ಜಯಲಲಿತಾಗೆ ಅಪಶಕುನದ ಮುನ್ಸೂಚನೆ ನೀಡಿದ್ದ ಆನೆ
ಚೆನ್ನೈ, ಸೆ 27: ಅಕ್ರಮ ಆಸ್ತಿಗಳಿಗೆ ಆರೋಪದಡಿ 'ಆರೋಪಿ' ಸ್ಥಾನದಲ್ಲಿರುವ ಮೇಲುಕೋಟೆ ಮೂಲದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಆನೆಯೆಂದರೆ ಬಹಳ ಪ್ರೀತಿ.
ನಾಡಿನ ಅಧಿದೇವತೆ ಚಾಮುಂಡೇಶ್ವರಿ ಮತ್ತು ಉಡುಪಿಯ ಕೊಲ್ಲೂರು ಮೂಕಾಂಬಿಕ ದೇವಾಲಯಕ್ಕೂ ಆನೆಯನ್ನು ಈ ಹಿಂದೆ ದಾನವಾಗಿ ನೀಡಿದ್ದ ಜಯಲಲಿತಾಗೆ ವರ್ಷಗಳ ಹಿಂದೆಯೇ ಆನೆಯೊಂದು ಅಪಶಕುನದ ಮುನ್ಸೂಚನೆ ನೀಡಿತ್ತು ಎನ್ನುವ ವಿಚಾರವೂ ಈಗ ಚರ್ಚೆಯಲ್ಲಿರುವ ವಿಷಯ.
ಕಳೆದ ವರ್ಷ ಜುಲೈ ತಿಂಗಳಲ್ಲಿ ವಿಶ್ರಾಂತಿಗಾಗಿ ಜಯಲಲಿತಾ ನೀಲಗಿರೀಶ್ ತಪ್ಪಲಲ್ಲಿರುವ ಮಧುಮಲೈ ಅಭಯಾರಣ್ಯಕ್ಕೆ ಭೇಟಿ ನೀಡಿದ್ದಾಗ ಈ ಅಪಶಕುನ ಎದುರಾಗಿತ್ತು. (ಜಯಲಲಿತಾಗೆ ಜೈಲುː ಬೆಂಗಳೂರಲ್ಲಿ ಏನಾಗ್ತಿದೆ)
ಅಂದು ಜಯಾ, ಮರಿ ಆನೆಯೊಂದಕ್ಕೆ ಹಣ್ಣು ಹಂಪಲು ನೀಡಲು ಬಂದಾಗ ಆನೆ ಅದನ್ನು ಸ್ವೀಕರಿಸಲು ಕೇಳದೇ ಸೊಂಡಿಲಿನಿಂದ ದೂರತಳ್ಳಿತ್ತು. ಅಲ್ಲದೇ ಜಯಾ ಮೇಲೆ ದಾಳಿಗೆ ಮುಂದಾಗಿತ್ತು.
ಈ ಮರಿ ಆನೆಯನ್ನು ಜಯಲಲಿತಾ ಶ್ರೀರಂಗಂ ದೇವಾಲಯಕ್ಕೆ ದಾನವಾಗಿ ನೀಡಿದ್ದರು ಎನ್ನುವುದು ವಿಶೇಷ. ಈ ಆನೆಯನ್ನು ತರಬೇತಿಗಾಗಿ ಈ ಅಭಯಾರಣ್ಯಕ್ಕೆ ಕರೆತರಲಾಗಿತ್ತು.
ಶ್ರೀರಂಗಂ ದೇವಾಲಯದ ರಂಗನಾಥಸ್ವಾಮಿ ಜಯಲಲಿತಾ ಅವರ ಮನೆದೇವರು. ಹಾಗಾಗಿ, ಶ್ರೀರಂಗಂ ದೇವಾಲಯದ ಆನೆಯ ಮೂಲಕ ದೇವರು ಜಯಲಲಿತಾ ಅವರಿಗೆ ಅಪಶಕುನದ ಮುನ್ಸೂಚನೆ ನೀಡಿದ್ದರೆಂದೇ ತಮಿಳುನಾಡಿನಲ್ಲಿ ವ್ಯಾಪಕ ಚರ್ಚೆವಾಗುತ್ತಿದೆ.