ಅಮೆರಿಕ ವಿವಿಯಲ್ಲಿ ಭಾರತದ ಗಣಿತಜ್ಞನ ಮಾತು
ನ್ಯೂಯಾರ್ಕ್, ಸೆ. 29 : ಭಾರತದ ಪ್ರಸಿದ್ಧ ಗಣಿತಜ್ಞ ಮತ್ತು ಸೂಪರ್-30 ಫೌಂಡರ್ ಆನಂದ ಕುಮಾರ್ ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಮೆಸಾಚುಟೆಸ್ಟ್ ತಾಂತ್ರಿಕ ಶಿಕ್ಷಣ ಸಂಸ್ಥೆ(ಎಂಐಟಿ)ಯಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ತಾಂತ್ರಿಕ ಶಿಕ್ಷಣ ನೀಡಿಕೆ ಕುರಿತು ಮಾತನಾಡಲಿದ್ದಾರೆ.
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೇ ಕುಮಾರ್ಗೆ ಆಹ್ವಾನ ನೀಡಿರುವುದು ವಿಶೇಷ. ಹಣಕಾಸು ತೊಂದರೆಯಿಂದ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಅವಕಾಶ ಕಳೆದುಕೊಂಡಿದ್ದ ಆನಂದ್ ಕುಮಾರ್, ಸಪ್ಟೆಂಬರ್ 30 ರಂದು ಎಂಐಟಿಯಲ್ಲಿ, ಅಕ್ಟೋಬರ್ 1 ರಂದು ಹಾರ್ವರ್ಡ್ ವಿವಿಯಲ್ಲಿ ಅಂತಾರಾಷ್ಟ್ರೀಯ ಶಿಕ್ಷಣ ಕಾರ್ಯಕ್ರಮದ ಕುರಿತು ಮಾತನಾಡಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ.(ಐಐಟಿ ಪ್ರವೇಶಿಸಿದ ಬಿಹಾರದ ಸಾಧಕರು)
ಕುಮಾರ್ ತಮ್ಮ ಸೂಪರ್-30 ಸಂಸ್ಥೆಯ ಮೂಲಕ ಹಿಂದುಳಿದ ಮಕ್ಕಳ ಕಲ್ಯಾಣಕ್ಕೆ ಶ್ರಮಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಸಮಸ್ಯೆ ಮೇಲೆ ಬೆಳಕು ಚೆಲ್ಲುವ ಯತ್ನ ಮಾಡಲು ಮುಂದಾಗಿದ್ದಾರೆ.
'ಶಿಕ್ಷಣ ಸಾಮಾಜಿಕ ಮತ್ತು ಸೈದ್ಧಾಂತಿಕ ಬದಲಾವಣೆಗೆ ಕಾರಣವಾಗುತ್ತದೆ. ಕಳೆದ 14 ವರ್ಷದಲ್ಲಿ ನನ್ನ ತವರು ಬಿಹಾರದಲ್ಲಿ ಯಾವ ಬದಲಾವಣೆ ಆಗಿದೆ ಎಂಬುದನ್ನು ಪ್ರಶ್ನಿಸಿಕೊಂಡರೆ ಉತ್ತರ ಸಿಗುವುದಿಲ್ಲ. ಸರ್ಕಾರಗಳು ಅನೇಕ ಯೋಜನೆ ಜಾರಿ ಮಾಡಿವೆ ಎಂದು ಹೇಳುತ್ತಿವೆ ಆದರೆ ಪರಿಣಾಮ ಮಾತ್ರ ಕಂಡುಬರುತ್ತಿಲ್ಲ. ಭಾರತದಲ್ಲಿ ಒಂದೇ ಮಾತ್ರವಲ್ಲದೇ ಇಡಿ ಪ್ರಪಂಚದಲ್ಲೇ ಬದಲಾವಣೆಯಾಗಬೇಕಿದೆ. ಇದಕ್ಕೆಲ್ಲ ಗುಣಾತ್ಮಕ ಶಿಕ್ಷಣವೇ ಮದ್ದು' ಎಂಬುದು ಆನಂದ್ ಮಾತು.