ಈ ಮುಖ್ಯಮಂತ್ರಿಗಳಿಗೆ 2014 ಮರೆಯಲಾಗದ ವರ್ಷ
ಬೆಂಗಳೂರು, ಸೆ.29: ಟೈಂ ಚೆನ್ನಾಗಿದ್ರೆ ಯಾರು ಏನು ಬೇಕಾದರೂ ಆಗಬಹುದು ಎಂಬ ಮಾತಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚಹಾ ಮಾರುವವರು ಪ್ರಧಾನಿ, ಮುಖ್ಯಮಂತ್ರಿ ಆಗಲು ಸಾಧ್ಯವಿದೆ. ಜನ ಮೆಚ್ಚಿ ಆಯ್ಕೆ ಮಾಡಿದ ಪ್ರತಿನಿಧಿಗಳು ಅಧಿಕಾರ ಬಿಟ್ಟು ಓಡಿದ ಪ್ರಸಂಗಗಳು ನಡೆದಿವೆ.
2014ರಲ್ಲಿ ಭಾರತದಲ್ಲಿ ಕೆಲವು ಮುಖ್ಯಮಂತ್ರಿಗಳ ರಾಜಕೀಯ ಜೀವನದಲ್ಲಿ ಭಾರಿ ಏರುಪೇರು ಕಂಡು ಬಂದಿದೆ. ಒಳ್ಳೆಯದೋ, ಕೆಟ್ಟದೋ ಅದರ ನಿರ್ಧಾರ ಜನರಿಗೆ ಬಿಟ್ಟದ್ದು, ಅದರೆ, 2014 ವರ್ಷದಲ್ಲಿ ಭಾರಿ ಸಂಚಲನ ಮೂಡಿಸಿದ ಭಾರತದ ಮುಖ್ಯಮಂತ್ರಿಗಳತ್ತ ಇಣುಕು ನೋಟ ಇಲ್ಲಿದೆ...
ಅರವಿಂದ್ ಕೇಜ್ರಿವಾಲ್, ದೆಹಲಿ ಮಾಜಿ ಮುಖ್ಯಮಂತ್ರಿ
ದೆಹಲಿಯ ಮಾಜಿ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಈ ವರ್ಷದಲ್ಲೇ ಜನರಲ್ಲಿ ಹೊಸ ಆಶಾ ಭಾವನೆ ಬಿತ್ತಿದ ನಾಯಕ. ಜನ ಸಾಮಾನ್ಯರೊಬ್ಬರು ಮುಖ್ಯಮಂತ್ರಿ ಪದವಿಗೇರಬಹುದು, ಜನರು ಆಯ್ಕೆ ಮಾಡಿದ ವ್ಯಕ್ತಿಗಳು ನಾವು ನಿಮ್ಮಂತೆ ಜನ ಸಾಮಾನ್ಯರು ಎಂಬ ಭಾವನೆ ಮೂಡಿಸಿದರು.
ಅದರೆ, ದೆಹಲಿ ಸಿಎಂ ಆಗಿ 49 ದಿನಗಳ ನಂತರ ಫೆಬ್ರವರಿ 14,2014ರಂದು ಸಿಎಂ ಹುದ್ದೆ ತೊರೆದರು. ಜನಲೋಕಪಾಲ್ ಮಸೂದೆಯನ್ನು ಮಂಡಿಸಲು ಅವಕಾಶ ನೀಡದ ಇಂಥ ವ್ಯವಸ್ಥೆಯಲ್ಲಿ ನಾನು ರಾಜ್ಯಭಾರ ಮಾಡಲಾರೆ ಎಂದು ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಪಟ್ಟ ಕಳಚಿ, ಸಾಮಾಜಿಕ ಕಾರ್ಯಕರ್ತನ ಟೋಪಿ ಧರಿಸಿದರು.
ನಿತೀಶ್ ಕುಮಾರ್ ಬಿಹಾರದ ಮಾಜಿ ಸಿಎಂ
ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಮೇ 17,2014ರಂದು ಮುಖ್ಯಮಂತ್ರಿ ಹುದ್ದೆ ತೊರೆದರು. ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡಿದ್ದು, ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ನಿತೀಶ್ ರಾಜೀನಾಮೆ ನಿರೀಕ್ಷಿತವಾಗಿತ್ತು.
ಅದರೆ, ಮುಖ್ಯಮಂತ್ರಿ ಪದವಿಗೆ ಹಿಂದುಳಿದ ಜಾತಿಯ ನಾಯಕರೊಬ್ಬರನ್ನು ಕೂರಿಸಿ, ಆರ್ ಜೆಡಿ ಲಾಲೂ ಪ್ರಸಾದ್ ಯಾದವ್ ಅವರ ಜೊತೆ ಸಖ್ಯ ಬೆಳೆಸಿದರು. ಅಚ್ಚರಿಯೆಂಬಂತೆ ಕಳೆದ ಉಪ ಚುನಾವಣೆಯಲ್ಲಿ ನಿತೀಶ್-ಲಾಲೂ ಮೈತ್ರಿ ಬಿಹಾರದಲ್ಲಿ ಬಿಜೆಪಿ ವಿರುದ್ಧ ಪ್ರಾಬಲ್ಯ ಮೆರೆಯಿತು.
ಕಿರಣ್ ಕುಮಾರ್ ರೆಡ್ಡಿ, ಆಂಧ್ರಪ್ರದೇಶಸ ಮಾಜಿ ಸಿಎಂ
ಆಂಧ್ರಪ್ರದೇಶ ವಿಭಜನೆ ವಿರೋಧಿಸುತ್ತಾ ಬಂದ ಕಾಂಗ್ರೆಸ್ ನಾಯಕ ಎನ್ ಕಿರಣ್ ಕುಮಾರ್ ರೆಡ್ಡಿ ಅವರು ಕೊನೆಗೆ ಪಕ್ಷದಿಂದ ಹೊರಬೀಳಬೇಕಾಯಿತು. ಅವಿಭಜಿತ ಆಂಧ್ರಪ್ರದೇಶದ ಕೊನೆ ಮುಖ್ಯಮಂತ್ರಿ ಎಂಬ ಪಟ್ಟ ಧರಿಸಿದ್ದಷ್ಟೇ ಬಂತು.. ಕಾಂಗ್ರೆಸ್ ನಿಂದ ದೂರಾಗಿ, ತನ್ನ ಶಾಸಕರಿಗೂ ಬೇಡವಾಗಿ ಹೋದ ಕಿರಣ್ ಕುಮಾರ್ ಹೊಸ ಪಕ್ಷ ಕಟ್ಟಿದರು. ಜೈ ಸಮೈಕ್ಯಾಂದ್ರ ಎಂದು ಹೆಸರಿಟ್ಟರು.
ಆದರೆ, ಆಂಧ್ರ ವಿಭಜನೆಗೊಂಡು ತೆಲಂಗಾಣಕ್ಕೆ ಚಂದ್ರಶೇಖರ್ ರಾವ್ ಮುಖ್ಯಮಂತ್ರಿಯಾದರು. ಆಂಧ್ರಪ್ರದೇಶದಲ್ಲಿ ಎನ್ ಡಿಎ ಮಿತ್ರಪಕ್ಷದ ಟಿಡಿಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಎನ್ ಚಂದ್ರಬಾಬು ನಾಯ್ಡು ಅವರು ಮತ್ತೊಮ್ಮೆ ಸಿಎಂ ಆದರು. ಕಿರಣ್ ಕುಮಾರ್ ರೆಡ್ಡಿ ಅಖಂಡ ಆಂಧ್ರದ ಕನಸು ಕನಸಾಗೇ ಉಳಿಯಿತು.
ಜೆ ಜಯಲಲಿತಾ ತಮಿಳುನಾಡಿನ ಮಾಜಿ ಸಿಎಂ
ಅಕ್ರಮ ಆಸ್ತಿ ಗಳಿಕೆ ಆರೋಪ ಹೊತ್ತು ಸುಮಾರು 18 ವರ್ಷಗಳ ಕಾನೂನು ಸಮರ ನಡೆಸಿದ ನಂತರ ಜೆ ಜಯಲಲಿತಾ ಅವರು ತಮಿಳುನಾಡಿನ ಮುಖ್ಯಮಂತ್ರಿ ತೊರೆದಿದ್ದಾರೆ. ಅವರ ಶಾಸಕ ಸ್ಥಾನವೂ ರದ್ದಾಗಿದೆ. ಸೆ.27, 2014ಕ್ಕೆ ತಮಿಳುನಾಡಿನಲ್ಲಿ ಜಯಾ ಆಳ್ವಿಕೆ ಅಂತ್ಯಗೊಂಡಿದೆ.
ಅದರೆ, ಜಯಾ ಅವರು ಬೆಂಗಳೂರಿನ ಜೈಲಿನಲ್ಲಿದ್ದರೂ ತಮಗೆ ಆಪ್ತರಾದ ಪನ್ನೀರ್ ಸೆಲ್ವಂ ಅವರನ್ನು ಮತ್ತೊಮ್ಮೆ ಸಿಎಂ ಸ್ಥಾನದಲ್ಲಿ ಕೂರಿಸಿದ್ದಾರೆ. 2014ರ ಸೆಪ್ಟೆಂಬರ್ ತಿಂಗಳಿಗಿಂತ ಮುಂಚೆ ಜಾಗತಿಕ ಮಟ್ಟದಲ್ಲಿ ಜಯಲಲಿತಾ ಬಹುದೊಡ್ಡ ಬ್ರ್ಯಾಂಡ್ ಆಗಿ ಬೆಳೆದಿದ್ದರು.
ಅಮ್ಮ ಕ್ಯಾಂಟೀನ್, ಉಪ್ಪು, ಸಿಮೆಂಟ್, ಮಿನರಲ್ ವಾಟರ್, ಮೆಡಿಕಲ್ಸ್ ಹೀಗೆ ಜನ ಸಾಮಾನ್ಯರ ಆಶೋತ್ತರಕ್ಕೆ ಜಯಲಲಿತಾ ಸ್ಪಂದಿಸುತ್ತಿರುವ ರೀತಿ ಕಂಡು ರಾಜಕಾರಣಿಗಳಷ್ಟೇ ಆಲ್ಲ, ಉದ್ಯಮಿಗಳು ಬೆರಗಾದರು.
ಪೃಥ್ವಿರಾಜ್ ಚವಾಣ್, ಮಹಾರಾಷ್ಟ್ರ ಸಿಎಂ
ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ನಡುವಿನ ಕಿತ್ತಾಟದಿಂದ ಮಹಾರಾಷ್ಟದ ಸಿಎಂ ಸ್ಥಾನವನ್ನು ಪೃಥ್ವಿರಾಜ್ ಚೌವಾಣ್ ಸೆ.26,2014ರಂದು ತೊರೆಯಬೇಕಾಯಿತು. 82 ಶಾಸಕರ ಪೈಕಿ 62 ಶಾಸಕರನ್ನು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹಿಂದಕ್ಕೆ ಕರೆಸಿಕೊಂಡ ಹಿನ್ನೆಲೆಯಲ್ಲಿ ವಿಧಿ ಇಲ್ಲದೆ ಚವಾಣ್ ಹುದ್ದೆ ತೊರೆಯಬೇಕಾಯಿತು.
ಅಕ್ಟೋಬರ್ 15ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಸೀಟು ಹಂಚಿಕೆ ವಿಷಯದಲ್ಲಿ ಎನ್ ಸಿಪಿ ಹಾಗೂ ಕಾಂಗ್ರೆಸ್ ನಡುವಿನ ತಿಕ್ಕಾಟ ಇನ್ನೂ ಮುಂದುವರೆದಿದೆ. 15 ವರ್ಷಗಳ ಕಾಲ ಮೈತ್ರಿ ಮುರಿದುಕೊಂಡ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿ, ಶಿವಸೇನಾ, ಕಾಂಗ್ರೆಸ್ ಹಾಗೂ ಎನ್ ಸಿಪಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ.
ನರೇಂದ್ರ ಮೋದಿ, ಗುಜರಾತಿನ ಮಾಜಿ ಸಿಎಂ
ಗುಜರಾತಿನ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸುವ ಕರೆ ಬಂದ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿ ಹಾಗೂ ವಡೋದರ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಜಯಸಿದರು. ಮೇ.22, 2014ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ದೇಶದ ಚುಕ್ಕಾಣಿ ಹಿಡಿದು 15ನೇ ಪ್ರಧಾನಿಯಾಗಿ ಜನಮನ ಗೆದ್ದರು.
ಏಷ್ಯಾದ ಚೀನಾ, ಭೂತಾನ್, ನೇಪಾಳ, ಜಪಾನ್ ಜೊತೆ ಉತ್ತಮ ಬಾಂಧವ್ಯ ಬೆಳೆಸಿದರು. ಸಾರ್ಕ್ ರಾಷ್ಟ್ರಗಳ ಶಕ್ತಿ ಪ್ರದರ್ಶನ ಮಾಡಿದರು. ಜನಹಿತ ಯೋಜನೆಗಳನ್ನು ಘೋಷಿಸಿದ್ದಲ್ಲದೆ, ಉದ್ಯಮಿಗಳಿಗೂ ಹೊಸ ಆಶಾಕಿರಣವಾದರು. ಅಮೆರಿಕ ಪ್ರವಾಸದಲ್ಲೂ ಸಂಚಲನ ಮೂಡಿಸುತ್ತಿರುವ ಮೋದಿ ಅವರಿಗೆ 2014 ಅವಿಸ್ಮರಣೀಯ ವರ್ಷ/