ವಾದ್ರಾ ಅಕ್ರಮ ಬಯಲು ಮಾಡಿದ್ದ ಖೇಮ್ಕಾ ದೆಹಲಿಗೆ?
ನವದೆಹಲಿ,ಜು.15: ಹರ್ಯಾಣದಲ್ಲಿ ಸೋನಿಯಾ ಗಾಂಧಿ ಅಳಿಯ, ರಾಬರ್ಟ್ ವಾದ್ರಾ ಅಕ್ರಮಗಳನ್ನು ಬಯಲು ಮಾಡಿದ್ದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರಿಗೆ ಕೇಂದ್ರ ಸರ್ಕಾರದ ಹುದ್ದೆ ಲಭಿಸುವ ಸಾಧ್ಯತೆ ಇದೆ.
ಖೇಮ್ಕಾಅವರು ಕೇಂದ್ರ ಸರ್ಕಾರದ ಹುದ್ದೆ ನೀಡುವಂತೆ ನಾಗರಿಕ ಸೇವಾ ಮಂಡಳಿಗೆ ಪತ್ರ ಬರೆದಿದ್ದು, ಇವರ ಪತ್ರಕ್ಕೆ ನಾಗರಿಕ ಸೇವಾ ಮಂಡಳಿ ಒಪ್ಪಿಗೆ ಸೂಚಿಸಿದೆ ಎಂದು ಇಂಗ್ಲಿಷ್ ಸುದ್ದಿ ವಾಹಿನಿ ವರದಿ ಮಾಡಿದೆ. ಅಶೋಕ್ ಖೇಮ್ಕಾ ಅವರಿಗೆ ಕೇಂದ್ರ ಸರ್ಕಾರ ಯಾವ ಇಲಾಖೆಯ ಹುದ್ದೆ ನೀಡುತ್ತದೆ ಎನ್ನುವುದು ಇನ್ನೂ ಬಹಿರಂಗಗೊಂಡಿಲ್ಲ.
ಹರ್ಯಾಣದಲ್ಲಿ ರಾಬರ್ಟ್ ವಾದ್ರಾ ಮತ್ತು ಡಿಎಲ್ಎಫ್ ನಡುವಿನ ಭೂ ಒಪ್ಪಂದವನ್ನು ರದ್ದು ಮಾಡಿ ಭೂ ವ್ಯವಹಾರಗಳ ತನಿಖೆಗೆ ಅಶೋಕ್ ಖೇಮ್ಕಾ ಆದೇಶಿಸಿದ್ದರು.[ವಾದ್ರಾ ಅಕ್ರಮಕ್ಕೆ ಹರ್ಯಾಣ ಸಿಎಂ ಹೂಡಾ ಹಾಥ್]
ಈ ಪ್ರಕರಣದ ವಿಚಾರಣೆಗೆ ಹರ್ಯಾಣ ಸರ್ಕಾರದಿಂದ ನೇಮಕಗೊಂಡಿದ್ದ ತ್ರಿಸದಸ್ಯ ಸಮಿತಿಯು, ಐಎಎಸ್ ಅಧಿಕಾರಿ ಅಶೋಕ ಖೇಮ್ಕಾ ಅವರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವಾದ್ರಾ-ಡಿಎಲ್ಎಫ್ ನಡುವಿನ ಭೂ ಒಪ್ಪಂದ ರದ್ದುಗೊಳಿಸಿದ್ದರು ಎಂದು ವರದಿ ಸಲ್ಲಿಸುವ ಮೂಲಕ ವಾದ್ರಾರನ್ನು ಬಚಾವ್ ಮಾಡಿತ್ತು. ಖೇಮ್ಕಾ ಇಲ್ಲಸಲ್ಲದ ಆರೋಪಗಳನ್ನು ರಾಬರ್ಟ್ ವದ್ರಾ ಅವರ ಮೇಲೆ ಹೊರಿಸಿದ್ದಾರೆ ಎಂದೂ ವರದಿ ಹೇಳಿತ್ತು.[ಸದ್ದಿಲ್ಲದೆ ರಾಬರ್ಟ್ ವಾದ್ರಾ ಕಂಪನಿಗಳು ಕ್ಲೋಸ್]
ರಾಬರ್ಟ್ ವಾದ್ರಾ ಹಾಗೂ ಡಿಎಲ್ಎಫ್ ನಡುವಿನ ಭೂ ಒಪ್ಪಂದವನ್ನು ರದ್ದುಗೊಳಿಸಿದ ನಂತರ ಹರ್ಯಾಣದ ಕಾಂಗ್ರೆಸ್ ಸರ್ಕಾರ ಪದೇಪದೆ ತಮ್ಮನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿ ಖೆಮ್ಕಾ, ತಮಗೆ ಕೇಂದ್ರದಲ್ಲಿ ಹುದ್ದೆ ನೀಡಬೇಕು ಎಂದು ನೂತನ ಸರ್ಕಾರಕ್ಕೆ ಮನವಿ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮೋದಿ ನೇತೃತ್ವದ ಸರ್ಕಾರ ಖೇಮ್ಕಾ ಅವರಿಗೆ ಕೇಂದ್ರದಲ್ಲಿ ಹುದ್ದೆ ನೀಡಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.
49 ವರ್ಷದ ಖೇಮ್ಕಾ ಅವರು ಪ್ರಸ್ತುತ ಹರ್ಯಾಣದಲ್ಲಿ ಪತ್ರಾಗಾರ ಇಲಾಖೆಯ ಮಾಹಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.