ಸಾಯಿಬಾಬಾ ಲೇವಡಿ: ಅಖಾಡಕ್ಕಿಳಿದ ನಾಗಸಾಧುಗಳು
ನವದೆಹಲಿ, ಜು 4: ಶಿರಡಿ ಬಾಬಾ ವಿರುದ್ದ ಲೇವಡಿ ಮಾಡುವ ಹೇಳಿಕೆಯನ್ನು ಮುಂದುವರಿಸಿರುವ ದ್ವಾರಕಾ ಪೀಠದ ಶ್ರೀಗಳು, ಮಾಂಸ ತಿನ್ನುವ ಬಾಬಾ ದೇವರೇ ಅಲ್ಲ ಎಂದು ಮತ್ತೆ ಜರಿದಿದ್ದಾರೆ. ಈ ಮಧ್ಯೆ, ಶ್ರೀಗಳ ಬೆಂಬಲಕ್ಕೆ ನಾಗಸಾಧುಗಳು ನಿಂತಿದ್ದು ವಿವಾದ ತಾರಕಕ್ಕೇರಿದೆ.
ಶಿರಡಿಬಾಬಾ ಭಕ್ತರು ಈ ಕೂಡಲೇ ದ್ವಾರಕಾಪೀಠದ ಸ್ವರೂಪಾನಂದ ಸರಸ್ವತಿ ವಿರುದ್ದ ಕಿಡಿಕಾರುವುದನ್ನು ನಿಲ್ಲಿಸಬೇಕು. ಇದೇ ರೀತಿ ಶ್ರೀಗಳನ್ನು ಅವಮಾನಿಸುವುದನ್ನು ಮುಂದುವರಿಸಿದರೆ ನಾವು ಬೀದಿಗೆ ಇಳಿಯಬೇಕಾಗುತ್ತದೆ ಎಂದು ನಾಗಸಾಧುಗಳು ಎಚ್ಚರಿಸಿದ್ದಾರೆ.
ಮಾಂಸ ತಿನ್ನುತ್ತಿದ್ದ ಸಾಯಿಬಾಬಾ ದೇವರಾಗಲು ಹೇಗೆ ಸಾಧ್ಯ? ಮುಸ್ಲಿಂ ಧರ್ಮೀಯನವನಾಗಿದ್ದ ಬಾಬಾ ಅಲ್ಲಾಹ್ ನನ್ನು ಪೂಜಿಸುತ್ತಿದ್ದ. ನಾವು ಹಿಂದೂಗಳು ಬಾಬಾನನ್ನು ಪೂಜಿಸುವುದು ತಪ್ಪು ಎಂದು 90ರ ಹರೆಯದ ದ್ವಾರಕಾಪೀಠದ ಶ್ರೀಗಳು ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. (ಶಂಕರಾಚಾರ್ಯ ಸ್ವರೂಪಾನಂದರ ಮೇಲೆ ಎಫ್ಐಆರ್)
ನಾವು ಕೇವಲ ಐದು ದೇವರುಗಳನ್ನು ಭಗವಂತ ಎಂದು ಒಪ್ಪಿಕೊಳ್ಳುತ್ತೇವೆ. ಅದು ಬಿಟ್ಟು ಎಲ್ಲರನ್ನೂ ದೇವರೆಂದು ಪೂಜಿಸಲು ಸಾಧ್ಯವಿಲ್ಲ ಎಂದು ಶಿರಡಿಬಾಬಾ ಭಕ್ತರ ನಂಬಿಕೆಗೆ ಶ್ರೀಗಳು ಸವಾಲೆಸೆದಿದ್ದಾರೆ.
ಜನರಿಗೆ ತಮಗಿಷ್ಟ ಬಂದಂತೆ ಪೂಜಿಸುವ ಸ್ವಾತಂತ್ರ್ಯವಿದೆ. ಶಿರಡಿಬಾಬಾ ತನ್ನನ್ನು ದೇವರೆಂದು ಬಿಂಬಿಸಿಕೊಳ್ಳಲು ಹೊರಟಿದ್ದು ನಮ್ಮ ಆಕ್ಷೇಪಕ್ಕೆ ಕಾರಣವೆಂದು ಶ್ರೀಗಳು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಆಖಾಡಕ್ಕಿಳಿದ ನಾಗಾಸಾಧುಗಳು
ನಮ್ಮ ಹಿರಿಯ ಶ್ರೀಗಳ ವಿರುದ್ದ ಅವಹೇಳನಕಾರಿ ಮಾತನಾಡುವುದನ್ನು ಬಾಬಾ ಅನುಯಾಯಿಗಳು ನಿಲ್ಲಿಸಬೇಕು. ಇದೊಂದು ಧರ್ಮಯುದ್ದ. ಅವರು ಇದೇ ರೀತಿ ಮುಂದುವರಿದರೆ ನಾವು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ನಾಗಾಸಾಧುಗಳು ಎಚ್ಚರಿಕೆ ನೀಡಿದ್ದಾರೆ.
ಸ್ವಾಮಿ ನರೇಂದ್ರಗಿರಿ ಎಚ್ಚರಿಕೆ
ಬಾಬಾ ಭಕ್ತರು ಶ್ರೀಗಳ ವಿರುದ್ದ ದಾಖಲಸಿರುವ ಪ್ರಕರಣಗಳನ್ನು ಇನ್ನೆರಡು ದಿನಗಳಲ್ಲಿ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ನಾಗಾಸಾಧುಗಳು ಅಖಾಡಕ್ಕೆ ಇಳಿಯುತ್ತಾರೆ. ಅವರು ಈ ಸಮಸ್ಯೆಗಳಿಗೆ ತಮ್ಮದೆ ಶೈಲಿಯಲ್ಲಿ ಪರಿಹಾರ ಕಂಡುಕೊಳ್ಳಲಿದ್ದಾರೆಂದು ಭಾಗಂಬಾರಿ ಮಠದ ಶ್ರೀಗಳು ಮತ್ತು ಅಖಾರ ಪರಿಷತ್ತಿನ ಸದಸ್ಯರೂ ಆಗಿರುವ ಸ್ವಾಮಿ ನರೇಂದ್ರಗಿರಿ ಎಚ್ಚರಿಕೆ ನೀಡಿದ್ದಾರೆ.
ಶ್ರೀಗಳ ವಿರುದ್ದ ಎಫ್ ಐ ಆರ್
ಬಾಬಾ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ದ್ವಾರಕಾಪೀಠದ ಶ್ರೀಗಳ ವಿರುದ್ದ ಎಫ್ ಐ ಆರ್ ದಾಖಲಿಸಬೇಕೆಂದು ಕೋರಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಅದರ ವಿಚಾರಣೆ ಶುಕ್ರವಾರ (ಜು 4) ಬರಲಿದೆ. ಲಕ್ನೋ ಸಾಯಿ ದೇಗುಲ ಈ ಅರ್ಜಿ ಸಲ್ಲಿಸಿತ್ತು. ಜೈಪುರದಲ್ಲೂ ಶ್ರೀಗಳ ವಿರುದ್ದ ಪ್ರಕರಣ ದಾಖಲಾಗಿದೆ.
ನಾನೇನು ಅವರನ್ನು ಬೆಂಬಲಿಸಲು ಕೋರಿಲ್ಲ
ನಾಗಾಸಾಧುಗಳು ತಮ್ಮ ಬೆಂಬಲಕ್ಕೆ ನಿಂತಿರುವ ಬಗ್ಗೆ ಪ್ರತಿಕ್ರಯಿಸುತ್ತಾ ಮಾತನಾಡುತ್ತಿದ್ದ ದ್ವಾರಕಾಪೀಠದ ಶ್ರೀಗಳು, ನಾನೇನೂ ಅವರನ್ನು ಬೆಂಬಲಿಸುವಂತೆ ಕೋರಿಲ್ಲ. ಅವರಾಗಿಯೇ ನಮ್ಮ ಬೆಂಬಲಕ್ಕೆ ಬಂದಿದ್ದಾರೆ. ಇದಕ್ಕೆ ನಾವು ವಿರೋಧ ವ್ಯಕ್ತ ಪಡಿಸುವುದಿಲ್ಲ ಎಂದು ಶ್ರೀಗಳು ಹೇಳಿದ್ದಾರೆ.
ಕಾಂಗ್ರೆಸ್ ಅಣತಿಯಂತೆ ಶ್ರೀಗಳು
ದ್ವಾರಕಾಪೀಠದ ಶ್ರೀಗಳು ಕಾಂಗ್ರೆಸ್ ಪಕ್ಷದ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎನ್ನುವ ಆರೋಪ ಈ ಹಿಂದೆ ಕೂಡಾ ಇತ್ತು. ಬಾಬಾ ಲೇವಡಿಯ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ ಎನ್ನುವ ಆರೋಪಕ್ಕೆ ಉತ್ತರಿಸುತ್ತಾ, ನಾನೇನು ರಾಜಕೀಯ ವ್ಯಕ್ತಿಯಲ್ಲ. ಈ ಆರೋಪ ನಿರಾಧಾರವೆಂದು ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.