ಕ್ಷಮಾದಾನ ಅರ್ಜಿ ತಿರಸ್ಕೃತ: 6 ಜನರಿಗೆ ಮರಣದಂಡನೆ
ನವದೆಹಲಿ, ಜು 19: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ನಿಥಾರಿ ಕೊಲೆ ಪ್ರಕರಣದ ಆರು ಜನರು ಸಲ್ಲಿಸಿದ್ದ ಕ್ಷಮಾದಾನದ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕರಿಸಿರುವುದರಿಂದ ಆರೋಪಿಗಳು ನೇಣಿಗೆ ಶರಣಾಗುವುದು ಈಗ ಕಾಯಂ ಆಗಿದೆ.
ನಿಥಾರಿ ಸರಣಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುರೀಂದರ್ ಸಿಂಗ್ ಸೇರಿದಂತೆ ಆರು ಜನರು ತಮ್ಮ ಕ್ಷಮಾದಾನದ ಅರ್ಜಿಯನ್ನು ಕೇಂದ್ರ ಗೃಹ ಇಲಾಖೆಗೆ ಈ ಹಿಂದೆ ಸಲ್ಲಿಸಿದ್ದರು.
ಗೃಹ ಸಚಿವಾಲಯ ತನ್ನ ವರದಿಯ ಜೊತೆ ರಾಷ್ಟ್ರಪತಿ ಭವನಕ್ಕೆ ಕ್ಷಮಾದಾನ ಅರ್ಜಿಯನ್ನು ಕಳುಹಿಸಿತ್ತು. ಈಗ ರಾಷ್ಟ್ರಪತಿಗಳು ಅರ್ಜಿಯನ್ನು ತಿರಸ್ಕರಿಸಿದ್ದಾರೆಂದು ಉನ್ನತ ಮೂಲಗಳು ಖಚಿತ ಪಡಿಸುವುದರ ಮೂಲಕ ಆರು ಜನರಿಗೆ ಗಲ್ಲು ಕಾಯಂ ಆಗಿದೆ.
ಜೂನ್ 18ರಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹದಿನೆಂಟು ಮರಣದಂಡನೆ ಶಿಕ್ಷೆಯ ಕ್ಷಮಾಪಣಾ ಅರ್ಜಿಯನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಿದ್ದರು. ಇದರಲ್ಲಿದ್ದ ಈ ಆರು ಅರ್ಜಿಗಳು ಸದ್ಯ ತಿರಸ್ಕೃತಗೊಂಡಿದೆ.
ಈಗ ರಾಷ್ಟ್ರಪತಿಗಳು ಅರ್ಜಿಯನ್ನು ತಿರಸ್ಕರಿಸಿರುವುದರಿಂದ ಗಲ್ಲು ಶಿಕ್ಷೆಯನ್ನು ಕಾರ್ಯರೂಪಕ್ಕೆ ತರಲು ಸಿದ್ದತೆ ನಡೆಸಬೇಕೆಂದು ಸಂಬಂಧಪಟ್ಟವರಿಗೆ ಗೃಹ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆಂದು ತಿಳಿದುಬಂದಿದೆ.
ದೇಶದ ಅಪರಾಧ ಪ್ರಕರಣದಲ್ಲಿ ವಿರಳಾತಿ ವಿರಳ ಪ್ರಕರಣ ಇದಾಗಿದ್ದು ಇಂತಹ ಮನುಷ್ಯ ರೂಪದಲ್ಲಿರುವ ರಾಕ್ಷಸರಿಗೆ ಕರುಣೆ ತೋರಲು ಸಾಧ್ಯವೇ ಇಲ್ಲ. ಇವರಿಗೆ ಮರಣದಂಡನೆಯೇ ಸೂಕ್ತ ಎಂದು ಸಿಬಿಐ ನ್ಯಾಯಾಲಯ ಈ ಹಿಂದೆ ತೀರ್ಪು ನೀಡಿತ್ತು.
ಉತ್ತರಪ್ರದೇಶದ ನೋಯಿಡಾ ಸಮೀಪದ ನಿಥಾರಿ ಗ್ರಾಮದಲ್ಲಿ ಹದಿನಾಲ್ಕು ವರ್ಷದ ರಿಂಪಾ ಸೇರಿದಂತೆ, ನಾಲ್ವರು ಮಹಿಳೆಯರು ಮತ್ತು ಹದಿನೈದು ಮಂದಿ ಮಕ್ಕಳು ಆರು ವರ್ಷದ ಹಿಂದೆ ಕಾಣೆಯಾಗಿದ್ದರು.
ಬಳಿಕ ಅವರೆಲ್ಲರ ಅಸ್ಥಿಪಂಜರಗಳು ಪಂಥೇರ್ ಎನ್ನುವ ಪ್ರದೇಶದಲ್ಲಿ ಪತ್ತೆಯಾಗಿದ್ದವು. ದೇಶಾದ್ಯಂತ ಭಾರೀ ಕುತೂಹಲ ಸೃಷ್ಟಿಸಿದ್ದ ಈ ಪ್ರಕರಣವನ್ನು ಉತ್ತರಪ್ರದೇಶ ಸರಕಾರ ಸಿಬಿಐ ಸುಪರ್ದಿಗೆ ವಹಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.