ಜಯಲಲಿತಾ ಜೈಲು ಶಿಕ್ಷೆಯ ಹಿಂದೆ ಕರ್ನಾಟಕದ ಪಿತೂರಿ!
ಅಕ್ರಮ ಆಸ್ತಿಗಳಿಕೆ ಆರೋಪದಡಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸೆಲ್ವಿ ಜಯಲಲಿತಾ ಜೈಲು ಶಿಕ್ಷೆಯ ಹಿಂದೆ ಕರ್ನಾಟಕ ಸರಕಾರದ ವ್ಯವಸ್ಥಿತ ಪಿತೂರಿ ಕಾರಣವೇ?
ಅಕಟಕಟಾ... ಈ ರೀತಿಯ ಗಾಳಿಸುದ್ದಿಗಳು ತಮಿಳುನಾಡಿನಾದ್ಯಂತ ವ್ಯಾಪಕವಾಗಿ ಹರಿದಾಡುತ್ತಿದೆ. ಸುದ್ದಿಯ ಸತ್ಯಾಸತ್ಯತೆಯ ಅರಿಯದ ಅಮ್ಮ ಭಕ್ತರು ತಮಿಳುನಾಡಿನಲ್ಲಿ ನೆಲೆಸಿರುವ ಕರ್ನಾಟಕದ ಜನರ ಮತ್ತು ವಾಹನಗಳ ಮೇಲೆ ತಮ್ಮ ಸೇಡು ತೀರಿಸಿಕೊಳ್ಳುತ್ತಿದ್ದಾರೆ.
ಇದು ಸುಳ್ಳು ಸುದ್ದಿ, ಜಯಾ ಕೇಸಿಗೂ ಕರ್ನಾಟಕಕ್ಕೂ ಸಂಬಂಧವಿಲ್ಲ ಎಂದು ಅಲ್ಲಿನ ಜನರಿಗೆ ತಿಳಿ ಹೇಳುವ ಕೆಲಸಕ್ಕೆ ಮುಂದಾಗದ ಅಲ್ಲಿನ ಎರಡೂ ಪ್ರಮುಖ ಪ್ರಾದೇಶಿಕ ಪಕ್ಷಗಳು ಸುದ್ದಿಗೆ ಮತ್ತಷ್ಟು ತುಪ್ಪ ಸುರಿದು ವಿಕೃತ ಆನಂದ ಅನುಭವಿಸುತ್ತಿರುವುದು ಮಾತ್ರ ದುರಂತ. (ಅಮ್ಮಾ ಜೈಲಿಗೆ ಕಳುಹಿಸಿದ ಕುಡ್ಲದ ನ್ಯಾ.ಕುನ್ಹಾ)
ಕಾವೇರಿ ನದಿನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕವನ್ನು ಎಡೆಬಿಡದೇ ಕಾಡಿದ ಸಿಎಂ ಜಯಲಲಿತಾ ವಿರುದ್ದ ಸೇಡು ತೀರಿಸಿಕೊಳ್ಳಲು ಕರ್ನಾಟಕ ಸರಕಾರ ಮುಂದಾಗಿದೆ. ಜಯಾ ಜೈಲು ಶಿಕ್ಷೆಯ ಹಿಂದೆ ಆ ರಾಜ್ಯದ ಸೇಡಿನ ರಾಜಕಾರಣವಿದೆ.
ಇದಕ್ಕಾಗಿ ಅಕ್ರಮಗಳಿಕೆ ಕೇಸನ್ನು ಕರ್ನಾಟಕ ವ್ಯವಸ್ಥಿತವಾಗಿ ಜಯಾ ವಿರುದ್ದ ಬಳಸಿಕೊಂಡು ಯಶಸ್ಸು ಸಾಧಿಸಿತು. ಕರ್ನಾಟಕ ಸೇಡು ತೀರಿಸಿಕೊಳ್ಳಲು ಮುಂದಾಗಿರುವುದರಿಂದಲೇ ನಮ್ಮ ಅಮ್ಮನಿಗೆ ಜೈಲು ಶಿಕ್ಷೆಯಾಯಿತು ಎಂದು ತಮಿಳುನಾಡಿನಲ್ಲಿ ಅಲ್ಲಲ್ಲಿ ಜನ ಗುಂಪು ಸೇರಿಕೊಂಡು 'ಕರ್ನಾಟಕಕ್ಕೆ ಧಿಕ್ಕಾರ' ಕೂಗುತ್ತಿದ್ದಾರೆ (ಜಯಲಲಿತಾಗೆ 4 ವರ್ಷ ಜೈಲು: ಇದಾ ನಿಮ್ಮ ಸಂಸ್ಕೃತಿ)
ಭಾನುವಾರ ಕೋರ್ಟಿಗೆ ರಜೆ ಇರುತ್ತದೆ, ಅದಾದ ನಂತರ ಕರ್ನಾಟಕದ ನ್ಯಾಯಾಲಯಗಳು ದಸರಾ ಹಬ್ಬದ ಪ್ರಯುಕ್ತ ಒಂದು ವಾರ ತೆರೆಯುವುದಿಲ್ಲ. ಇದನ್ನರಿತೇ ಕರ್ನಾಟಕ ಸರಕಾರ ಶನಿವಾರದಂದು ಅಂತಿಮ ತೀರ್ಪು ಪ್ರಕಟಿಸಲು ದಿನ ನಿಗದಿ ಪಡಿಸಿತು ಎನ್ನುವುದು ಅಲ್ಲಿನ ಜನರು ಕೂತಲ್ಲಿ, ನಿಂತಲ್ಲಿ ಸದ್ಯ ಮಾತನಾಡಿ ಕೊಳ್ಳುತ್ತಿರುವ ವಿಚಾರ. (ಚಿತ್ರ: ಪಿಟಿಐ)
ಆತುರಾತುರವಾಗಿ ತೀರ್ಪು ಪ್ರಕಟ
ಹದಿನೆಂಟು ವರ್ಷಗಳ ಸುದೀರ್ಘ ಕೇಸಿನ ಅಂತಿಮ ತೀರ್ಪು ಪ್ರಕಟಿಸುವ ದಿನಾಂಕವನ್ನು ಆತುರಾತುರವಾಗಿ ನಿರ್ಧರಿಸಲಾಯಿತು. ಒಂದು ದಿನ ಮುಂಚಿತವಾಗಿ ಅಥವಾ ಒಂದು ವಾರದ ನಂತರ ತೀರ್ಪು ದಿನಾಂಕವನ್ನು ನಿಗದಿ ಪಡಿಸಿದ್ದರೆ ಕರ್ನಾಟಕದ ಗಂಟೇನು ಹೋಗುತ್ತಿತ್ತು ಎಂದು ಅಲ್ಲಿನ ಜನ ರಾಜ್ಯ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರಂತೆ.
ಕೇಸು ಚೆನ್ನೈನಿಂದ ಬೆಂಗಳೂರಿಗೆ
ಕೆಲವೇ ಕೆಲವು ರಾಜಕೀಯ ಮುಖಂಡರು ಜಯಾ ಕೇಸಿಗೂ ಕರ್ನಾಟಕಕ್ಕೂ ಏನೂ ಸಂಬಂಧವಿಲ್ಲ. ಕೇಸು ಪಾರದರ್ಶಕವಾಗಿ ಸಾಗಲು ಸುಪ್ರೀಂಕೋರ್ಟ್ ಚೆನ್ನೈನಿಂದ ಕರ್ನಾಟಕದ ನ್ಯಾಯಾಲಯಕ್ಕೆ ವರ್ಗಾಯಿಸಲು ಆದೇಶ ನೀಡಿತ್ತು ಎಂದು ತಿಳಿ ಹೇಳಲು ಮುಂದಾಗಿದ್ದರೂ, ಅಂಥವರನ್ನು ಜಯಾ ವಿರೋಧಿಗಳೆಂದು ಬಿಂಬಿಸಲಾಗುತ್ತಿರುವುದು ಸದ್ಯ ಅಲ್ಲಿರುವ ಪರಿಸ್ಥಿತಿ.
ಬೆಂಗಳರಿನಲ್ಲೂ ತಿರುಗಿ ಬಿದ್ದಿದ್ದರು
ಕೇಸಿನ ಅಂತಿಮ ತೀರ್ಪಿನ ದಿನದಂದು ತಮಿಳುನಾಡಿನಿಂದ ಬಂದ ಎಐಡಿಎಂಕೆ ಕಾರ್ಯಕರ್ತರೂ ಮತ್ತು ಅಮ್ಮ ಪರಮಭಕ್ತರೂ ರಾಜ್ಯ ಸರಕಾರದ ಮತ್ತು ಪೊಲೀಸರ ವಿರುದ್ದ ಘೋಷಣೆ ಕೂಗಿ, ತಿರುಗಿ ಬಿದ್ದದ್ದೂ ಆಗಿದೆ. ಭಾನುವಾರ ಮತ್ತು ಸೋಮವಾರ ಮತ್ತೆ ಮತ್ತೆ ಅಂತಹ ಘಟನೆಗಳು ಪುನರಾವರ್ತಿಸಿದೆ.
ವಿಘ್ನಸಂತೋಷಿ ರಾಜಕಾರಣಿಗಳು
ಪರಿಸ್ಥಿತಿಯ ಲಾಭ ಪಡೆಯುತ್ತಿರುವ ವಿಘ್ನಸಂತೋಷಿಗಳಿಗೇನೂ ತಮಿಳುನಾಡಿನಲ್ಲಿ ಭರವಿಲ್ಲ. ಈ ಮಧ್ಯೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಯಾ ಜೈಲು ಶಿಕ್ಷೆಗೂ ರಾಜ್ಯಕ್ಕೂ ಸಂಬಂಧವಿಲ್ಲ ಎನ್ನುವ ಕ್ಲಿಯರ್ ಕಟ್ ಹೇಳಿಕೆಯನ್ನು ನೀಡಿದ್ದಾರೆ.
ಹೊಸ ಮುಖ್ಯಮಂತ್ರಿಗಳೇ ನಿಮ್ಮ ಜನರಿಗೆ ಅರಿವು ಮೂಡಿಸಿ
ನೂತನವಾಗಿ ಆಯ್ಕೆಯಾದ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ, ಜಯಾ ಕೇಸಿಗೂ ಕರ್ನಾಟಕಕ್ಕೂ ಸಂಬಂಧವಿಲ್ಲ ಎನ್ನುವ ಅಧಿಕೃತ ಹೇಳಿಕೆ ನೀಡಿ ರಾಜಕೀಯ ಪ್ರಬುದ್ದತೆ ಮೆರೆದರೆ ಒಳ್ಳೆಯದು. ಇದರಿಂದ ರಾಜಧಾನಿ ಚೆನ್ನೈನಲ್ಲಿ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕನ್ನಡಿಗರು ನೆಮ್ಮದಿಯ ಜೀವನವನ್ನಾದರೂ ನಡೆಸಬಹುದು. ಇದರ ಬದಲಿಗೆ ಈಗಾಗಲೇ ಅನುಕಂಪದ ಅಲೆಯಲ್ಲಿ ತೇಲುತ್ತಿರುವ ಎಐಡಿಎಂಕೆ ಮತ್ತಷ್ಟು ಪರಿಸ್ಥಿತಿಯ ಲಾಭ ಪಡೆದುಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ, ಯಾಕೆಂದರೆ ಇದು ರಾಜಕೀಯದಾಟ.