ಮೋದಿ ಪ್ರಮಾಣವಚನಕ್ಕೆ ಬಹಿಷ್ಕಾರ: ನಿರ್ಧಾರ ಸರಿಯೇ?
ಶ್ರೀಲಂಕಾ ಅಧ್ಯಕ್ಷರನ್ನು ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಿದ್ದಕ್ಕೆ ವಿರೋಧಿಸಿ ಪಕ್ಷಾತೀತವಾಗಿ ತಮಿಳುನಾಡಿನ ಎಲ್ಲಾ ಪ್ರಾದೇಶಿಕ ಪಕ್ಷಗಳು ನರೇಂದ್ರ ಮೋದಿ ಪ್ರಮಾಣವಚನಕ್ಕೆ ಬಹಿಷ್ಕಾರ ಹಾಕಿವೆ. (ಪಿಎಂಕೆ, ಎಂಡಿಎಂಕೆ ಹೊರತು ಪಡಿಸಿ)
ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ಪಡೆಯನ್ನು ಮಟ್ಟ ಹಾಕುವ ಸಮಯದಲ್ಲಿ ಶ್ರೀಲಂಕಾ ಸರಕಾರ ಅಮಾನುಷವಾಗಿ ತಮಿಳರ ಮೇಲೆ ದೌರ್ಜನ್ಯ ನಡೆಸಿತ್ತು ಎನ್ನುವುದು ತಮಿಳುನಾಡಿನ ಪಕ್ಷಗಳಿಗೆ ಮತ್ತು ತಮಿಳರಿಗೆ ಶ್ರೀಲಂಕಾದ ಮೇಲಿರುವ ಸಿಟ್ಟು.
ಶ್ರೀಲಂಕಾವನ್ನು ಆಹ್ವಾನಿಸಿದ್ದರಿಂದ ತಮಿಳರ ಭಾವನೆಗೆ ನೋವುಂಟಾಗಿದೆ ಎಂದು ದೇಶವಿಂದು ಎದುರು ನೋಡುತ್ತಿರುವ ಪ್ರಮುಖ ವಿದ್ಯಮಾನಕ್ಕೆ ತಮಿಳುನಾಡಿನ ಯಾವ ಪ್ರತಿನಿಧಿಗಳೂ ಸಾಕ್ಷಿಯಾಗತ್ತಿಲ್ಲ. (ಮೋದಿ ಪ್ರಮಾಣವಚನಕ್ಕೆ ಜಯಾ ಗೈರು)
ಚುನಾವಣೆಯ ಸಮಯದಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಮಿತ್ರಪಕ್ಷಗಳೂ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ. ತಮಿಳುನಾಡು ಪಕ್ಷಗಳ ಈ ನಿರ್ಧಾರದ ಹಿಂದೆ ಮತಬ್ಯಾಂಕ್ ಅಡಗಿದೆಯೋ ಅಥವಾ ನೈಜ ಪ್ರೇಮ ಅಡಗಿದೆಯೋ ಇಲ್ಲಿ ಅಪ್ರಸ್ತುತ.
ಸಾರ್ಕ್ ದೇಶಗಳಲ್ಲಿ ಒಂದಾಗಿರುವ ಶ್ರೀಲಂಕಾವನ್ನು ದೇಶದ ಪ್ರಮುಖ ಕಾರ್ಯಕ್ರಮಗಳಲ್ಲಿ ಆಹ್ವಾನಿಸುವಂತೆ ನರೇಂದ್ರ ಮೋದಿ ಕೂಡಾ ಆಹ್ವಾನಿಸಿದ್ದಾರೆ. ಅದರಲ್ಲಿ ಶ್ರೀಲಂಕಾ ಕೂಡಾ ಇದೆ, ಜೊತೆಗೆ ಪಾಕಿಸ್ಥಾನ ಕೂಡಾ ಇದೆ ಎನ್ನುವುದನ್ನು ತಮಿಳುನಾಡಿನ ರಾಜಕಾರಣಿಗಳು ಮರೆಯಬಾರದು.
ಶ್ರೀಲಂಕಾದ ಅಧ್ಯಕ್ಷ ರಾಜಪಕ್ಷೆ ಮತ್ತು ಪಾಕ್ ಪ್ರಧಾನಿ ಶರೀಫ್ ಸೋಮವಾರ (ಮೇ 26) ನಡೆಯಲಿರುವ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಈಗಾಗಲೇ ನವದೆಹಲಿ ತಲುಪಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಕಾರಣವಾಗಿದ್ದು ಪಾಕ್ ಬೆಂಬಲಿತ ಉಗ್ರರು, ಶ್ರೀಲಂಕಾದ ಯಾವುದೇ ಸಂಘಟನೆಗಳಲ್ಲ. ಸ್ವತಂತ್ರ ನಾಡು ಬೇಕು, ತಮ್ಮ ಭಾಷೆಗೆ ಮಾನ್ಯತೆ ಸಿಗಬೇಕೆಂದು ಹೋರಾಟ ನಡೆಸುವುದು ತಪ್ಪೆಂದು ಯಾರೂ ಹೇಳಲು ಸಾಧ್ಯವಿಲ್ಲ.
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ಎಲ್ಟಿಟಿಇ ಉಗ್ರರನ್ನು ಮಟ್ಟ ಹಾಕಲು ಐಪಿಕೆಎಫ್ (Indian Peace Keeping Force) ಪಡೆಯನ್ನು ಕಳುಹಿಸಿದಾಗಲೇ ತಮಿಳರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಆ ಎಲ್ಲಾ ವಿರೋಧವನ್ನು ಲೆಕ್ಕಿಸದೇ ರಾಜೀವ್ ಗಾಂಧಿ ಆಪರೇಶನ್ ಮುಂದುವರಿಸಿದ್ದರು. ಮುಂದೊಂದು ದಿನ LTTE ಪಡೆಗಳ ಆತ್ಮಹತ್ಯಾ ದಾಳಿಗೆ ರಾಜೀವ್ ಬಲಿಯಾದರು.
ಐಪಿಕೆಎಫ್ ಕಳುಹಿಸಲು ಕಾಂಗ್ರೆಸ್ ಸರಕಾರ ಕಾರಣ ಎಂದು ಅರಿತಿದ್ದರೂ ತಮಿಳುನಾಡಿನ ಪಕ್ಷಗಳು ಕಾಂಗ್ರೆಸ್ಸಿಗೆ ಬೆಂಬಲ ನೀಡುವುದನ್ನು ನಿಲ್ಲಿಸಲಿಲ್ಲ. ಕರುಣಾನಿಧಿ ಮುಖಂಡತ್ವದ ಡಿಎಂಕೆ ಸರಕಾರ ಎರಡು ಅವಧಿಯಲ್ಲಿ ಮನಮೋಹನ್ ಸಿಂಗ್ ಸರಕಾರಕ್ಕೆ ಯಾವ ಉದ್ದೇಶಕ್ಕಾಗಿ ಬೆಂಬಲ ನೀಡಿತ್ತು? ಕ್ಯಾಬಿನೆಟ್ ಸಚಿವ ಸ್ಥಾನವನ್ನು ಎಂಜಾಯ್ ಮಾಡಲಿಕ್ಕಾ? 2G ಅಥವಾ 3G ಎನ್ನುವ ಹಗರಣ ನಡೆಸಲಾ? ಇದೊಂದು ರೀತಿಯ ಜಾಣ ಕುರುಡುತನದ ರಾಜಕೀಯ ಅಲ್ಲವೇ?
ನಮ್ಮ ದೇಶ ಇಂದು ಅನುಭವಿಸುತ್ತಿರುವ ಭಯೋತ್ಪಾದಕರ ಚಟುವಟಿಕೆಗಳಿಗೆ ಪಾಕಿಸ್ಥಾನದ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲ, ಆ ದೇಶದ ಗುಪ್ತಚರ ಸಂಸ್ಥೆ ಐಎಸ್ಐ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಶ್ರೀಲಂಕಾದ ಜೊತೆ ಪಾಕಿಸ್ಥಾನವನ್ನು ಆಹ್ವಾನಿಸಿದ್ದಕ್ಕೆ ತಮಿಳುನಾಡಿನ ಪಕ್ಷಗಳು ವಿರೋಧ ವ್ಯಕ್ತ ಪಡಿಸಿದ್ದರೆ ಅವರ ನಿಲುವು ಒಂದು ರೀತಿಯಲ್ಲಿ ಸರಿ ಅನ್ನಬಹುದಿತ್ತು.
ಆದರೆ ತಮಿಳುನಾಡಿನ ಪಕ್ಷಗಳು ಪಾಕಿಸ್ತಾನವನ್ನು ಆಹ್ವಾನಿಸಿದ್ದಕ್ಕೆ ಪ್ರತಿಭಟಿಸಲಿಲ್ಲ, ಬಹುಷಃ ಅವರಿಗೆ ಮತ್ತೊಂದು ವೋಟ್ ಬ್ಯಾಂಕ್ ಮೇಲೆ ಕಣ್ಣಿದ್ದಿರಬಹುದು.