ಪ್ರವಾಹ, ಭೂ ಕುಸಿತಕ್ಕೆ ಜೀವ ಹಾನಿ, ಮೋದಿ ವಿಷಾದ
ಡೆಹ್ರಾಡೂನ್ (ಉತ್ತರಖಂಡ), ಆ.17: ಕಳೆದ ವರ್ಷ ಭೀಕರ ಪ್ರವಾಹಕ್ಕೆ ತುತ್ತಾಗಿ ಜರ್ಝರಿತವಾಗಿದ್ದ ದೇಗುಲಗಳ ರಾಜ್ಯ ಉತ್ತರಾಖಂಡ್ ನಲ್ಲಿ ಮತ್ತೊಮ್ಮೆ ಭೂ ಕುಸಿತ, ಮೇಘ ಸ್ಫೋಟ, ಪ್ರವಾಹ ಉಂಟಾಗಿದೆ. ಅತ್ತ ನೇಪಾಳದಿಂದ ಹರಿದು ಬಂದ ನೀರು ಬಿಹಾರದಲ್ಲಿ ಭೀತಿ ಹುಟ್ಟಿಸಿದೆ. ಉತ್ತರಪ್ರದೇಶದಲ್ಲೂ ಸಾವು ನೋವಿನ ಸುದ್ದಿ ಬಂದಿದೆ. ಎಲ್ಲವನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಮರುಗಿದ್ದಾರೆ.
ಉತ್ತರಾಖಂಡ್ ನಲ್ಲಿ ಮಳೆಯಿಂದಾಗಿ 45ಕ್ಕೂ ಹೆಚ್ಚು ಜೀವಗಳು ಬಲಿಯಾಗಿದ್ದು, ಹಲವು ಜಿಲ್ಲೆಗಳು, ಗ್ರಾಮಗಳು ನೀರಿನಿಂದ ಆವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಹಿಮಾಲಯ ಪರ್ವತ ಪ್ರಾಂತ್ಯ ರಾಜ್ಯಗಳಾದ ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ವರುಣನ ಆರ್ಭಟ ಕಳೆದ ಮೂರು ದಿನಗಳಿಂದ ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಉತ್ತರಾಖಂಡ್ ನ ಹಲವು ಜಿಲ್ಲೆಗಳಲ್ಲಿ ನೂರಾರು ಗ್ರಾಮಗಳ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿ ಹೊರ ಪ್ರಪಂಚದ ಸಂಪರ್ಕವೇ ಕಡಿದು ಹೋಗಿದೆ. ಇದರಿಂದಾಗಿ ಪರಿಹಾರ ಕಾರ್ಯಗಳಿಗೆ ತೀವ್ರ ಅಡಚಣೆಯಾಗಿದ್ದು, ಸಂಕಷ್ಟಕ್ಕೆ ಸಿಲುಕಿರುವ ಸ್ಥಳಗಳಿಗೆ ತೆರಳುವುದೇ ಕಷ್ಟವಾಗಿದೆ. ಪುರಿ ಜಿಲ್ಲೆಯಲ್ಲೂ ಪರಿಸ್ಥಿತಿ ಇದಕ್ಕಿಂತ ಬಿಕ್ಕಟ್ಟಿನಲ್ಲಿದೆ.
ಗಂಗಾನದಿ ಅಪಾಯದ ಮಟ್ಟ ತಲುಪಲು ಇನ್ನು ಕೇವಲ ಒಂದೂವರೆ ಅಡಿ ಮಾತ್ರ ಬಾಕಿ ಇದೆ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಒಂದು ವೇಳೆ ಗಂಗಾ ನದಿ ಅಪಾಯದ ಮಟ್ಟಕ್ಕೆ ಏರಿಕೆಯಾದರೆ ಪರಿಸ್ಥಿತಿ ಭಾರಿ ಅಯೋಮಯವಾಗಲಿದೆ.
ಸಾವಿರಾರು ಮನೆಗಳು ನೆಲಸಮವಾಗಿದ್ದು, ನಿರಾಶ್ರಿತರಿಗೆ ಆಶ್ರಯ ಶಿಬಿರಗಳನ್ನು ತೆರೆಯಲಾಗಿದೆ. ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ ಎಂದು ಮುಖ್ಯಮಂತ್ರಿ ಹರೀಶ್ ರಾವತ್ ಹೇಳಿದ್ದಾರೆ. ಹವಾಮಾನ ಇಲಾಖೆ ಆ.14ರಂದೇ ಭಾರೀ ಮಳೆಯ ಮುನ್ಸೂಚನೆ ನೀಡಿತ್ತು. ಇನ್ನು ಮೂರ್ನಾಲ್ಕು ದಿನ ರಾಜ್ಯದಲ್ಲಿ ಹೀಗೇ ಮಳೆ ಮುಂದುವರಿಯಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯ ಭೀಕರತೆ ತೋರಿಸುವ ಚಿತ್ರಗಳು ನಿಮ್ಮ ಮುಂದಿವೆ
ಪುರಿಯಲ್ಲಿ 14 ಜನ ನೀರು ಪಾಲಾಗಿದ್ದಾರೆ
ಪುರಿಯಲ್ಲಿ 14 ಜನ ನೀರು ಪಾಲಾಗಿದ್ದಾರೆ ಮತ್ತು ಕೆಲವರು ಕಾಣೆಯಾಗಿದ್ದಾರೆ. ಪುರಿಯ ಹಳ್ಳಿಯೊಂದು ಪ್ರವಾಹಕ್ಕೆ ಸಿಲುಕಿ ಸಂಪರ್ಕ ಕಡಿದುಕೊಂಡಿರುವುದರಿಂದ 250 ಮಂದಿಯ ಸ್ಥಿತಿ ಅಪಾಯದಲ್ಲಿದೆ. ಪ್ರವಾಹ ಸ್ವಲ್ಪ ಏರಿದರೂ ಪರಿಣಾಮ ಭೀಕರವಾಗಲಿದೆ
ಬಿಹಾರದಲ್ಲಿ ದ್ವೀಪವಾದ ಭೂ ಪ್ರದೇಶ
ಬಿಹಾರದಲ್ಲಿ ಪ್ರವಾಹದಿಂದ ದ್ವೀಪವಾದ ನಲಂದಾ ಜಿಲ್ಲೆಯ ಭೂ ಭಾಗ
ಎಲ್ಲ ನದಿಗಳೂ ಮೇರೆ ಮೀರಿ ಹರಿಯುತ್ತಿದೆ
ನೇಪಾಳದ ಅಣೆಕಟ್ಟೆಗಳಿಂದ ಭಾರೀ ಪ್ರಮಾಣದ ನೀರನ್ನು ಹೊರಬಿಟ್ಟಿದ್ದು, ಉತ್ತರ ಪ್ರದೇಶದ ಏಳು ಜಿಲ್ಲೆಗಳು ಜಲಾವೃತಗೊಂಡು, 300ಕ್ಕೂ ಹೆಚ್ಚು ಜನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.
ಹಿಮಾಲಯ ಪರ್ವತ ಪ್ರಾಂತ್ಯದ ಎಲ್ಲ ನದಿಗಳೂ ಮೇರೆ ಮೀರಿ ಹರಿಯುತ್ತಿದೆ. ಬೆಹ್ರೈಬ್, ಶ್ರಾವಸ್ತಿ ಮತ್ತು ಲಿಖಿಂಪುರಿ ಖೇರಿ ಜಿಲ್ಲೆಗಳ ಸುಮಾರು 500ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದಿಂದಾಗಿ ದ್ವೀಪಗಳಾಗಿವೆ.
|
ಪ್ರಧಾನಿ ಸಚಿವಾಲಯದಿಂದ ಸಂದೇಶ
ಪ್ರಧಾನಿ ಸಚಿವಾಲಯದಿಂದ ಪ್ರವಾಹ ಪೀಡಿತರ ಬಗ್ಗೆ ಟ್ವೀಟ್ ಸಂದೇಶ
ಡೆಹ್ರಾಡೂನ್ ನಲ್ಲಿ ರಕ್ಷಣಾ ಕಾರ್ಯ
ಡೆಹ್ರಾಡೂನ್ ನಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಕಾಥ್ ಬಾಂಗ್ಲಾ ಪ್ರದೇಶದಲ್ಲಿ ಸಿಕ್ಕ ಶವವನ್ನು ಸಾಗಿಸುತ್ತಿದ್ದಾರೆ. ಉತ್ತರ ಪ್ರದೇಶದ ಪ್ರಮುಖ ನದಿಗಳಾದ ರಾಪ್ತೀ, ಘಾಘಾರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರ ಜೊತೆ ಮಾನಸ ಸರೋವರದ ಸಮೀಪವಿರುವ ಟಿಬೆಟ್ ನ ಪ್ಲೇಟೂ ನದಿ ಕೂಡ ತುಂಬಿ ಹರಿಯುತ್ತಿದೆ. ಇದರಿಂದಾಗಿ ಬಾರಾಬಂಕಿ, ಸಿದ್ದಾರ್ಥನಗರ ಮತ್ತು ಫೈಜಾಬಾದ್ ಗಳಲ್ಲೂ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಪಾಟ್ನದಲ್ಲಿ ಸಂತ್ರಸ್ತರಿಂದ ಪ್ರತಿಭಟನೆ
ಮಳೆಯಿಂದ ತತ್ತರಿಸಿರುವ ಪಾಟ್ನದ ಜನತೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಕಾಜಿರಂಗದಲ್ಲಿ ಪ್ರಾಣಿಗಳಿಗೆ ಭೀತಿ
ಭಾರಿ ಮಳೆ, ಪ್ರವಾಹದಿಂದ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಸಂಪೂರ್ಣ ಜಲಮಯವಾಗಿದ್ದು, ಹಲವಾರು ಪ್ರಾಣಿ, ಪಕ್ಷಿಗಳು ಜೀವ ಉಳಿಸಿಕೊಳ್ಳಲು ಯತ್ನಿಸುತ್ತಿವೆ.
ತೆಹ್ರಿ ಗಾರ್ವಾಲ್ ನಲ್ಲಿ ಸೇತುವೆ ಕುಸಿತ
ನಾಗಿನಿ: ಪ್ರವಾಹದಿಂದಾಗಿ ಹೆನ್ವಾಲ್ ನದಿ ತುಂಬಿ ಹರಿದಿದ್ದು ಮಾರ್ಗ ಮಧ್ಯದಲ್ಲಿರುವ ಎಲ್ಲಾ ಸೇತುವೆಗಳು ನದಿಗೆ ಆಹುತಿಯಾಗಿವೆ.
ರಕ್ಷಣಾ ಕಾರ್ಯಕ್ಕೆ ಭಾರೀ ಹಿನ್ನಡೆ
ಪ್ರವಾಹದಿಂದಾಗಿ ಸಂಪರ್ಕಗಳು ಕಡಿತಗೊಂಡಿರುವುದು ಮತ್ತು ರಸ್ತೆಗಳು, ಸೇತುವೆಗಳು ಕೊಚ್ಚಿ ಹೋಗಿರುವುದರಿಂದಾಗಿ ರಕ್ಷಣಾ ಕಾರ್ಯಕ್ಕೆ ಭಾರೀ ಹಿನ್ನಡೆಯಾಗುತ್ತಿದೆ. ಅಲ್ಲದೆ ಮಳೆ ಕೂಡ ಸುರಿಯುತ್ತಿದೆ
ಉತ್ತರಪ್ರದೇಶ, ಉತ್ತರಾಖಂಡ್, ಬಿಹಾರ ತತ್ತರ
ನೇಪಾಳದ ಭಾಲುಬಂಗ್, ಭೈರವ ಮತ್ತು ಕುಸುಮ್ ಡ್ಯಾಮ್ಗಳಿಂದ ಭಾರೀ ಪ್ರಮಾಣದ ನೀರು ಬಿಡಲಾಗಿದ್ದು, ಉತ್ತರ ಪ್ರದೇಶದ ಸರಯೂ ಮತ್ತು ಶಾರದಾ ನದಿಗಳಲ್ಲಿಯೂ ಪ್ರವಾಹ ಉಕ್ಕಿ ಹರಿಯುತ್ತಿದೆ.
ಈ ಭೀಕರ ಪ್ರವಾಹಕ್ಕೆ ಉತ್ತರಪ್ರದೇಶ, ಉತ್ತರಾಖಂಡ್, ಬಿಹಾರ ರಾಜ್ಯಗಳಲ್ಲಿ ಪ್ರಮುಖವಾಗಿ ಹೆಚ್ಚು ಪ್ರಮಾಣದ ಸಾವುನೋವು ಸಂಭವಿಸಿವೆ ಎಂದು ಉತ್ತರಪ್ರದೇಶ ನೀರಾವರಿ ಇಲಾಖೆ ಮುಖ್ಯ ಕಾರ್ಯದರ್ಶಿ ದೀಪಕ್ ಸಿಂಘಾಲ್ ಹೇಳಿದ್ದಾರೆ.ಅಸ್ಸಾಂನಲ್ಲೂ ಪ್ರವಾಹದ ಅಬ್ಬರ
ಅಸ್ಸಾಂನಲ್ಲೂ ಪ್ರವಾಹದ ಅಬ್ಬರ ಜೋರಾಗುತ್ತಿದ್ದು, ಗ್ರಾಮಸ್ಥರು ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳುವ ಸಾಹಸ ಮಾಡುತ್ತಿದ್ದಾರೆ.
ನಾಗಾಂವ್ ಜಿಲ್ಲೆಯಲ್ಲಿನ ರಕ್ಷಣಾ ಕಾರ್ಯ
ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿನ ರಕ್ಷಣಾ ಕಾರ್ಯಕ್ಕೆ ಸೇನೆಯ ಯೋಧರು ನೆರವಾಗಿದ್ದು, ಕಾಲಾಪಾನಿ ಗ್ರಾಮದಲ್ಲಿ ಹಲವಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ.
ಮಾರಿಗಾಂವ್ ನಲ್ಲಿ ಆಟೋರಿಕ್ಷಾ ಸವಾರಿ
ಪ್ರವಾಹ ಪೀಡಿತ ಅಸ್ಸಾಂನಲ್ಲಿ ಆಟೋರಿಕ್ಷಾ ಸವಾರಿ ಬಾಲಿಮುಖ್ ಗ್ರಾಮದಲ್ಲಿ ಕಂಡು ಬಂದಿದ್ದು ಹೀಗೆ
ಬಾರಾಬಂಕಿಯಲ್ಲಿನ ಪ್ರವಾಹದ ಚಿತ್ರ
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿನ ಪ್ರವಾಹದ ಚಿತ್ರ.. ಎಲ್ಲಾ ಚಿತ್ರಗಳ ಕೃಪೆ : ಪಿಟಿಐ