ಶಂಕರಾಚಾರ್ಯ ಸ್ವರೂಪಾನಂದರ ಮೇಲೆ ಎಫ್ಐಆರ್
ನವದೆಹಲಿ, ಜೂ.25: 'ಶಿರಡಿ ಸಾಯಿಬಾಬಾ ದೇವರಲ್ಲ, ಅವರೊಬ್ಬ ಮಾನವ ಅವರನ್ನು ಅರಾಧಿಸಬೇಡಿ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ದ್ವಾರಕಾಪೀಠದ ಶಂಕರಾಚಾರ್ಯ ಸ್ವರೂಪಾನಂದ ಅವರ ಮೇಲೆ ಎಫ್ ಐಆರ್ ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಸ್ವರೂಪಾನಂದ ಸರಸ್ವತಿ ಬೆಂಬಲಿಸಿ ಅನೇಕ ಸಾಧು ಸಂತರು ಮೌನ ಪ್ರತಿಭಟನೆ ನಡೆಸಿದ್ದಾರೆ.
ಸಾಯಿಬಾಬಾ ದೇವರಲ್ಲ ಎಂದಿರುವ ಶಂಕರಾಚಾರ್ಯ ವಿರುದ್ಧ ಶಿರಡಿಯಲ್ಲಿ ಸಾಯಿಭಕ್ತರು ಧಾರ್ಮಿಕ ಭಾವನೆಗಳಿಗೆ ಅಪಚಾರ ಎಸಗಿದ ಕೇಸು ದಾಖಲಿಸಿದ್ದಾರೆ. ಆದರೆ, ಸ್ವರೂಪಾನಂದ ಅವರು ಯಾವುದೇ ವ್ಯತಿರಿಕ್ತ ಹೇಳಿಕೆ ನೀಡಿಲ್ಲ ಅವರ ಮೇಲಿನ ಎಫ್ ಐಆರ್ ರದ್ದುಗೊಳಿಸಬೇಕು ಎಂದು ಅಖಿಲ ಭಾರತ ದಂಡಿ ಮಹಾಸಭಾದ ಕಾರ್ಯದರ್ಶಿ ಸ್ವಾಮಿ ಈಶ್ವರಾನಂದ ಆಗ್ರಹಿಸಿದ್ದಾರೆ.[ಹಿಂದೂ ದೇವತೆಗಳ ಅವಹೇಳನ ಮಾಡದಿದ್ರೆ...]
ವಾರಣಾಸಿಯಲ್ಲಿ ಶಂಕರಾಚಾರ್ಯ ವಿರುದ್ಧ ಪ್ರತಿಭಟನೆಗಳು ನಡೆದಿವೆ. ವಿವಿಧೆಡೆಗಳಲ್ಲಿ ಸಾಯಿ ಭಕ್ತರು ಶಂಕರಾಚಾರ್ಯ ಪ್ರತಿಕೃತಿಗಳನ್ನು ಸುಟ್ಟು ಪ್ರತಿಭಟಿಸಿದ್ದಾರೆ. ಅಭಿಷೇಕ್ ಭಾರ್ಗವ ಎಂಬ 23 ವರ್ಷ ವಿದ್ಯಾರ್ಥಿ ಸ್ವರೂಪನಂದರ ವಿರುದ್ಧ Judicial Magistrate First Class (ಜೆಎಫ್ಎಫ್ಸಿ) ನಲ್ಲಿ ಕೇಸು ದಾಖಲಿಸಿದ್ದು, ಮುಂದಿನ ವಿಚಾರಣೆ ಆಗಸ್ಟ್ 20ರಂದು ನಡೆಯಲಿದೆ ಎಂದು ಅಭಿಷೇಕ್ ಪರ ವಕೀಲ ಶಂಕರ್ ಭಾರ್ಗವ್ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 295 ಎ( ಧಾರ್ಮಿಕ ಭಾವನೆಗಳಿಗೆ ಪ್ರಚೋದನೆ), 298(ಧಾರ್ಮಿಕ ಭಾವನೆಗೆ ಘಾಸಿ) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಿರಡಿಯಲ್ಲದೆ, ಇಂದೋರ್ ನಲ್ಲೂ ಕೇಸು ದಾಖಲಾಗಿರುವ ಸುದ್ದಿ ಬಂದಿದೆ.
ಆದರೆ, ಇದಕ್ಕೆ ಅಂಜದ ಶಂಕರಾಚಾರ್ಯ ಸಾಯಿಬಾಬಾ ಮೇಲಿನ ದಾಳಿಯನ್ನು ಮುಂದುವರಿಸಿದ್ದು, ಶಿರಡಿ ಸಾಯಿಬಾಬಾರನ್ನು ನಂಬುವವರು ಶ್ರೀರಾಮನನ್ನು ಆರಾಧಿಸಬಾರದು, ಗಂಗಾ ನದಿಯಲ್ಲಿ ಸ್ನಾನ ಮಾಡಬಾರದು ಮತ್ತು ಹರ ಹರ ಮಹಾದೇವ ಮಂತ್ರ ಜಪಿಸಬಾರದು ಎಂದು ಹೇಳಿರುವ ಸುದ್ದಿ ಬಂದಿದೆ.[ಶಿರಡಿ ಸಾಯಿಬಾಬಾ ದೇವರಲ್ಲ; ಅವರನ್ನು ನಂಬಬೇಡಿ]