ಖಡಕ್ ಸಂದೇಶ ರವಾನಿಸಿದ ಬಿಜೆಪಿಯ ಇಬ್ಬರು ಸಿಎಂ
ಜೈಪುರ/ಇಂದೋರ್, ಜು 14: ಒಬ್ಬರು ತಮ್ಮದೇ ಪಕ್ಷದ ಶಾಸಕರಿಗೆ ಸಮಯಪಾಲನೆ ಮಾಡದೇ ಇದ್ದಿದ್ದಕ್ಕೆ ದಂಡ ವಿಧಿಸಿದರೆ, ಇನ್ನೊಬ್ಬರು ಭ್ರಷ್ಟ ಅಧಿಕಾರಿಯೊಬ್ಬರಿಗೆ ಸರಿಯಾಗಿ ಚಾಟಿ ಬೀಸಿದ್ದಾರೆ.
ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಸಮಯಪಾಲನೆ ಮಾಡದ ತಮ್ಮ ಪಕ್ಷದ ಶಾಸಕರಿಗೆ ದಂಡ ವಿಧಿಸಿ ಇನ್ನು ಮುಂದೆ ಸಮಯಪಾಲನೆ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ.
ಇತ್ತ ಇಂದೋರ್ ನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಸರಕಾರೀ ಅಧಿಕಾರಿಯೊಬ್ಬರು ಅಕ್ರಮ ಸಂಪಾದನೆಯಿಂದ ಮಾಡಿಕೊಂಡಿದ್ದ ಭಾರೀ ಬಂಗಲೆಯನ್ನು ಸರ್ಕಾರಿ ಶಾಲೆಯನ್ನಾಗಿ ಪರಿವರ್ತಿಸಿದ್ದಾರೆ.
ಸಮಾಜದಲ್ಲಿ ಭ್ರಷ್ಟಾಚಾರ ಎನ್ನುವ ಪೀಡೆ ತೊಲಗಬೇಕೆಂದು ರಾಜಕಾರಣಿಗಳು ಬರೀ ಪೇಪರ್ ಹೇಳಿಕೆ ನೀಡುತ್ತಿರುವ ಸಂದರ್ಭದಲ್ಲಿ ಶಿವರಾಜ್ ಸಿಂಗ್ ಇತರ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.
ಈ ಎರಡು ವಿದ್ಯಮಾನದ ವಿವರ ಸ್ಲೈಡಿನಲ್ಲಿ...
ರಾಜಸ್ಥಾನದ ಶಾಸಕರು
ರಾಜಸ್ಥಾನದ ವಿಧಾನಸಭೆಯ ಬಜೆಟ್ ಪೂರ್ವ ಅಧಿವೇಶನಕ್ಕೆ ಪೂರ್ವಭಾವಿಯಾಗಿ ವಸುಂಧರಾ, ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರು. ಸಭೆಗೆ ಸರಿಯಾದ ಸಮಯಕ್ಕೆ ಹಾಜರಾಗುವಂತೆ ಸಿಎಂ ಕಟ್ಟುನಿಟ್ಟಿನ ಆದೇಶ ನೀಡಿದ್ದರು.
ಶಾಸಕರು ಆದರೂ ತಡವಾಗಿ ಬಂದರು
ಸಿಎಂ ಆದೇಶ ನೀಡಿದ್ದರೂ, ಹದಿನೈದು ಶಾಸಕರು ಸಭೆಗೆ ವಿಳಂಬವಾಗಿ ಹಾಜರಾದರು. ಇದರಿಂದ ಸಿಡಿಮಿಡಿಗೊಂಡ ವಸುಂಧರಾ ರಾಜೇ ತಡವಾಗಿ ಬಂದ ಶಾಸಕರಿಗೆ ಐನೂರು ರೂಪಾಯಿ ದಂಡ ವಿಧಿಸಿದರು. ಇದು ಎಲ್ಲರಿಗೂ ಎಚ್ಚರಿಕೆ ಪಾಠವಾಗಲಿ ಎಂದು ಸಿಎಂ ಹೇಳಿದರು. ಸಿಎಂ ಕಟ್ಟುನಿಟ್ಟಿನ ಆದೇಶದಿಂದ ಹರ್ಷ ವ್ಯಕ್ತ ಪಡಿಸಿದ ಶಾಸಕರೊಬ್ಬರು ಐನೂರು ರೂಪಾಯಿ ಬದಲು ಸಾವಿರ ರೂಪಾಯಿ ದಂಡ ನೀಡಿದರು.
ಇತ್ತ ಮಧ್ಯಪ್ರದೇಶದ ಮುಖ್ಯಮಂತ್ರಿ ಚೌಹಾಣ್
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಇತರರಿಗೆ ಮಾದರಿಯಾಗುವಂತೆ ನಡೆ ಇಟ್ಟಿದ್ದಾರೆ. ಸಿಎಂ ಈ ಕಠಿಣ ನಿರ್ಧಾರದಿಂದ ಸರಕಾರೀ ಅಧಿಕಾರಿಗಳ ವಲಯದಲ್ಲಿ ವಿದ್ಯುತ್ ಸಂಚಲನ ಮೂಡಿಸಿದಂತಾಗಿದೆ.
ಸಿಕ್ಕಿಬಿದ್ದ ಪೊಲೀಸ್ ಇನ್ ಸ್ಪೆಕ್ಟರ್
ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಅರವಿಂದ್ ತಿವಾರಿ ಎನ್ನುವ ಪೊಲೀಸ್ ಇನ್ ಸ್ಪೆಕ್ಟರ್ ಸಿಕ್ಕಿಬಿದ್ದಿದ್ದರು. ಈ ಇನ್ ಸ್ಪೆಕ್ಟರ್ ಅಕ್ರಮವಾಗಿ ಭಾರೀ ಹಣ ಮತ್ತು ಆಸ್ತಿ ಸಂಪಾದನೆ ಮಾಡಿದ್ದ ಎಂದು ಸ್ಥಳೀಯ ಪತ್ರಿಕೊಯೊಂದು ವರದಿ ಮಾಡಿತ್ತು, ನಂತರ ಈ ಆರೋಪ ಕೋರ್ಟಿನಲ್ಲೂ ಸಾಬೀತಾಯಿತು.
ಖಡಕ್ ಶಿಸ್ತುಕ್ರಮ ತೆಗೆದುಕೊಂಡ ಸಿಎಂ
ಅಕ್ರಮ ಸಂಪಾದನೆಯಿಂದ ಮಾಡಿದ್ದ ಭಾರೀ ಬಂಗಲೆಯನ್ನು ಮುಟ್ಟುಗೋಲು ಹಾಕಿಕೊಂಡ ಶಿವರಾಜ್ ಸಿಂಗ್ ಸರಕಾರ, ಆ ಬಂಗಲೆಯನ್ನು ಅಂಗನವಾಡಿ ಮತ್ತು ಸರ್ಕಾರಿ ಶಾಲೆಯನ್ನಾಗಿ ಪರಿವರ್ತಿಸಿ ಆದೇಶ ಹೊರಡಿಸಿದ್ದಲ್ಲದೇ, ಅದನ್ನು ಉದ್ಘಾಟನೆ ಬೇರೆ ಮಾಡಿದ್ದಾರೆ. ಅಲ್ಲದೇ, ಭ್ರಷ್ಟ ಅಧಿಕಾರಿಯಿಂದ ವಶಪಡಿಸಿಕೊಂಡ ಹಣವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳುವುದಾಗಿ ಪ್ರಕಟಿಸಿದ್ದಾರೆ.