ಎರಡೇ ದಿನದಲ್ಲಿ ಮೋದಿ ಸರಕಾರದಲ್ಲಿ ಇದೇನು ಅಪಸ್ವರ?
ನವದೆಹಲಿ, ಮೇ 28: ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಎರಡೇ ದಿನದಲ್ಲಿ NDA ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಬಿಜೆಪಿ ನಂತರ ಮೈತ್ರಿಕೂಟದ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಶಿವಸೇನೆ, ಸಂಪುಟ ದರ್ಜೆ ಸಚಿವ ಸ್ಥಾನಮಾನದ 'ಬಟವಾಡೆ' ವಿಚಾರದಲ್ಲಿ ಮೋದಿ ವಿರುದ್ದ ಕೋಪಿಸಿಕೊಂಡಿದೆ.
ಮೋದಿಗೆ ಆತ್ಮೀಯರೂ ಆಗಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ NDA ಮೈತ್ರಿಕೂಟದ ಎರಡನೇ ಅತಿದೊಡ್ಡ ಪಕ್ಷ. ಆದಾಗ್ಯೂ, ಮೋದಿ ಸಂಪುಟದಲ್ಲಿ ಪ್ರಮುಖವಲ್ಲದ ಕ್ಯಾಬಿನೆಟ್ ಸಚಿವ ಸ್ಥಾನ ನೀಡಿರುವುದೇ ಶಿವಸೇನೆಯ ಕೋಪಕ್ಕೆ ಕಾರಣ.
ಡಬಲ್ ಹ್ಯಾಟ್ರಿಕ್ ಸಾಧಿಸಿರುವ ಶಿವಸೇನೆಯ ರಾಯಗಢ ಕ್ಷೇತ್ರದ ಸಂಸದ ಅನಂತ ಗೀತೆ ಅವರಿಗೆ ಭಾರೀ, ಮಧ್ಯಮ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಸ್ಥಾನವನ್ನು ಹಂಚಲಾಗಿತ್ತು.
ಆದರೆ ಕಾಟಾಚಾರಕ್ಕೆ ಯಾವುದೋ ಒಂದು ಸಚಿವ ಸ್ಥಾನ ನೀಡಲಾಗಿದೆ ಎಂದು ಸಂಸದ ಅನಂತ ಗೀತೆ ಪ್ರಮಾಣವಚನ ಸ್ವೀಕರಿಸಿದ್ದರೂ ಈಗ ಖಾತೆ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ.
ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ, ಅನಂತ ಗೀತೆಯನ್ನು ಭೇಟಿ ಮಾಡಿದ್ದು, ಮಹಾರಾಷ್ಟ್ರದಲ್ಲಿನ ತಮ್ಮ ಇತರ ಬೆಂಬಲಿಗ ಪಕ್ಷಗಳ ಜೊತೆ ಮಂಗಳವಾರ (ಮೇ 28) ಮಾತುಕತೆ ನಡೆಸಿದ್ದಾರೆ.
ತಾಜಾ ಬೆಳವಣಿಗೆ: ಪ್ರಧಾನಿ ನರೇಂದ್ರ ಮೋದಿ ಬುಧವಾರ (ಮೇ 28) ಬೆಳಗ್ಗೆ ಉದ್ಧವ್ ಠಾಕ್ರೆ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿ, ವಿವಾದಕ್ಕೆ ಮಂಗಳ ಹಾಡಿದ್ದಾರೆ. ಸಂಸದ ಅನಂತ ಗೀತೆ ಬುಧವಾರ ಖಾತೆಯನ್ನು ವಹಿಸಿಕೊಂಡಿದ್ದು, ಮುಂದಿನ ಕೆಲವು ವಾರಗಳಲ್ಲಿ ಶಿವಸೇನೆಗೆ ಎರಡು ರಾಜ್ಯ ಖಾತೆಯ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಶಿವಸೇನೆ ಬಯಸಿದ್ದ ಸಚಿವ ಸ್ಥಾನ ಎಷ್ಟು?
ರಾಮದಾಸ್ ಅಥವಾಳೆ
NDA ಮೈತ್ರಿಕೂಟದ ಇನ್ನೊಂದು ಅಂಗಪಕ್ಷವಾದ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಸಭಾ ಸದಸ್ಯ ರಾಮದಾಸ್ ಅಥವಾಳೆ ಕೂಡಾ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಇವರಿಗೆ ಸಚಿವ ಸ್ಥಾನಕ್ಕಾಗಿ ಭಾರೀ ಲಾಬಿ ನಡೆಸಲಾಗಿತ್ತು. ಆದಾಗ್ಯೂ, ಅಥವಾಳೆಗೆ ಸಚಿವ ಸ್ಥಾನ ನೀಡದೇ ಇರುವುದು ಮೈತ್ರಿಕೂಟದಲ್ಲಿ ಸಣ್ಣ ಬಿರುಕಿಗೆ ಕಾರಣವಾಗಿದೆ. (ಚಿತ್ರದಲ್ಲಿ ರಾಮದಾಸ್ ಅಥವಾಳೆ)
ಶಿವಸೇನೆ ಬಯಸಿದ್ದೆಷ್ಟು?
ಹದಿನೆಂಟು ಸಂಸದರನ್ನು ಹೊಂದಿರುವ ಶಿವಸೇನೆ ಕನಿಷ್ಠ ನಾಲ್ಕರಿಂದ ಐದು ಸಚಿವ ಸ್ಥಾನದ ನಿರೀಕ್ಷೆಯಲ್ಲಿತ್ತು. ಜೊತೆಗೆ ತಾನು ಬಯಸುವ ಎರಡು ರಾಜ್ಯದ ರಾಜ್ಯಪಾಲರ ಸ್ಥಾನವನ್ನು ಬಯಸಿತ್ತು. ಆದರೆ ಮೋದಿ ಕೇವಲ ಒಂದು ಸ್ಥಾನ ನೀಡಿರುವುದರಿಂದ ಶಿವಸೇನೆ ತೀವ್ರ ನಿರಾಶೆಗೆ ಒಳಗಾಗಿದೆ. (ಚಿತ್ರದಲ್ಲಿ ಸಂಸದ ಅನಂತ ಗೀತೆ)
ತೆಲುಗುದೇಶಂ
ತೆಲುಗುದೇಶಂ ಹದಿನಾರು ಸಂಸದರನ್ನು ಹೊಂದಿದೆ. ಆದರೂ ಟಿಡಿಪಿ ಸಂಸದ ಅಶೋಕ್ ಗಜಪತಿ ರಾಜು ಅವರಿಗೆ ಪ್ರಭಾವಿ ನಾಗರಿಕ ವಿಮಾನಯಾನ ಖಾತೆಯನ್ನು ನೀಡಲಾಗಿದೆ ಮತ್ತು RLSP ಪಕ್ಷದ ಉಪೇಂದ್ರ ಕುಶ್ವಾಹ ಅವರಿಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ನಿರ್ಮಲೀಕರಣ ಖಾತೆಯನ್ನು ನೀಡಿರುವುದು ಶಿವಸೇನೆಯ ಸಿಟ್ಟಿಗೆ ಇನ್ನೊಂದು ಕಾರಣ.
ಅಟಲ್ ಸರಕಾರದಲ್ಲಿ
ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಶಿವಸೇನೆಗೆ ವಿದ್ಯುತ್, ಹಣಕಾಸು ರಾಜ್ಯ ಸಚಿವ ಸ್ಥಾನದ ಜೊತೆ ಒಟ್ಟು ಮೂರು ಸ್ಥಾನ ನೀಡಲಾಗಿತ್ತು. ಪಕ್ಷದ ಸಂಸದ ಮನೋಹರ್ ಜೋಷಿ ಲೋಕಸಭೆಯ ಸ್ಪೀಕರ್ ಕೂಡಾ ಆಗಿದ್ದರು. ಈಗ 18 ಸಂಸದರನ್ನು ಹೊಂದಿದ್ದರೂ ಕೇವಲ ಒಂದು ಸಚಿವ ಸ್ಥಾನ ನೀಡಿರುವುದು ಶಿವಸೇನೆಗೆ ನಿರಾಶೆ ತಂದಿದೆ.
ಮೋದಿ ಭೇಟಿ
ಬುಧವಾರ (ಮೇ 28) ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟೀಯಾಗಿ ತಮ್ಮ ಬೇಡಿಕೆಗಳನ್ನು ಮಂಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.