ಕರ್ನಾಟಕದ ರಾಜ್ಯಪಾಲರು ಯಾರು: ಕುತೂಹಲಕ್ಕೆ ತೆರೆ?
ನವದೆಹಲಿ/ಬೆಂಗಳೂರು, ಜು 5: ತೆರವಾಗಿರುವ ಕರ್ನಾಟಕ ರಾಜ್ಯಪಾಲರ ಹುದ್ದೆಗೆ ಯಾರು ಆಯ್ಕೆಯಾಗಬಹುದು ಎನ್ನುವ ಕುತೂಹಲದ ರೇಸಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ.
ಜೂನ್ 29ರಂದು ನಿವೃತ್ತರಾದ ಎಚ್ ಆರ್ ಭಾರದ್ವಾಜ್ ಅವರ ಜಾಗಕ್ಕೆ ಕೇರಳದ ಹಿರಿಯ ಬಿಜೆಪಿ ನಾಯಕ ಓ ರಾಜಗೋಪಲ್ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ದೆಹಲಿ ಮೂಲಗಳಿಂದ ತಿಳಿದು ಬಂದಿದೆ.
ಲೋಕಸಭೆಯ ಬಜೆಟ್ ಅಧಿವೇಶನಕ್ಕೆ ಮುನ್ನ ವಿವಿಧ ರಾಜ್ಯಗಳ ರಾಜ್ಯಪಾಲರ ಹುದ್ದೆಗೆ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಈಗಾಗಲೇ ಹೇಳಿಕೆ ನೀಡಿದ್ದಾರೆ. (ಭಾರದ್ವಾಜ್ ಮತ್ತು ವಿವಾದಗಳ ಹಿನ್ನೋಟ)
ಕಳೆದ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜಗೋಪಾಲ್, ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಶಶಿ ತರೂರು ವಿರುದ್ದ ಕಡಿಮೆ ಅಂತರದ ಸೋಲನ್ನು ಅನುಭವಿಸಿದ್ದರು.
ನರೇಂದ್ರ ಮೋದಿ ಸರಕಾರ ರಾಜಗೋಪಾಲ್ ಸೇರಿ ಹಲವು ಹಿರಿಯ ಬಿಜೆಪಿ ಮುಖಂಡರ ಹೆಸರನ್ನು ನಾನಾ ರಾಜ್ಯದ ರಾಜ್ಯಪಾಲರ ಹುದ್ದೆಗೆ ನೇಮಕ ಮಾಡಿ ರಾಷ್ಟ್ರಪತಿಗಳ ಅನುಮೋದನೆಗೆ ಈಗಾಗಲೇ ಕಳುಹಿಸಿದೆ ಎಂದು ಉನ್ನತ ಮೂಲಗಳಿಂದ ವರದಿಯಾಗಿದೆ.
ಕರ್ನಾಟಕದ ರಾಜ್ಯಪಾಲರ ಹುದ್ದೆಗೆ ಹಿರಿಯ ಬಿಜೆಪಿ ಮುಖಂಡರಾದ ವಿ ಕೆ ಮಲ್ಹೋತ್ರ ಮತ್ತು ಯಶವಂತ್ ಸಿನ್ಹಾ ಅವರ ಹೆಸರೂ ಕೇಳಿ ಬಂದಿತ್ತು.
ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿರುವ ಪಟ್ಟಿಯಲ್ಲಿ ಈ ಹೆಸರುಗಳೂ (ಸ್ಲೈಡಿನಲ್ಲಿ ನೀಡಲಾಗಿದೆ) ಸೇರಿವೆ ಎನ್ನಲಾಗುತ್ತಿದೆ. ಆದರೆ ಯಾವ ಯಾವ ರಾಜ್ಯಕ್ಕೆ ಎನ್ನುವ ಬಗ್ಗೆ ಮಾಹಿತಿಯಿಲ್ಲ.
ರಾಮ್ ನಾಯಕ್
ಮಹಾರಾಷ್ಟ್ರದ ಪ್ರಭಾವಿ ಬಿಜೆಪಿ ಮುಖಂಡ ಮತ್ತು ಮಾಜಿ ಪೆಟ್ರೋಲಿಯಂ ಸಚಿವ ರಾಮ್ ನಾಯಕ್ ಹೆಸರು ಕೂಡಾ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿರುವ ಪಟ್ಟಿಯಲ್ಲಿದೆ ಎಂದು ತಿಳಿದು ಬಂದಿದೆ. (ಚಿತ್ರದಲ್ಲಿ ಓ ರಾಜಗೋಪಾಲ್)
ಕಲ್ಯಾಣ್ ಸಿಂಗ್
ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಒಂದು ಕಾಲದ ಪ್ರಭಾವಿ ಮುಖಂಡ ಕಲ್ಯಾಣ್ ಸಿಂಗ್ ಕೂಡಾ ಪಟ್ಟಿಯಲ್ಲಿರುವ ಮತ್ತೊಂದು ಹೆಸರು. (ಚಿತ್ರದಲ್ಲಿ ಮೋದಿ ಜೊತೆ ಕಲ್ಯಾಣ್ ಸಿಂಗ್)
ಲಾಲಾಜಿ ಟಂಡನ್
ಬಿಜೆಪಿ ಹಿರಿಯ ಮುಖಂಡರಾದ ಲಾಲಾಜಿ ಟಂಡನ್ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜನಾಥ್ ಸಿಂಗ್ ಅವರಿಗಾಗಿ ಲಕ್ನೋ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಇವರು ಒಲ್ಲದ ಮನಸ್ಸಿನಿಂದ ರಾಜ್ಯಪಾಲರ ಹುದ್ದೆಗೆ ಓಕೆ ಅಂದಿದ್ದಾರೆ ಎನ್ನಲಾಗುತ್ತಿದೆ. (ಚಿತ್ರದಲ್ಲಿ ರಾಜನಾಥ್ ಸಿಂಗ್ ಜೊತೆ ಟಂಡನ್)
ವಿ ಕೆ ಮಲ್ಹೋತ್ರ
ಮಾಜಿ ಬಿಜೆಪಿಯ ಮುಖ್ಯ ಸಚೇತಕ ಮತ್ತು ವಿ ಕೆ ಮಲ್ಹೋತ್ರ ಅವರ ಹೆಸರೂ ಪಟ್ಟಿಯಲ್ಲಿದೆ. 81 ವರ್ಷದ ಮಲ್ಹೋತ್ರ ಭಾರತೀಯ ಒಲಂಪಿಕ್ಸ್ ಒಕ್ಕೂಟದ ಉಪಾಧ್ಯಕ್ಷರೂ ಆಗಿದ್ದರು. (ಚಿತ್ರದಲ್ಲಿ ವಿ ಕೆ ಮಲ್ಹೋತ್ರ)
ಕೇಸರಿನಾಥ್ ತ್ರಿಪಾಠಿ
ಉತ್ತರಪ್ರದೇಶ ಅಸೆಂಬ್ಲಿಯ ಮಾಜಿ ಸ್ಪೀಕರ್ ಆಗಿದ್ದ 78 ವರ್ಷದ ಬಿಜೆಪಿ ಮುಖಂಡ ತ್ರಿಪಾಠಿ ಈ ಹಿಂದೆ ಐದು ಬಾರಿ ಶಾಸಕರಾಗಿದ್ದರು. (ಚಿತ್ರದಲ್ಲಿ ಕೇಸರಿನಾಥ್ ತ್ರಿಪಾಠಿ)