ಮಧ್ಯಪ್ರದೇಶದ ಗ್ರಾಮದಲ್ಲಿ 1ಸಾವಿರ ಕೇಜ್ರಿವಾಲರು !
ಭೋಪಾಲ್, ಏ 19: ಅತಿಕಮ್ಮಿ ಅವಧಿಯಲ್ಲಿ ರಾಜಕೀಯ ಏಣಿಯ ಪರಾಕಾಷ್ಠೆ ತಲುಪಿದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೆಸರಿನಲ್ಲಿ ಒಂದು ಸಾವಿರ 'ನಕಲಿ ಕೇಜ್ರಿವಾಲ್ 'ಮಧ್ಯಪ್ರದೇಶದ ಕಾಂಡ್ವಾ ಜಿಲ್ಲೆಯ ಗ್ರಾಮವೊಂದರಲ್ಲಿದ್ದಾರಂತೆ!
ಇದು ಅಭಿಮಾನವೋ ಅಥವಾ ಅಭಿಮಾನದ ಅತಿರೇಕವೋ, ಒಟ್ಟಿನಲ್ಲಿ ಕಾಂಡ್ವಾ ಜಿಲ್ಲೆಯ ಗೋಲಂಗಾನ್ ಎನ್ನುವ ಗ್ರಾಮದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ತಮ್ಮನ್ನು ತಾವು ಕೇಜ್ರಿವಾಲ್ ಎಂದು ಕರೆದು ಕೊಳ್ಳುತ್ತಿದ್ದಾರಂತೆ.
ಕೇಜ್ರಿವಾಲ್ ಮೇಲಿನ ಅತಿಯಾದ ಪ್ರೀತಿಯಿಂದ ಮಹಿಳೆಯರೂ ತಮ್ಮನ್ನು ಬಂದವರಿಗೆಲ್ಲಾ ಕೇಜ್ರಿವಾಲ್ ಎಂದೇ ಪರಿಚಯಿಸಿಕೊಳ್ಳುತ್ತಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. (ಭ್ರಷ್ಟ ರಾಜಕಾರಣಿಗಳ ಆಸ್ತಿ ಮುಟ್ಟುಗೋಲು)
ಕೇಜ್ರಿವಾಲ್ ಮೇಲಿನ ಪ್ರೀತಿ, ವಿಶ್ವಾಸದಿಂದ ನಾವು ತಮ್ಮನ್ನು ಕೇಜ್ರಿವಾಲ್ ಎಂದು ಕರೆಸಿಕೊಳ್ಳುತ್ತಿದ್ದೇವೆ. ಇದಕ್ಕಾಗಿ ನಮಗೆ ಹೆಮ್ಮೆಯಿದೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಭೈಕುಭಾಯಿ.
ಕೇಜ್ರಿವಾಲ್ ಮೇಲಿನ ಪ್ರೀತಿ ಇಷ್ಟಕ್ಕೇ ಮೀಸಲಾಗದೇ, ಗ್ರಾಮದಲ್ಲಿರುವ ಎಲ್ಲಾ ಮೊಬೈಲ್ ಫೋನುಗಳ ರಿಂಗ್ ಟೋನ್ 'ಮೇ ಹ್ಹೂಂ ಆಮ್ ಆದ್ಮಿ' ಎಂದು ರಿಂಗಣಿಸುತ್ತದೆ ಎಂದು ಗ್ರಾಮದ ರೈತ ಸೋಹನಲಾಲ್ ಪಟೇಲ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಕಾಂಡ್ವಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ಬಿಜೆಪಿಯಿಂದ ನಂದಕುಮಾರ್ ಸಿಂಗ್ ಚೌಹಾಣ್ ಮತ್ತು ಕಾಂಗ್ರೆಸ್ಸಿನಿಂದ ಅರುಣ್ ಯಾದವ್ ಸ್ಪರ್ಧಿಸುತ್ತಿದ್ದಾರೆ. ಆದರೆ ಅವರಿಬ್ಬರೂ ಈ ಗ್ರಾಮಕ್ಕೆ ಕಾಲಿಡುತ್ತಿಲ್ಲ.
ಇಬ್ಬರೂ ರಾಷ್ಟೀಯ ಪಕ್ಷದ ಅಭ್ಯರ್ಥಿಗಳಿಗೆ ಈ ಗ್ರಾಮದಲ್ಲಿ ಒಂದೂ ಮತ ಬೀಳುವುದಿಲ್ಲ ಎಂದು ತಿಳಿದಿದೆ. ನಮ್ಮ ಮತವೇನಿದ್ದರೂ ಕ್ಷೇತ್ರದ್ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಲೋಕ್ ಅಗರವಾಲ್ ಅವರಿಗೆ ಅನ್ನುತ್ತಾರೆ ಗ್ರಾಮದ ಹಿರಿಯ ಮುಖಂಡ ಗಿರಿರಾಜ್ ಗಿರಿ.
ಹಿಂದೊಮ್ಮೆ ಇಮ್ರಾನ್ ಖಾನ್ ತನ್ನ ನಾಯಕತ್ವದ ಅಡಿಯಲ್ಲಿ ಪಾಕಿಸ್ಥಾನಕ್ಕೆ ವಿಶ್ವಕಪ್ ಏಕದಿನ ಕ್ರಿಕೆಟ್ ಗೆಲ್ಲಿಸಿ ಕೊಟ್ಟಿದ್ದರು. ಆ ಸಮಯದಲ್ಲಿ ಇಮ್ರಾನ್ ಜನಪ್ರಿಯತೆ ಎಷ್ಟರ ಮಟ್ಟಿಗೆ ಏರಿತ್ತೆಂದರೆ ಮುಸ್ಲಿಂ ಪ್ರಾಭ್ಯಲ್ಯವಿರುವ ರಾಷ್ಟ್ರಗಳಲ್ಲಿ ಹುಟ್ಟಿದ ಮಕ್ಕಳಿಗೆ ಇಮ್ರಾನ್ ಖಾನ್ ಎಂದು ಹೆಸರಿಡಲಾಗಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.