ಇರಾಕ್ ಮರಣಮೃದಂಗ: ಅಪಹೃತ 39 ಭಾರತೀಯರ ಹತ್ಯೆ?
ನವದೆಹಲಿ, ಜೂನ್ 19: ಇರಾಕ್ ಆಂತರಿಕ ಕ್ಷೋಭೆಯಲ್ಲಿ ನಲುಗುತ್ತಿರುವ ವಿದೇಶೀಯರು ಅದರಲ್ಲೂ ಭಾರತೀಯರು ಹೈರಾಣಗೊಂಡಿದ್ದಾರೆ. ಸುನ್ನಿ ಬಂಡುಕೋರರ ವಶದಲ್ಲಿದ್ದ ಇರಾಕಿನ ಮೊಸುಲ್ ನಗರದಲ್ಲಿ 40 ಭಾರತೀಯ ಕಾರ್ಮಿಕರನ್ನು ಅಪಹರಿಸಲಾಗಿದೆ. ಒಂದು ಮೂಲದ ಪ್ರಕಾರ 39 ಭಾರತೀಯರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇರಾಕಿನ
ಆಂತರಿಕ
ಕ್ಷೋಭೆಯು
ನಾನಾ
ಪರಿಣಾಮಗಳನ್ನು
ಬೀರತೊಡಗಿದೆ.
ಒಂದೆಡೆ
ಅಮೂಲ್ಯ
ಜೀವಗಳ
ಹರಣ.
ಮತ್ತೊಂದೆಡೆ
ಭಾರತದ
ನೂತನ
ಪ್ರಧಾನಿ
ನರೇಂದ್ರ
ಮೋದಿಗೆ
ಮೊದಲ
ಸವಾಲು
ಎದುರಾಗಿದೆ.
ಜತೆಗೆ
ಕಚ್ಚಾತೈಲ
ಕೈಗೆಟುಕದಂತಾಗಿ,
ಬೆಲೆಗಳು
ಭಾರಿ
ಸ್ಥಿತ್ಯಂತರಗೊಳ್ಳುತ್ತಿವೆ.
ಶಿಯಾ ಸರ್ಕಾರವಿರುವ ಇರಾಕಿನ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳುತ್ತಾ ಸಾಗಿರುವ ಸುನ್ನಿ ಬಂಡುಕೋರರು ಬುಧವಾರವೂ ಮೇಲುಗೈ ಸಾಧಿಸಿದ್ದಾರೆ. ಉತ್ತರ ಬಾಗ್ದಾದಿನ ಅತಿ ಸನಿಹಕ್ಕೆ ಬಂದಿರುವ ಅವರು, ಇರಾಕಿನ ಅತಿದೊಡ್ಡ ತೈಲ ಸಂಸ್ಕರಣ ಘಟಕವಾದ ಸರ್ಕಾರಿ ಸ್ವಾಮ್ಯದ ಬೈಜಿ ತೈಲ ಸಂಸ್ಕರಣ ಘಟಕದ ಮೇಲೆ ದಾಳಿ ನಡೆಸಿದ್ದಾರೆ.
ಇದರಿಂದ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗುವ ಅಪಾಯ ಇದೆ. 12 ರಾಷ್ಟ್ರಗಳ ಒಪೆಕ್ ಅತಿದೊಡ್ಡ ರಾಷ್ಟ್ರಗಳಲ್ಲಿ ಒಂದಾಗಿರುವ ಇರಾಕ್ ದಿನವೊಂದಕ್ಕೆ 33 ಲಕ್ಷ ಬ್ಯಾರೆಲ್ ತೈಲೋತ್ಪಾದನೆ ಮಾಡುತ್ತಿದೆ.
ಈ ಮಧ್ಯೆ, ಭಾರತದ ವಿದೇಶಾಂಗ ಇಲಾಖೆ ವಕ್ತಾರರು ಅಪಹೃತ ಕಾರ್ಮಿಕರ ಹತ್ಯೆ ಸುದ್ದಿಯನ್ನು ಖಚಿತಪಡಿಸಿಲ್ಲ. ಖಚಿತ/ ಅಧಿಕೃತ ಮೂಲಗಳು ಘೋಷಿಸಿದನಂತರವಷ್ಟೇ ವಸ್ತುಸ್ಥಿತಿ ಏನೆಂಬುದು ತಿಳಿದುಬರಲಿದೆ ಎಂದು ವಕ್ತಾರರು ತಿಳಿಸಿದ್ದಾರೆ. (ಇರಾಕಿನಲ್ಲಿ ಬಾಂಬ್ ಬಿದ್ರೆ, ಭಾರತದಲ್ಲೇಕೆ ನಡುಕ)
ಏತನ್ಮಧ್ಯೆ ಇರಾಕಿನಲ್ಲಿರುವ ಭಾರತೀಯರ ಸುರಕ್ಷತೆಗಾಗಿ ಭಾರತ ಸರ್ಕಾರ ತೀವ್ರ ಪ್ರಯತ್ನ ನಡೆಸಿದೆ. ಸಮನ್ವಯಕ್ಕೆ ಅನುಕೂಲವಾಗಲೆಂದು ಇರಾಕಿನಲ್ಲಿ ಭಾರತದ ರಾಯಭಾರಿಯಾಗಿದ್ದ ಸುರೇಶ್ ರೆಡ್ಡಿ ಅವರನ್ನು ಬಾಗ್ದಾದ್ ಗೆ ಕಳುಹಿಸಲು ನಿರ್ಧರಿಸಿದೆ. ಅಲ್ಲಿನ ಭಾರತೀಯ ದೂತಾವಾಸವು 24 ಗಂಟೆಗಳ ಸಹಾಯವಾಣಿಯನ್ನು ಆರಂಭಿಸಿದೆ.
ಅಮೆರಿಕ ಮತ್ತಿತರ ಪಾಶ್ಚಾತ್ಯ ದೇಶಗಳು ಇರಾಕ್ ಅನ್ನು ರಕ್ಷಿಸಲು ಪಣತೊಟ್ಟಿದ್ದು, ಜನಾಂಗೀಯ ಕಲಹ ಕೊನೆಗೊಳಿಸಲು ಸುನ್ನಿಗಳೊಂದಿಗೆ ಮಾತುಕತೆ ನಡೆಸುವಂತೆ ಇರಾಕ್ ಪ್ರಧಾನಿ ಮಲಿಕಿ ಅವರ ಮೇಲೆ ಒತ್ತಡ ಹೇರಿದ್ದರು. ಅದಕ್ಕೆ ಮಣಿದ ಪ್ರಧಾನಿ ಸುನ್ನಿ ಮತ್ತು ಖುರ್ದಿಶ್ ರಾಜಕೀಯ ಮುಖಂಡರೊಂದಿಗೆ ಮಂಗಳವಾರ ರಾತ್ರಿ ಮಾತುಕತೆ ನಡೆಸಿದರಾದರೂ ಯಾವುದೇ ತೀರ್ಮಾನಕ್ಕೆ ಬರಲು ಸಭೆ ವಿಫಲವಾಯಿತು. (ಮೂಲ: ಇಂಡಿಯನ್ ಎಕ್ಸ್ ಪ್ರೆಸ್)