ನರ್ಮದಾ ಅಣೆಕಟ್ಟು ಎತ್ತರ ಏರಿಕೆ, ಲಕ್ಷಾಂತರ ಮಂದಿಗೆ ಸಂಕಷ್ಟ
ಅಹ್ಮದಾಬಾದ್, ಜೂ. 12: ಸರ್ದಾರ್ ಸರೋವರ್ ಅಣೆಕಟ್ಟನ್ನು 17 ಮೀಟರ್ ಏರಿಸಲು ನರ್ಮದಾ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದೆ. ಅಣೆಕಟ್ಟನ್ನು ಈಗಿರುವ 121 ಮೀ.ನಿಂದ 138 ಮೀಟರ್'ಗೆ ಎತ್ತರಿಸಲು ಪ್ರಾಧಿಕಾರದಿಂದ ಅನುಮತಿ ದೊರೆತಿದೆ. ಈ ಆದೇಶದಿಂದಾಗಿ ಸುಮಾರು ಎರಡೂವರೆ ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆದರೆ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮುಳುಗಡೆ ಅಪಾಯವಿರುವ ಪ್ರದೇಶದಲ್ಲಿ ಎರಡೂವರೆ ಲಕ್ಷ ಜನ ವಾಸವಿದ್ದಾರೆ. ಅವರೆಲ್ಲರಿಗೂ ಇದರಿಂದ ಸಮಸ್ಯೆ ಉಂಟಾಗುತ್ತದೆ. ಇದು ಜನರಿಗೆ ಮಾಡುವ ಅನ್ಯಾಯ ಎಂದು ನರ್ಮದಾ ಬಚಾವೊ ಹೋರಾಟ ಸಮಿತಿ ನೇತೃತ್ವದ ವಹಿಸಿದ್ದ ಸಾಮಾಜಿಕ ಕಾರ್ಯಕರ್ತೆ, ಆಮ್ ಆದ್ಮಿ ಪಕ್ಷದ ನಾಯಕಿ ಮೇಧಾ ಪಾಟ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಳುಗಡೆ ಪ್ರದೇಶದ ಜನರಿಗೆ ಕಾನೂನಿನ ಪ್ರಕಾರ ಸಿಗಬೇಕಾದ ಪುನರ್ ವಸತಿ ಸೌಲಭ್ಯವಾಗಲಿ, ಪರಿಹಾರ ನಿಧಿಯಾಗಲಿ ಸಿಗುವುದಿಲ್ಲ. ಪರಿಸರ, ಜನಜೀವನಕ್ಕೆ ಮಾರಕವಾಗಿದೆ. ಮೋದಿ ಅವರು ಗುಜರಾತಿನ ಮಾಜಿ ಸಿಎಂ ಆಗಿ ಪ್ರತಿಕ್ರಿಯೆ ನೀಡುತ್ತಾರೋ ಅಥವಾ ಪ್ರಧಾನಿಯಾಗಿ ಜವಾಬ್ದಾರಿ ನಡೆ ಇಡುತ್ತಾರೋ ನೋಡಬೇಕಿದೆ ಎಂದು ನರ್ಮದಾ ಬಚಾವೋ ಹೋರಾಟ ಸಮಿತಿ ಹೇಳಿದೆ.
ಸಂಬಂಧಪಟ್ಟ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು ಎಂದು ಹೋರಾಟಗಾರರು ಹಾಗು ಸಂತ್ರಸ್ತರು ಆಗ್ರಹಿಸಿದ್ದಾರೆ. 2006ರಲ್ಲಿ ನರ್ಮದಾ ನಿಯಂತ್ರಣ ಪ್ರಾಧಿಕಾರ ಅಣೆಕಟ್ಟಿನ ಎತ್ತರವನ್ನು 121.92 ಮೀಟರ್ ಗಳಿಗೆ ಎತ್ತರಿಸಲು ನಿರ್ದೇಶಿಸಿತ್ತು. ಅಣೆಕಟ್ಟಿನ ಎತ್ತರವನ್ನು ಏರಿಸುವುದರಿಂದ ಸುಮಾರು 6.8 ಲಕ್ಷ ಹೆಕ್ಟೇರುಗಳಷ್ಟು ಹೆಚ್ಚುವರಿ ಜಮೀನಿಗೆ ನೀರಾವರಿ ಒದಗಿಸಬಹುದು ಹಾಗೂ ಶೇ 40 ರಷ್ಟು ಹೆಚ್ಚು ವಿದ್ಯುತ್ ಉತ್ಪಾದನೆ ಸಾಧ್ಯವಿದೆ ಎಂದು ಗುಜರಾತ್ ಸರ್ಕಾರ ಸಮರ್ಥಿಸಿಕೊಂಡಿದೆ.