ಮೋದಿ ಆನೇವಾಲಾ ಹೈ ಸುದ್ದಿಗೆ ಅಧಿಕಾರಿಗಳು ಸುಸ್ತು
ನವದೆಹಲಿ, ಜೂ 6: ರಾಜಧಾನಿಯ ಕೇಂದ್ರ ಸರಕಾರೀ ಕಚೇರಿಗಳು ಗುರುವಾರ (ಜೂ 5) ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಚುರುಕುಗೊಂಡಿದ್ದವು. ಪ್ರಧಾನಿ ನರೇಂದ್ರ ಮೋದಿ ಸರಕಾರಿ ಕಚೇರಿಗಳಿಗೆ ಸದ್ಯದಲ್ಲೇ ಭೇಟಿ ನೀಡಲಿದ್ದಾರೆನ್ನುವ ಸುದ್ದಿಯಿಂದ ಸರಕಾರಿ ನೌಕರರು, ಅಧಿಕಾರಿಗಳು ಮತ್ತು ಸರಕಾರೀ ಯಂತ್ರ ಸಿಕ್ಕಾಪಟ್ಟೆ ಚುರುಕುಗೊಂಡಿದ್ದವು.
ಕಚೇರಿಯಲ್ಲಿನ ಸ್ವಚ್ಛತೆಯ ಗುಣಮಟ್ಟ, ನೌಕರರ ಕಾರ್ಯಕ್ಷಮತೆ ಪರೀಕ್ಷಿಸಲು ಪ್ರಧಾನಿಗಳು ಖುದ್ದಾಗಿ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಬುಧವಾರ (ಜೂ 4) ಪ್ರಧಾನಿ ವಿವಿಧ ಇಲಾಖೆಯ ಸೆಕ್ರೆಟರಿಗಳನ್ನು ಭೇಟಿಯಾದ ನಂತರ ಈ ರೀತಿ ಸುದ್ದಿಯಾಗಿತ್ತು.
ನೀರು ಸೋರುವ ಶೌಚಾಲಯಗಳು, ಎಲ್ಲೆಂದರಲ್ಲಿ ಕಸದ ರಾಶಿಗಳು, ಕೆಟ್ಟು ಹೋಗಿರುವ ಎಸಿಗಳು, ಗೋಡೆಯ ಮೇಲೆ ತಂಬಾಕಿನ ಕಲೆ ಹೀಗೆ ಕಚೇರಿಯ ಅವ್ಯವಸ್ಥೆಯನ್ನು ನೋಡಿ ಹಿರಿಯ ಅಧಿಕಾರಿಗಳು ಬೆಚ್ಚಿಬಿದ್ದರು.
ಸಮಯ ವ್ಯರ್ಥ ಮಾಡದೇ ಖುದ್ದಾಗಿ ತಾವೇ ಮುಂದೆ ನಿಂತ ಅಧಿಕಾರಿಗಳು ದುರಸ್ಥಿ ಕೆಲಸಕ್ಕೆ ಮುಂದಾದರು. ಕೂಡಲೇ ಪ್ಲಂಬರ್, ಪೈಂಟರ್, ಕಾರ್ಪೆಂಟರ್, ಎಸಿ ರಿಪೇರಿ ಮಾಡುವವರನ್ನು ಕರೆಸಿ ರಿಪೇರಿ ಮಾಡಿಸಿದರು, ತೇಪೆ ಹಾಕಿಸಿದರು.
ಪ್ರಮುಖವಾಗಿ ಕೃಷಿ ಭವನ, ಸಾರಿಗೆ ಭವನ ಮತ್ತು ಉದ್ಯೋಗ ಭವನದಲ್ಲಿ ಪ್ರತಿಯೊಂದು ಕೋಣೆಗಳಿಗೂ ಭೇಟಿ ನೀಡಿದ ಅಧಿಕಾರಿಗಳು ಸ್ವಚ್ಛತೆ ಮತ್ತು ಇತರ ಮೂಲಭೂತ ಸೌಲಭ್ಯಗಳು ಸರಿ ಇದೆಯೇ ಎಂದು ಪರೀಕ್ಷಿಸಿದರು.
ಬುಧವಾರ ವಿವಿಧ ಇಲಾಖೆಯ ಸೆಕ್ರೆಟರಿಗಳ ಜೊತೆ ಚರ್ಚಿಸಿದ್ದ ಮೋದಿ ಸ್ವಚ್ಛತೆಯ ಬಗ್ಗೆ ಗಮನಹರಿಸಿ. ಇದರಿಂದ ಇಲಾಖೆಯ ನೌಕರರ ಕಾರ್ಯಕ್ಷಮತೆ ಕೂಡಾ ಹೆಚ್ಚುತ್ತದೆ. ಸರಿಯಾಗಿ ಕಾರ್ಯನಿರ್ವಹಿಸದ ನೌಕರರು/ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿ ಎಂದು ಪ್ರಧಾನಿ ಮೋದಿ ಆದೇಶ ನೀಡಿದ್ದರಂತೆ.
(ಫೋಟೋ: ಪಿಟಿಐ)