ಕಳ್ಳಕಾಕರರು ಮುಖ್ಯಮಂತ್ರಿಗಳ ನಿವಾಸವನ್ನೂ ಬಿಡಲಿಲ್ಲ!
ಇಂಫಾಲ್, ಜೂ 17 (ಪಿಟಿಐ) : ಕಳ್ಳತನ ಮಾಡುವುದೂ ಒಂದು ಕಲೆಯೆಂದು ತೋರಿಸಿಕೊಟ್ಟ ಮಹಾನ್ ಚೋರರ ತಂಡವಿದು. ಭದ್ರತಾ ವೈಫಲ್ಯವೋ ಅಥವಾ ಕಳ್ಳರ ಚಾಣಾಕ್ಷತನದ ಮುಂದೆ ಭದ್ರತಾ ಸಿಬ್ಬಂದಿಗಳು ಮಂಕಾದರೋ, ಒಟ್ಟಿನಲ್ಲಿ ಮುಖ್ಯಮಂತ್ರಿಗಳ ನಿವಾಸವನ್ನೇ ಕಳ್ಳರು ದರೋಡೆ ಹೊಡೆದಿದ್ದಾರೆ.
ಕೃಷ್ಣ ದೇವರಾಯನ ಕಾಲದಲ್ಲಿ ಮನೆ, ಅಂಗಡಿ ಮುಂಗಟ್ಟುಗಳಿಗೆ ಬಾಗಿಲೇ ಇರುತ್ತಿರಲಿಲ್ಲವಂತೆ. ಆದರೆ ಇಲ್ಲಿ ಮನೆ, ಮನೆಗೆ ಬಾಗಿಲು, ಬಾಗಿಲು ಕಾಯಲು ಗಟ್ಟಿಮುಟ್ಟಾದ ಭದ್ರತಾ ಸಿಬ್ಬಂದಿಗಳೂ ಇದ್ದರೂ ಕಳ್ಳತನ ತಪ್ಪಿಸಲಾಗಲಿಲ್ಲ. ಅದೂ ಮುಖ್ಯಮಂತ್ರಿಗಳ ನಿವಾಸದಲ್ಲಿ.
ಮಣಿಪುರದ ಮುಖ್ಯಮಂತ್ರಿ ವೋಕ್ರಮ್ ಇಬೋಬಿ ಸಿಂಗ್ ಅವರ ಖಾಸಗಿ ಮನೆಯಲ್ಲಿ ನಡೆದ ಕಳ್ಳತನದ ಪ್ರಕರಣ ಸೋಮವಾರ (ಜೂ 16) ಬೆಳಕಿಗೆ ಬಂದಿದೆ. ಸಿಎಂ ಪತ್ನಿ ಮತ್ತು ಕಾಂಗ್ರೆಸ್ ಶಾಸಕಿಯೂ ಆಗಿರುವ ಲಾಂಧೀನಿ ದೇವಿ ಮನೆಗೆ ಭೇಟಿ ನೀಡಿದಾಗ ದರೋಡೆಕೋರರ ಕೈಚಳಕನ್ನು ನೋಡಿ ಹೌಹಾರಿದ್ದಾರೆ.
ರಾಜಧಾನಿ ಇಂಫಾಲಿನ ಹೊರಭಾಗದಲ್ಲಿರುವ ಸಿಎಂ ಖಾಸಗಿ ನಿವಾಸದಲ್ಲಿದ್ದ ಮನೆಯ ವಸ್ತುಗಳನ್ನೆಲ್ಲಾ ದರೋಡೆಕೋರರು ದೋಚಿದ್ದಾರೆ. ಕಳ್ಳತನವಾದ ವಸ್ತುಗಳ ನಿಖರ ಮೊತ್ತವನ್ನು ಇನ್ನೂ ಅಂದಾಜಿಸ ಬೇಕಾಗಿದೆ.
ಗಮನಿಸಬೇಕಾದ ಅಂಶವೇನಂದರೆ, ಸಿಎಂ ನಿವಾಸವನ್ನು ರೌಂಡ್ ದಿ ಕ್ಲಾಕ್ ಕಾಯಲು ಮೂವತ್ತು ಐಆರ್ಬಿ (Indian Reserve Battalion) ಭದ್ರತಾ ಸಿಬ್ಬಂದಿಗಳಿದ್ದಾರೆ. ಆದರೆ, ಭದ್ರತಾ ಸಿಬ್ಬಂದಿಗಳು ಸಿಎಂ ಮನೆ ಕಾಯುವುದನ್ನು ಬಿಟ್ಟು ಸಿಎಂ ಸಹೋದರನ ಮನೆ ಕಾಯುತ್ತಿದ್ದರು ಎನ್ನಲಾಗುತ್ತಿದೆ.
ಸ್ಥಳಕ್ಕೆ ಪೊಲೀಸ್ ಮಹಾನಿರ್ದೇಶಕರು ಆದಿಯಾಗಿ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮಾಡಿದುಣ್ಣೋ ಮಹಾರಾಯ ಎನ್ನುವ ಹಾಗೇ ಸಿಎಂ ನಿವಾಸದಲ್ಲಿ ಭದ್ರತೆಗೆ ಇದ್ದ ಮೂವತ್ತೂ ಸಿಬ್ಬಂದಿಗಳ ತಲೆದಂಡವಾಗಿದೆ.