಿಖ್ ಫಾರ್ ಜಸ್ಟೀಸ್ ಇನ್ಮುಂದೆ ಇಂಥ ಪ್ರಕರಣ ದಾಖಲಿಸದಂತೆ ದೂರಿನ ವಿರುದ್ಧ ತಡೆ ನೀಡಬೇಕು ಎಂದು ಸೋನಿಯಾ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳು ತಳ್ಳಿ ಹಾಕಿದ್ದಾರೆ.
ವೀಸಾ ನಿರಾಕರಣೆಗೆ ಕೋರಲಾಗಿತ್ತು: 2002ರ ಗುಜರಾತ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಗುಜರಾತ್ ಸಿಎಂ ನರೇಂದ್ರ ಮೋದಿ ಅವರಿಗೆ ವೀಸಾ ನಿರಾಕರಿಸುವುದಾದರೆ, ಸೋನಿಯಾ ಗಾಂಧಿ ಅವರಿಗೂ ವೀಸಾ ನಿರಾಕರಿಸಬೇಕು. ಸಿಖ್ ಸಮುದಾಯದ ಹತ್ಯಾಕಾಂಡ ಪ್ರಕರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿನಾಯಕಿಗೂ ವೀಸಾ ನಿಯಮಗಳು ಅನ್ವಯವಾಗಬೇಕು ಎಂದು ಸಿಖ್ ಸಮುದಾಯ ಒತ್ತಾಯಿಸಿತ್ತು.
ಸಿಖ್ ವಿರೋಧಿ ದಂಗೆಯಲ್ಲಿ ಭಾಗಿಯಾದ ಪಕ್ಷದ ನಾಯಕರನ್ನು ರಕ್ಷಿಸಿದ ಆರೋಪದ ಮೇಲೆ ನ್ಯೂಯಾರ್ಕ್ ಫೆಡರಲ್ ಕೋರ್ಟ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಮನ್ಸ್ ಜಾರಿಗೊಳಿಸಿತ್ತು.
1984ರ ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ದಿಲ್ಲಿ ಕಂಟೋನ್ಮೆಂಟ್ ಪ್ರದೇಶ ದಲ್ಲಿ ನಡೆದ ಹತ್ಯಾಕಾಂಡ ಪ್ರಕರಣದ ಬಗ್ಗೆ ಸಿಬಿಐ ನೀಡಿರುವ ಹೇಳಿಕೆಯಂತೆ ಈ ಹಿಂಸಾಚಾರವು ವ್ಯವಸ್ಥಿತವಾಗಿ ರೂಪಿಸಿದ್ದು ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ನಾಯಕರನ್ನು ಸೋನಿಯಾ ಗಾಂಧಿ ರಕ್ಷಿಸುತ್ತಿದ್ದಾರೆ ಎಂದು ಸಿಖ್ ಸಮುದಾಯ ಆರೋಪಿಸಿ ತ್ತು Alien Tort Claims Act (ATCA) and Torture Victim Protection Act (TVPA) ಅನ್ವಯ ಎಸ್ ಎಫ್ ಜೆ ದೂರು ದಾಖಲಿಸಿತ್ತು.(ಪಿಟಿಐ)