ದೇಶದಲ್ಲಿ ಅತ್ಯಾಚಾರ ನಿಲ್ಲಬೇಕಾದರೆ ಶೌಚಾಲಯ ಕಟ್ಟಿಸಿ
ನವದೆಹಲಿ, ಜೂ 5: ದೇಶದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ದೇಶದಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದೇ ಇರುವುದು ಪ್ರಮುಖ ಕಾರಣವೆಂದು ಸುಲಭ್ ಇಂಟರ್ನ್ಯಾಷನಲ್ ಸಂಸ್ಥಾಪಕ ಡಾ. ಬಿಂದೇಶ್ವರ್ ಪಾಠಕ್ ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಪಾಠಕ್, ದೇಶದ ಹಲವಾರು ಹಳ್ಳಿಗಳಲ್ಲಿ ಶೌಚಾಲಯಕ್ಕೆ ಬಯಲು ಪ್ರದೇಶವನ್ನೇ ಅವಲಂಬಿಸಿ ಕೊಂಡಿದ್ದಾರೆ. ರಾತ್ರಿಯ ವೇಳೆಯೂ ಮಹಿಳೆಯರು ಹೊರಗೆ ಹೋಗಬೇಕಾಗಿರುವುದರಿಂದ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ಪತ್ರವನ್ನು ಬರೆದಿರುವ ಪಾಠಕ್, ಮನೆಯೊಳಗೆ ಶೌಚಾಲಯದ ವ್ಯವಸ್ಥೆ ಇದ್ದರೆ ಒಂದು ಹಂತದ ತನಕ ಅತ್ಯಾಚಾರ ಪ್ರಕರಣಕ್ಕೆ ಕಡಿವಾಣ ಹಾಕಬಹುದು. ಅಲ್ಲದೇ, ರಾತ್ರಿಯ ವೇಳೆ ಮಹಿಳೆಯರು ಹೊರಗೆ ಹೋಗುವುದನ್ನು ತಪ್ಪಿಸಬಹುದು. (ರೇಪ್ ಮಾಡಿ ಯುವತಿಯರನ್ನು ಮರಕ್ಕೆ ನೇಣುಹಾಕಿದರು)
ದೇಶದ ನೈರ್ಮಲ್ಯ ಯೋಜನೆಗೆ ಕೇಂದ್ರ ಸರಕಾರ ಮೀಸಲಿಟ್ಟ ಹಣವನ್ನು ಕೂಡಲೇ ರಾಜ್ಯಗಳಿಗೆ ಹಂಚಬೇಕು. ಜೊತೆಗೆ ಈ ಯೋಜನೆಗೆ ಇನ್ನೂ ಹೆಚ್ಚಿನ ಹಣವನ್ನು ಬಜೆಟಿನಲ್ಲಿ ಮೀಸಲಿಡಿ ಎಂದು ಪಾಠಕ್, ಮೋದಿಯವರಿಗೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹದಿಹರೆಯದ ಇಬ್ಬರು ಸಹೋದರರಿಯರ ಸಾಮೂಹಿಕ ಅತ್ಯಾಚಾರ ನಡೆದ ಉತ್ತರಪ್ರದೇಶದ ಬದೌನ್ ನಲ್ಲಿ ಮಾತನಾಡುತ್ತಿದ್ದ ಪಾಠಕ್, ಈ ಪ್ರದೇಶದ ಎಲ್ಲಾ ಮನೆಗಳಲ್ಲೂ ಶೌಚಾಲಯ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದ್ದೇವೆಂದು ಹೇಳಿದ್ದಾರೆ.