ಅಮೆರಿಕ ಕನ್ನಡಿಗರಿಂದ ಲೋಕಸಭೆ ಚುನಾವಣಾ ಪ್ರಚಾರ
ಲಾಸ್ ಏಂಜಲಿಸ್, ಏ.5 : ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಗೆಲುವಿಗೆ ಭಾರತೀಯ ಜನತಾ ಪಕ್ಷ ಎಲ್ಲಾ ಬಗೆಯ ರಣತಂತ್ರಗಳನ್ನು ರೂಪಿಸುತ್ತಿದೆ. ಇದೀಗ ಮೋದಿ ಗೆಲುವಿಗೆ ಟೆಕ್ಕಿ ಎನ್ಆರ್ಐಗಳು (ಅನಿವಾಸಿ ಭಾರತೀಯರು) ಪ್ರಚಾರದ ತಂಡವನ್ನು ರಚಿಸಿದ್ದು ದೂರದ ಅಮೆರಿಕದಿಂದ ತಾಯ್ನೆಲದಲ್ಲಿ ಪ್ರಚಾರ ಅಭಿಯಾನ ನಡೆಸುತ್ತಿದ್ದಾರೆ.
ಮತದಾರರ ಮನ ಓಲೈಸುವ ಸಲುವಾಗಿ ಪ್ರತಿನಿತ್ಯ ನಾಲ್ಕು ಗಂಟೆಗಳ ಕಾಲ ಅವರು ತಮ್ಮನ್ನು ತಾವು ಈ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಬಿಡುವಿಲ್ಲದ ಕೆಲಸದ ಒತ್ತಡದಲ್ಲೂ ತಲಾ ಎರಡು ಗಂಟೆಗಳಂತೆ (ಬೆಳಿಗ್ಗೆ ಮತ್ತು ಸಂಜೆ) ನಾಲ್ಕು ಗಂಟೆಗಳ ಷೆಡ್ಯೂಲ್ ಮಾಡಿಕೊಂಡು ನರೇಂದ್ರ ಮೋದಿ ಪರ ಪ್ರಚಾರ ನಡೆಸುತ್ತಿದ್ದಾರೆ. ಆಯ್ದ ಕ್ಷೇತ್ರದ ಮತದಾರರಿಗೆ ಕರೆ ಮಾಡುತ್ತಿದ್ದಾರೆ. ಜತೆಗೆ, ಫೇಸ್ಬುಕ್, ಟ್ವಿಟರ್ ಮೂಲಕವೂ ಜನಜಾಗೃತಿ ಕಾರ್ಯ ನಡೆಸುತ್ತಿದ್ದಾರೆ.
ಪ್ರಸ್ತುತ ಅಮೆರಿಕ ಸಾಫ್ಟ್ವೇರ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕದ ಬಳ್ಳಾರಿಯವರಾಗಿರುವ ಅನಿವಾಸಿ ಕನ್ನಡಿಗ ಚಂದ್ರಕಾಂತ್ ಯತ್ನಟ್ಟಿ ಈ ಪ್ರಚಾರ ಅಭಿಯಾನ ತಂಡದ ಕರ್ನಾಟಕ ಸಂಚಾಲಕರಾಗಿ ಮುಂದಾಳತ್ವ ವಹಿಸಿದ್ದಾರೆ. ಅಮೆರಿಕಾದ ಪಶ್ಟಿಮ ಕರಾವಳಿ ಲಾಸ್ ಏಂಜಲೀಸ್ನಲ್ಲಿರುವ ಕರ್ನಾಟಕ ಎನ್ಆರ್ಐ ಕುಟುಂಬಗಳ ಪಟ್ಟಿ (data base) ತಯಾರಿಸಿದ್ದಾರೆ.
ನರೇಂದ್ರ ಮೋದಿ, ಅಂದರೆ ಬಿಜೆಪಿಗೆ ಮತದಾನ ಮಾಡುವಂತೆ ಮನವೊಲಿಸುವುದು, ರಾಜ್ಯ ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳು ಮತ್ತು ಸ್ಥಳೀಯ ಶಾಸಕರೊಂದಿಗೆ ನಿರಂತರ ಸಂಪರ್ಕ, ಅನಿವಾಸಿ ಘಟಕದ ಕಾರ್ಯಸೂಚಿಯಾಗಿದೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಎನ್ಆರ್ಐ ಕುಟುಂಬದೊಂದಿಗೆ ಮಾಹಿತಿ ವಿನಿಮಯ, ಹೀಗೆ ಬಿಜೆಪಿ ಪರ ಮತ ಚಲಾಯಿಸುವಂತೆ ಪ್ರೋತ್ಸಾಹಿಸುವ ಮತ್ತು ಇಡೀ ಭಾರತೀಯ ಮತದಾರರನ್ನು ಜಾಗೃತಗೊಳಿಸುವ ಯತ್ನ ಮಾಡುತ್ತಿದ್ದಾರೆ.
"ಅನಿವಾಸಿ ಭಾರತೀಯರು ಸಾವಿರಾರು ಮೈಲು ದೂರವಿದ್ದರೂ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ತಾವಿರುವ ಸ್ಥಳದಿಂದಲೇ ಕರೆ ಮಾಡುತ್ತಿದ್ದೇವೆ, ಬಿಜೆಪಿಗೇ ಮತ ಚಲಾಯಿಸುವಂತೆ ಮನವವೊಲಿಕೆ ಮಾಡುತ್ತಿದ್ದೇವೆ" ಎನ್ನುತ್ತಿದ್ದಾರೆ ಅನಿವಾಸಿ ಬಿಜೆಪಿ ಅಭಿಮಾನಿಗಳು.
ಚಂದ್ರಕಾಂತ್ ಯತ್ನಟ್ಟಿ ಅವರ ತಂಡದಲ್ಲಿ ಅರಿಝೋನಾದ ಫೀನಿಕ್ಸ್ನಲ್ಲಿ ನೆಲೆಸಿರುವ ಮಂಗಳೂರಿನ ಸುದೇಶ್, ನ್ಯೂಜೆರ್ಸಿಯಲ್ಲಿರುವ ಉಡುಪಿ ರಘು, ಕ್ಯಾಲಿಫೋರ್ನಿಯಾದ ಲಾಂಗ್ಬೀಚ್ನ ನಿವಾಸಿ ಸುಬ್ಬರಾಯ ಹೆಗ್ಗಡೆ, ಟೆಕ್ಸಾಸ್ನಲ್ಲಿರುವ ಮೈಸೂರಿನ ವಿಕ್ರಮ್, ಡಲ್ಲಾಸ್ನ ಬಳ್ಳಾರಿಯ ರವಿಶಂಕರ್, ಉತ್ತರ ಕೆರೋಲಿನಾದಲ್ಲಿರುವ ಬೆಂಗಳೂರಿನ ರಾಮಶಾಸ್ತ್ರಿ, ನ್ಯೂಯಾರ್ಕ್ನಲ್ಲಿರುವ ಸಂತೋಷ್, ವಾಷಿಂಗ್ಟನ್ನಲ್ಲಿ ನಿವಾಸಿ ಬೆಳಗಾವಿಯ ಅಜಯ್, ರಾಜ್ಯದ ಅನಿವಾಸಿ ಭಾರತೀಯ ತಂಡ ಪ್ರಚಾರದ ಮುಂದಾಳುಗಳಾಗಿದ್ದಾರೆ.