ಅಪರೂಪಕ್ಕೆ ದರ್ಶನ ನೀಡಲು ಮೋದಿ ಏನು ದೇವ್ರಾ?
ನವದೆಹಲಿ, ಜು 24: ಪ್ರಧಾನಿ ನರೇಂದ್ರ ಮೋದಿ ಆಗೊಮ್ಮೆ, ಈಗೊಮ್ಮೆ ದರ್ಶನ ನೀಡಲು ಅವರೇನು 'ದೇವರಾ' ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಪ್ರಧಾನಿಯಾದವರಿಗೆ ಇರುವ ಕೆಲಸದ ಒತ್ತಡದ ಬಗ್ಗೆ ನಮಗೆ ಅರಿವಿದೆ. ಪ್ರತೀದಿನ ಲೋಕಸಭೆಯ ಕಲಾಪಕ್ಕೆ ಮೋದಿ ಹಾಜರಾಗಬೇಕೆಂದು ನಾವು ಒತ್ತಾಯಿಸುವುದಿಲ್ಲ. ಆದರೂ ವಾರಕೂಮ್ಮೆಯಾದರೂ ಸದನಕ್ಕೆ ಹಾಜರಾಗ ಬೇಕಲ್ಲವೇ ಎಂದು ಖರ್ಗೆ ಮಂಗಳವಾರ (ಜು 22) ಸದನದಲ್ಲಿ ಹೇಳಿಕೆ ಹೇಳಿದ್ದರು.
ಖರ್ಗೆ ಹೇಳಿಕೆಗೆ ಬುಧವಾರ (ಜು 23) ಉತ್ತರ ನೀಡುತ್ತಿದ್ದ ವಿದೇಶಾಂಗ ವ್ಯವಹಾರ ಖಾತೆಯ ಸಚಿವೆ ಸುಷ್ಮಾ ಸ್ವರಾಜ್, ನೀವು ನಿನ್ನೆ ಸದನದಲ್ಲಿ ನೀಡಿದ ಹೇಳಿಕೆಗೆ ನಾವು ಉತ್ತರಿಸುತ್ತಿದ್ದೇವೆ.
ಪ್ರಶ್ನೋತ್ತರ ವೇಳೆಯಲ್ಲಿ ಪ್ರಧಾನಿ ಮೋದಿ ಸದನದಲ್ಲಿ ಹಾಜರಾಗಿದ್ದರು. ಆಗ ನೀವು ಅವರ ದರ್ಶನ ಮಾಡಬಹುದಾಗಿತ್ತಲ್ಲವೇ ಎಂದು ಖರ್ಗೆ ಪ್ರಶ್ನೆಗೆ ಸುಷ್ಮಾ ಉತ್ತರ ನೀಡಿದ್ದಾರೆ.
(ಫೋಟೋ: ಪಿಟಿಐ)
ಖರ್ಗೆ ಮಾತಿನ ಲಹರಿ
ತನ್ನ ಎಂದಿನ ಉರ್ದು ಮಿಶ್ರಿತ ಹಿಂದಿಯಲ್ಲಿ ಸದನದಲ್ಲಿ ಸುಷ್ಮಾ ಹೇಳಿಕೆಗೆ ನಸುನಗುತ್ತಲೇ ಉತ್ತರ ನೀಡಿದ ಖರ್ಗೆ, ಆಗೊಮ್ಮೆ ಈಗೊಮ್ಮೆ ಸದನಕ್ಕೆ ಬಂದು ನಮಗೆ ದರ್ಶನ ನೀಡಲು ಮೋದಿ ಸಾಹೇಬ್ರು ಏನು ದೇವ್ರಾ ಎಂದು ಪ್ರತ್ಯುತ್ತರ ನೀಡಿದ್ದಾರೆ. ಖರ್ಗೆ ಈ ಹೇಳಿಕೆಗೆ ಪಕ್ಷಾತೀತವಾಗಿ ಎಲ್ಲರೂ ಸದನದಲ್ಲಿ ಮಂದಹಾಸ ಬೀರಿದರು.
ಬಜೆಟ್ ಸೆಸನ್ ನಂತರ ಮೋದಿ ಎಲ್ಲಿ
ಬಜೆಟ್ ಅಧಿವೇಶನದ ನಂತರ ಮೋದಿ ಸದನಕ್ಕೆ ಹಾಜರಾಗಲೇ ಇಲ್ಲ. ನಮ್ಮ ಪ್ರಶ್ನೆಗೆ ಉತ್ತರಿಸುವವರು ಯಾರು? ಪ್ರಧಾನಿ ವಿದೇಶ ಪ್ರವಾಸದಲ್ಲಿದ್ದರು ಎನ್ನುವುದು ನಮಗೆ ತಿಳಿದಿದೆ. ಆದರೂ, ವಾರಕ್ಕೊಮ್ಮೆಯಾದರೂ ಮೋದಿ ಸದನಕ್ಕೆ ಬರಬಾರದೇ, ನಾವೇನೂ ಪ್ರತೀ ದಿನ ಪ್ರಧಾನಿಗಳ ದರ್ಶನ ಬಯಸುವಿದಿಲ್ಲ - ಮಲ್ಲಿಕಾರ್ಜುನ ಖರ್ಗೆ.
ವ್ಯಂಗ್ಯವಾಗಿಯೇ ಉತ್ತರ ನೀಡಿದ ಸುಷ್ಮಾ
ಖರ್ಗೆಜೀ, ನಿಮ್ಮ ಅಧಿಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಐದು ಬಾರಿ ಬ್ರಿಕ್ಸ್ ಸಮ್ಮೇಳನಕ್ಕೆ ಹೋಗಿದ್ದರು. ನೀವೂ ಇಷ್ಟು ಬಾರಿ ಸಂಸದರಾಗಿದ್ದೀರಿ. ಒಮ್ಮೆಯಾದರೂ ನಿಮ್ಮ ಮನಮೋಹನ್ ಸಿಂಗ್ ಸರಕಾರ ಬ್ರಿಕ್ಸ್ ಸಮ್ಮೇಳನದ ಬಗ್ಗೆ ಸದನಕ್ಕೆ ಮಾಹಿತಿ ನೀಡಿದ್ರಾ ಎಂದು ಸುಷ್ಮಾ ಸ್ವರಾಜ್ ಪ್ರಶ್ನಿಸಿದರು.
ಒಂದೇ ಒಂದು ಬಾರಿ ಸಚಿವರ ಹೇಳಿಕೆ
ವಿರೋಧ ಪಕ್ಷಗಳ ಒತ್ತಡಕ್ಕೆ ಒಳಗಾಗಿ ನಿಮ್ಮ ಸರಕಾರದಲ್ಲಿ ವಿದೇಶಾಂಗ ವ್ಯವಹಾರ ಖಾತೆಯ ಸಚಿವರು ಒಮ್ಮೆ ಬ್ರಿಕ್ಸ್ ಸಮ್ಮೇಳನದ ಫಲಿತಾಂಶದ ಬಗ್ಗೆ ಸದನಕ್ಕೆ ಮಾಹಿತಿ ನೀಡಿದ್ದರು. ಈ ವಿಷಯ ನಿಮಗೂ ತಿಳಿದಿದೆ - ಸುಷ್ಮಾ ಸ್ವರಾಜ್
ನಮ್ಮ ಸರಕಾರದ ಹೊಸ ನಿಯಮ
ನಿಮ್ಮ ಸರಕಾರ ಮಾಹಿತಿ ನೀಡಲಿಲ್ಲವೆಂದು ನಮ್ಮ ಕಾರ್ಯವೈಖರಿ ಆ ರೀತಿ ಇರುವುದಿಲ್ಲ. ಬ್ರೆಜಿಲ್ ನಲ್ಲಿ ನಡೆದ ಬ್ರಿಕ್ಸ್ ಸಮ್ಮೇಳನದ ಬಗ್ಗೆ ಮಾಹಿತಿ ನಾವು ನೀಡುತ್ತಿದ್ದೇವೆ - ಸುಷ್ಮಾ ಸ್ವರಾಜ್.
ಮಲ್ಲಿಕಾರ್ಜುನ ಖರ್ಗೆ
ಈಗಿನ ವಿಚಾರದ ಬಗ್ಗೆ ಮಾತನಾಡಿ, ಬಜೆಟ್ ಅಧಿವೇಶನ ಇಲ್ಲದಿದ್ದರೆ ನೀವೂ ಬ್ರೆಜಿಲಿಗೆ ಹೋಗುತ್ತಿದ್ದಿರೇನೋ, ಆದರೂ ಪ್ರಧಾನಿ ಹೇಳಿಕೆಯನ್ನು ನಾವು ಬಯಸಿದ್ದೆವು ಎಂದು ಸುಷ್ಮಾ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಉತ್ತರಿಸಿದ್ದಾರೆ.