ಮೋದಿ ಪ್ರಧಾನಿಯಾದ್ರೂ ಪಾಕ್ ತಂಟೆ ತಪ್ಪಿಲ್ವೇ!
ನವದೆಹಲಿ, ಜು 23: ಚುನಾವಣಾಪೂರ್ವ ಸಭೆಗಳಲ್ಲಿ ಉಗ್ರರಿಗೆ ಮತ್ತು ಉಗ್ರರನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಖಡಕ್ ಸಂದೇಶ ರವಾನಿಸಿದ್ದರು. ಆದರೂ, ಪಾಕ್ ಇದ್ಯಾವದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ.
ಕೇಂದ್ರದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದ ನಂತರ ಅಂದರೆ ಹೆಚ್ಚುಕಮ್ಮಿ ಐವತ್ತು ದಿನಗಳಲ್ಲಿ ಪಾಕಿಸ್ತಾನ 19 ಬಾರಿ ಗಡಿ ಉಲ್ಲಂಘನೆ ಮಾಡಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಮಂಗಳವಾರ (ಜು 22) ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಇದುವರೆಗೆ ಪಾಕಿಸ್ತಾನ ಪಡೆಗಳು 19 ಬಾರಿ ಸ್ಪಷ್ಟ ಗಡಿ ಉಲ್ಲಂಘನೆ ಮಾಡಿವೆ. ನಮ್ಮ ಯೋಧರು ಪಾಕ್ ಪಡೆಗಳಿಗೆ ಸೂಕ್ತ ಉತ್ತರ ನೀಡಿ ಹೊರಗಟ್ಟಿವೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಜೇಟ್ಲಿ, ನಾವು ತಲೆತಗ್ಗಿಸಿಲ್ಲ ಮತ್ತು ನಮ್ಮ ಸರಕಾರ ಯಾವ ಭಾರತೀಯರೂ ತಲೆತಗ್ಗಿಸಲೂ ಬಿಡುವುದಿಲ್ಲ ಎಂದು ಆಜಾದ್ ಪ್ರಶ್ನೆಗೆ ಉತ್ತರಿಸಿದ್ದಾರೆ.
ಮೋದಿ ಹೇಳಿದ್ದೇನು, ಆಗುತ್ತಿರುವುದೇನು? ಗುಲಾಂ ನಬಿ ಆಜಾದ್ ಪ್ರಶ್ನೆ. ಮುಂದೆ ಓದಿ..
ಸತತವಾಗಿ ಪಾಕ್ ಪಡೆಯಿಂದ ಗಡಿ ಉಲ್ಲಂಘನೆ
ಈ ವರ್ಷದ ಆರಂಭದಿಂದ ಜುಲೈ ಹದಿನೇಳರವರೆಗೆ ಇದುವರೆಗೆ ಜಮ್ಮು ಕಾಶ್ಮೀರ ಮತ್ತು ಅಂತರಾಷ್ಟೀಯ ಗಡಿಯಲ್ಲಿ ಒಟ್ಟು 54 ಬಾರಿ ಗಡಿ ಉಲ್ಲಂಘನೆಯಾಗಿದೆ - ಅರುಣ್ ಜೇಟ್ಲಿ.
ಹೊಸ ಸರಕಾರ ಬಂದ ನಂತರ ಗಡಿ ಉಲ್ಲಂಘನೆ
ಕೇಂದ್ರದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದ ನಂತರ (ಮೇ 26 ರಿಂದ ಜುಲೈ 17ರ ವರೆಗೆ) ಹದಿನೇಳು ಬಾರಿ ಪಾಕ್ ಪಡೆಗಳು ಗಡಿ ಉಲ್ಲಂಘನೆ ಮಾಡಿ ನಮ್ಮ ತಂಟೆಗೆ ಬಂದಿವೆ. ನಮ್ಮ ಪಡೆಗಳು ಪಾಕ್ ಪಡೆಗಳನ್ನು ಹಿಮ್ಮೆಟ್ಟಿಸಿ ಬುದ್ದಿ ಕಲಿಸಿವೆ ಎಂದು ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಎಲ್ಲಾ ಗಡಿ ಉಲ್ಲಂಘನೆ ಪಾಕಿಸ್ತಾನಕ್ಕೆ ವರದಿಯಾಗಿದೆ
ಹೊಸ ಸರಕಾರದ ಅವಧಿಯಲ್ಲಿ ಪಾಕ್ ಪಡೆಯ ಗಡಿ ಉಲ್ಲಂಘನೆಯ ದುಸ್ಸಾಸಹದ ಮತ್ತು ಭಾರತ ತೆಗೆದುಕೊಂಡ ಕ್ರಮದ ಬಗ್ಗೆ ಪಾಕಿಸ್ತಾನದ ರಕ್ಷಣಾ ಸಚಿವಾಲಯಕ್ಕೆ ವರದಿ ನೀಡಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಕಾರಣಗಳಿಂದಾಗಿ ಈ ಬಗ್ಗೆ ನಾವು ಪಾಕಿಸ್ತಾನಕ್ಕೆ ವರದಿ ನೀಡಬೇಕಾಗುತ್ತದೆ.
ಗುಲಾಂ ನಬಿ ಆಜಾದ್ ಹೇಳಿದ್ದೇನು?
ವಿಪಕ್ಷದ ನಾಯಕ ಗುಲಾಂ ನಬಿ ಆಜಾದ್, ಮೋದಿ ಚುನಾವಣಾ ಪೂರ್ವ ಸಭೆಗಳಲ್ಲಿ ಯುಪಿಎ ಸರಕಾರ ಗಡಿ ಉಲ್ಲಂಘನೆ ವಿಚಾರದಲ್ಲಿ ಭಾರತೀಯರು ತಲೆತಗ್ಗಿಸುವಂತಾಯಿತು ಎಂದು ಹೇಳಿದ್ದರು. ಈಗ ನಿಮ್ಮ ಸರಕಾರದ ಅವಧಿಯಲ್ಲಿ ಆಗುತ್ತಿರುವುದು ಏನು ಎಂದು ರಕ್ಷಣಾ ಸಚಿವರನ್ನು ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷದ ನಾಯಕರಿಗೆ ಜೇಟ್ಲಿ ನೀಡಿದ ಸ್ಪಷ್ಟನೆ
ಪ್ರಮಾಣವಚನ ಸಮಾರಂಭಕ್ಕೆ ಪಾಕ್ ಪ್ರಧಾನಿ ನವಾಬ್ ಶರೀಫ್ ದೆಹಲಿಗೆ ಆಗಮಿಸಿದ್ದ ಸಮಯದಲ್ಲಿ ಮೋದಿ, ಸ್ಪಷ್ಟ ಮಾತಿನಿಂದ ಈ ಬಗ್ಗೆ ಪಾಕ್ ಪ್ರಧಾನಿಗೆ ತಿಳಿಸಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಕದಡಬಾರದು ಎನ್ನುವುದು ನಮ್ಮ ಉದ್ದೇಶ, ನಮ್ಮ ಸರಕಾರ ಸೂಕ್ತ ಹೆಜ್ಜೆ ಇಡಲಿದೆ ಎಂದು ಜೇಟ್ಲಿ ಸ್ಪಷ್ಟನೆ ನೀಡಿದ್ದಾರೆ.