ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದವರಾರು?
ನವದೆಹಲಿ, ಜೂ 5: ಗುರುವಾರದ (ಜೂ 5) ಲೋಕಸಭಾ ಅಧಿವೇಶನ ಹಲವು ಭಾಷಾ ವೈವಿಧ್ಯತೆಗಳಿಗೆ ಸಾಕ್ಷಿಯಾಯಿತು. ಹಲವು ಸಂಸದರು ಮತ್ತು ಸಚಿವರು ತಮ್ಮ ಮಾತೃ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಮೂವರು ಬಿಜೆಪಿ ಸಚಿವರು ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಇಂದಿನ ಅಧಿವೇಶನದ ಹೈಲೈಟ್ಸ್.
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮತ್ತು ಜನಸಂಪನ್ಮೂಲ ಸಚಿವೆ ಉಮಾಭಾರತಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ವ್ಯಾಪಕ ಪ್ರಶಂಸೆಗೆ ಒಳಗಾಯಿತು.
ಜಗತ್ತಿನ ಎಲ್ಲಾ ಭಾಷೆಗಳಿಗೆ ತಾಯಿ ಎಂದೇ ನಂಬಲಾಗಿರುವ 'ದೇವ ಭಾಷೆ'ಸಂಸ್ಕೃತದಲ್ಲಿ ಮೂವರು ಸಚಿವರು ಪ್ರಮಾಣವಚನ ಸ್ವೀಕರಿಸಿ ವಿಭಿನ್ನತೆ ಮೆರೆದಿದ್ದು ಸಾಮಾಜಿಕ ತಾಣದಲ್ಲಿ ಭಾರೀ ಸದ್ದನ್ನು ಮಾಡಿತು. (ಸುಮಿತ್ರಾ ಮಹಾಜನ್ ಲೋಕಸಭೆ ಸ್ಪೀಕರ್)
ನೂರಾರು ಮಹಾಕವಿಗಳು, ದಾರ್ಶನಿಕರು ಸಂಸ್ಕೃತ ಭಾಷೆಯನ್ನು ಸಮೃದ್ದಿಗೊಳಿಸಿದ್ದಾರೆ. ಈ ಮೂವರು ಸಚಿವರು ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಿದ್ದಾರೆಂದು ಸಾಮಾಜಿಕ ತಾಣದಲ್ಲಿ ಜನರು ಶಹಬ್ಬಾಸ್ ಗಿರಿ ನೀಡಿದ್ದಾರೆ.
ಮೂವರು ಸಚಿವರಲ್ಲದೇ, ರಾಜ್ಯದ ಉತ್ತರಕನ್ನಡ ಕ್ಷೇತ್ರದ ಸಂಸದ ಅನಂತ ಕುಮಾರ್ ಹೆಗ್ಡೆ ಕೂಡಾ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಈ ಮೂವರೂ ಸಂಸ್ಕೃತದ ಜ್ಞಾನ ಹೊಂದಿದ್ದು, ತಮ್ಮ ಶೈಕ್ಷಣಿಕ ಅವಧಿಯಲ್ಲಿ ಸಂಸ್ಕೃತವನ್ನು ಒಂದು ಭಾಷೆಯನ್ನಾಗಿ ಆಯ್ಕೆಮಾಡಿಕೊಂಡಿದ್ದರು.
ಕರ್ನಾಟಕದ ಮೂವರು ಸಚಿವರು (ಸದಾನಂದಗೌಡ, ಅನಂತಕುಮಾರ್, ಸಿದ್ದೇಶ್ವರ್) ಮತ್ತು ಮಾಜಿ ಪ್ರಧಾನಿ ದೇವೇಗೌಡ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದಾಗ ರಾಜ್ಯದ ಎಲ್ಲಾ ಸಂಸದರು ಮೇಜು ತಟ್ಟಿ ಹರ್ಷ ವ್ಯಕ್ತ ಪಡಿಸಿದರು.
'ಮಾ ನಿಷಾದ ಪ್ರತಿಷ್ಟಾಂ ತ್ವಮಗಮಃ ಶಾಶ್ವತೀ ಸಮಾಃ ಯತ್ಕ್ರೌಂಚ ಮಿಧುನಾಥ್ ಏಕಮವಧೀಹಿ ಕಾಮಮೋಹಿತಂ" ಇದು ವಾಲ್ಮೀಕಿ ಮಹರ್ಷಿಗಳ ಬಾಯಿಯಿಂದ ಬಂದ ಮತ್ತು ಸಂಸ್ಕೃತದಲ್ಲಿ ಹುಟ್ಟಿದ ಮೊದಲ ಶ್ಲೋಕ.