ಇಬ್ಬರು ಯೋಧರು ಉಗ್ರಗಾಮಿಗಳ ಗುಂಡಿಗೆ ಬಲಿ
ಶ್ರೀನಗರ, ಆ.16 : ಜಮ್ಮು-ಕಾಶ್ಮೀರದ ಆವಂತಿಪುರ ಸಮೀಪದ ಸೈನಿಕರ ಶಿಬಿರಗಳ ಮೇಲೆ ಶನಿವಾರ ಸಂಜೆ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರಗಾಮಿಗಳ ರಕ್ತದಾಹಕ್ಕೆ ಇಬ್ಬರು ಯೋಧರು ಬಲಿಯಾಗಿದ್ದು ನಾಲ್ವರು ಗಾಯಗೊಂಡಿದ್ದಾರೆ.
ಗಡಿ ಭದ್ರತಾ ಪಡೆಯ ಸೈನಿಕರು ಶನಿವಾರ ತಮ್ಮ ಸೇನಾ ಶಿಬಿರವನ್ನು ಶ್ರೀನಗರದಿಂದ 33 ಕಿಮೀ ದೂರದಲ್ಲಿರುವ ಪುಲ್ವಾಮಾದಿಂದ ಬದಲಾಯಿಸುವ ಸಿದ್ಧತೆಯಲ್ಲಿದ್ದಾಗ ಉಗ್ರರ ಗುಂಪು ಅತ್ಯಾಧುನಿಕ ಆಯುಧಗಳಿಂದ ಗುಂಡಿನ ದಾಳಿ ಮಾಡಿದೆ. ಬಿಎಸ್ಎಫ್ನ 165ನೇ ಬೆಟಾಲಿಯ್ 'ಜಿ' ವಿಭಾಗದ ಮೇಲೆ ಉಗ್ರಗಾಮಿಳು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರ ಹೆಸರು ತಿಳಿದು ಬಂದಿಲ್ಲ. ಗಂಭೀರ ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡಿನ ದಾಳಿ ನಡೆದ ತಕ್ಷಣ ಘಟನಾ ಸ್ಥಳಕ್ಕೆ ಎಲ್ಲ ಬಿಎಸ್ಎಫ್ ಯೋಧರು ಧಾವಿಸಿದ್ದಾರೆ, ಈ ವೇಳೆ ಉಗ್ರಗಾಮಿಗಳು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದೆ. ಯೋಧರ ದಾಳಿ ಎದುರಿಸಲಾಗದೇ ಉಗ್ರಗಾಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ಹೇಳುವಂತೆ, ಉಗ್ರಗಾಮಿಗಳು ಕುಯಿಲ್ ನಲ್ಲೇ ಬಿಎಸ್ಎಫ್ ಯೋಧರ ವಾಹನದ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಎಎಸ್ಐ ಆರ್.ಯಾದವ್, ಮುಖ್ಯ ಪೇದೆ ಎಸ್.ಯಾದವ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೇದೆಗಳಾದ ಜೈ ಪ್ರಸಾದ್, ಅಮರ್ ಬಹಾದ್ದೂರ್, ಪಿ.ಸಿಂಗ್, ವಿನೋದ್ ಕುಮಾರ್ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಯಾವ ಉಗ್ರಗಾಮಿ ಸಂಘಟನೆಯೂ ಇದೂವರೆಗೆ ದಾಳಿ ಹೊಣೆ ಹೊತ್ತುಕೊಂಡಿಲ್ಲ. ಆಗಸ್ಟ್ 11ರ ನಂತರ ಇದು ಯೋಧರ ಮೇಲೆ ಉಗ್ರಗಾಮಿಗಳಿಂದ ನಡೆದ ನಾಲ್ಕನೇ ದಾಳಿಯಾಗಿದೆ. ಬಿಎಸ್ಎಫ್ ಪಡೆ ಮೇಲೆ ಇದು ಎರಡನೇ ದಾಳಿಯಾಗಿದ್ದು ಇಲ್ಲಿವರೆಗೆ ಒಟ್ಟು 6 ಜನ ಸೈನಿಕರು ಸಾವನ್ನಪ್ಪಿದ್ದು ಅನೇಕರು ಗಾಯಗೊಂಡಿದ್ದಾರೆ.