ಐಫೋನ್ 6 ಹಿಡಿಸಿರುವ ಹುಚ್ಚು ಅಂತಿಂಥದಲ್ಲ!
ಬೆಂಗಳೂರು, ಸೆ. 20 : ಇಡೀ ಜಗತ್ತೇ ನಿರೀಕ್ಷಿಸುತ್ತಿದ್ದ ಆಪಲ್ ಕಂಪನಿಯ ಐಫೋನ್ 6 ಬಿಡುಗಡೆಯಾಗಿ ಭರ್ಜರಿಯಾಗಿ ಬಿಕರಿಯಾಗುತ್ತಿದೆ. ಭಾರತದಲ್ಲಿ ನರ್ಸರಿ ಮಕ್ಕಳ ಶಾಲೆ ಅಡ್ಮಿಷನ್ಗಾಗಿ ಪಾಲಕರು ಕ್ಯೂ ನಿಲ್ಲುವಂತೆ, ಕ್ರಿಕೆಟ್ ಟಿಕೆಟ್ ಗಾಗಿ ಕ್ರೀಡಾಪ್ರೇಮಿಗಳು ಸರತಿ ಸಾಲಿನಲ್ಲಿ ನಿಲ್ಲುವಂತೆ, ಸೀಮೆಎಣ್ಣೆಗಾಗಿ ಬಿಪಿಎಲ್ ಕಾರ್ಡುದಾರರು ನಿಲ್ಲುವಂತೆ ದೇಶವಿದೇಶಗಳಲ್ಲೆಲ್ಲ ಜನರು ಮುಗಿಬಿದ್ದು ಕೊಳ್ಳುತ್ತಿದ್ದಾರೆ.
ಹಾಗಂತ ಕಡ್ಲೆಪುರಿ ರೇಟಿಗೇನು ಐಫೋನ್ 6 ಸಿಗುತ್ತಿಲ್ಲ. ಕೊಂಡರೆ ನಿಮ್ಮಂಥ ಶ್ರೀಮಂತರು ಮತ್ತೊಬ್ಬರಿಲ್ಲ. ಬಡವರ ಪಾಲಿಗಂತೂ ಐಫೋನ್ 6 ಕನಸಿನ ಮಾತು. ಅದರಲ್ಲಿ ಅಂಥದೇನು ವಿಶೇಷವಿದೆಯೋ ಗ್ಯಾಡ್ಜೆಟ್ ಪರಿಣಿತರೇ ಬಲ್ಲರು. ಏನೇ ಇರಲಿ, ಇಡೀ ವಿಶ್ವದಾದ್ಯಂತ ಆಪಲ್ ಕಂಪನಿಯ ಈ ಲೇಟೆಸ್ಟ್ ಪ್ರಾಡಕ್ಟ್ ಭಾರೀ ಹವಾ ಹುಟ್ಟುಹಾಕಿದೆ. ಐಫೋನ್ 6ನ್ನು ಕೈಯಲ್ಲಿ ಹಿಡಿದುಕೊಂಡು ಅಡ್ಡಾಡುವುದು ಭಾರೀ ಪ್ರತಿಷ್ಠೆಯ ಪ್ರಶ್ನೆಯಾಗಲಿದೆ.
ಐಫೋನ್ ಕುರಿತಂತೆ ಕೆಲ ಆಸಕ್ತಿಕರ ಸಂಗತಿಗಳು
* ಮೊಟ್ಟಮೊದಲ ಐಫೋನ್ 6ನ್ನು ಕೊಂಡ ಆಸ್ಟ್ರೇಲಿಯಾದ ಸುರಸುಂದರಾಂಗ ಯುವಕನೊಬ್ಬ ಡಬ್ಬಿಯನ್ನು ತೆರೆದು ಫೋನಿನ ಅಂದವನ್ನು ನೋಡುವ ಉದ್ವೇಗದಲ್ಲಿ ಅದನ್ನು ಕೆಳಗೆ ಬೀಳಿಸಿದ್ದಾನೆ. ಪಾಪ, ಐಪೋನಿಗೆ ಏನೂ ಆಗಲಿಲ್ಲ.
* ಮೇಲಿನ ಸುದ್ದಿ ಒಂದು ರೀತಿಯದಾದರೆ, ಮಾರುಕಟ್ಟೆಗೆ ಬರುವ ಹೊಸ ಉತ್ಪನ್ನ ಗಟ್ಟಿಯಾಗಿದೆಯೆ ಎಂದು ಅದನ್ನು ನೆಲಕ್ಕೆ ಬೀಳಿಸಿ ಪರೀಕ್ಷಿಸುವ ಭೂಪನೊಬ್ಬ ಇದ್ದಾನೆ. ಆತ ನಡೆಸಿರುವ ಪರೀಕ್ಷೆಯ ಪ್ರಕಾರ, ಐಫೋನ್ 6 ಸ್ಕ್ರೀನ್ ಮುಖ ಕೆಳಗಾಗಿ ನೆಲಕ್ಕೆ ಬಿದ್ದರೆ, ಒಂದೇ ಏಟಿಗೆ ಗೋವಿಂದ ಗೋವಿಂದ!
* ಪೋಲಂಡ್ ದೇಶದ ವಿಚ್ಛೇದಿತ ಮನುಷ್ಯನೊಬ್ಬ ಐಫೋನ್ 6 ಕೊಂಡರೆ ತನ್ನ ಹೆಂಡತಿ ಮತ್ತು ಮಗಳು ತನ್ನ ಬಳಿ ಮತ್ತೆ ಖಂಡಿತ ಮರಳಿ ಬರುತ್ತಾರೆ ಎಂದು ನಂಬಿದ್ದು, ಸತತವಾಗಿ ಎರಡು ದಿನಗಳ ಕಾಲ ಕ್ಯೂನಲ್ಲಿ ನಿಂತು ಐಪೋನ್ 6 ಕೊಂಡಿದ್ದಾನೆ. ದೇವರು ಆತನ ಇಚ್ಛೆಯನ್ನು ಪೂರೈಸಲಿ.
* ದುಡ್ಡಿಲ್ಲದಿದ್ದರೇನಂತೆ ಐಪೋನ್ 6 ಕೊಳ್ಳುವ ಹುಚ್ಚು ಯುವಕನನ್ನು ಎಂಥ ಕೆಲಸಕ್ಕೆ ದೂಡಿದೆ ಗೊತ್ತಾ? ಆತ ತನ್ನ ಸ್ನೇಹಿತೆಯನ್ನು ಪ್ರತಿ ಗಂಟೆಗೆ 2 ಡಾಲರ್ ಲೆಕ್ಕದಂತೆ ಬಾಡಿಗೆ ನೀಡಿದ್ದಾನಂತೆ!
* ನೀವೂ ಕೊಳ್ಳಬೇಕೆಂದು ಲೆಕ್ಕ ಹಾಕುತ್ತಿದ್ದೀರಾ? ಮೊದಲು ಅದರ ಬೆಲೆ ಎಷ್ಟೆಂದು ತಿಳಿದುಕೊಳ್ಳಿ. ಭಾರತದಲ್ಲಿ ಅತ್ಯಂತ ಕಡಿಮೆಯೆಂದರೆ, ಕೇವಲ 68,500 ರು.ಗೆ ಐಫೋನ್ 6 ದೊರೆಯಲಿದೆ. ಕೊಳ್ಳುವುದೋ ಬಿಡುವುದೋ ನೀವೇ ನಿರ್ಧರಿಸಿ. ಸದ್ಯಕ್ಕೆ ಭಾರತಕ್ಕೆ ಐಫೋನ್ 6 ಇನ್ನೂ ಕಾಲಿಟ್ಟಿಲ್ಲ. [ಎಲ್ಲೆಲ್ಲಿ ಐಫೋನ್ 6 ಕೊಳ್ಳಬಹುದು]
* ಹೊಚ್ಚಹೊಸ ಐಫೋನ್ 6 ಕೈಯಿಂದ ಜಾರಿ ಬಿತ್ತೆನ್ನಿ. ವಾರಂಟಿ ಇರಲಿ ಬಿಡಲಿ ಅದರ ರಿಪೇರಿಗಾಗಿ ತೆರಬೇಕಾದ ಬೆಲೆ ತಿಳಿದರೆ ಅದರ ಸಹವಾಸಕ್ಕೇ ಹೋಗುವುದು ಬೇಡ ಎಂದು ನಿರ್ಧರಿಸುತ್ತೀರಿ. ಸ್ಕ್ರೀನ್ ಮತ್ತಿತರ ರಿಪೇರಿಗೆ ನೀವು ಕೈಹಾಕಿದರೆ ಕನಿಷ್ಠ 30 ಸಾವಿರ ರು. ಕೈಬಿಡುವದು ಖಚಿತ.
* ಹೀಗೊಂದು ಜೋಕೊಂದು ಟ್ವಿಟ್ಟರಲ್ಲಿ ಹರಿದಾಡುತ್ತಿದೆ. ಯುವತಿಯೊಬ್ಬಳು ಮಾಯಾದೀಪವನ್ನು ಉಜ್ಜಿ, ತನ್ನ ಗಂಡ ಎದ್ದಕೂಡಲೆ ದೇವರ ಫೋಟೋ ಬದಲಾಗಿ ತನ್ನನ್ನೇ ನೋಡಬೇಕೆಂದು, ಯಾವಾಗಲೂ ತನ್ನ ಬಗ್ಗೆಯೇ ದೇನಿಸುತ್ತಿರಬೇಕೆಂದು ಬೇಡಿಕೊಂಡಳಂತೆ. ಮಾಯಾದೀಪದಲ್ಲಿದ್ದ ಭೂತ ಆಕೆಯನ್ನು ಸ್ಮಾರ್ಟ್ ಫೋನಾಗಿ ಪರಿವರ್ತಿಸಿದನಂತೆ. [ವಿಶ್ವ ಕನ್ನಡ ಸಮ್ಮೇಳನಕ್ಕೊಂದು ಅಪ್ಲಿಕೇಷನ್]