ನಿಜಾಮಾಬಾದಿನಲ್ಲಿ ಮೋದಿ- ಪವನ್ ಮೋಡಿ
ನಿಜಾಮಾಬಾದ್, ಏ.22: ಬಿಜೆಪಿ ಹಾಗೂ ಟಿಡಿಪಿ ಮೈತ್ರಿಯ ಶಕ್ತಿ ಪ್ರದರ್ಶನಕ್ಕೆ ನಿಜಾಮಾಬಾದ್ ವೇದಿಕೆ ಒದಗಿಸಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಭಾರತ್ ವಿಜಯ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ತೆಲುಗು ತಲ್ಲಿ(ಅಮ್ಮ)ಯನ್ನು ಕೊಂದು ಮಗನನ್ನು ಬೆಳೆಸುವ ಉದ್ದೇಶ ಹೊಂದಿರುವ ಕಾಂಗ್ರೆಸ್ ಸರ್ಕಾರ ನಿಮಗೆ ಬೇಕೇ ಎಂದು ಮೋದಿ ಪ್ರಶ್ನಿಸಿದ್ದಾರೆ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಮೋದಿ ಅವರನ್ನು ಪ್ರಧಾನಿಯಾಗಿ ನೋಡುವುದು ನಮ್ಮೆಲ್ಲರ ಭಾಗ್ಯ ಎನ್ನುತ್ತಾ ಭಾಷಣ ಆರಂಭಿಸಿದರು. ನಾನು ನಟನಾಗಿ ಇಲ್ಲಿ ಬಂದಿಲ್ಲ. ಮೋದಿ ಅವರ ನಾಯಕತ್ವವನ್ನು ಬೆಂಬಲಿಸಲು ಬಂದಿದ್ದೇನೆ. ದೇಶದ ಸಮಗ್ರತೆ, ಏಕತೆಗೆ ನಾವೆಲ್ಲರೂ ಮೋದಿ ಅವರನ್ನು ಬೆಂಬಲಿಸಬೇಕಿದೆ ಎಂದರು. ಇದೇ ಮೊದಲ ಬಾರಿಗೆ ಆಂಧ್ರಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಪವನ್ ಪಾಲ್ಗೊಂಡಿದ್ದು, ಮೋದಿ ಅವರ ಜತೆ ವೇದಿಕೆ ಹಂಚಿಕೊಂಡಿದ್ದಾರೆ.ಸಮಾವೇಶದ ಎಲ್ಲೆಡೆ, ಟಿಡಿಪಿ, ಬಿಜೆಪಿ ಬಾವುಟಗಳ ಸರಿ ಸಮಾನವಾಗಿ ಪವನ್ ಅವರ ಜನಸೇನಾ ಪಕ್ಷದ ಬಾವುಟಗಳು ರಾರಾಜಿಸುತ್ತಿದ್ದವು.
ಮೋದಿ ಭಾಷಣದ ಮುಖ್ಯಾಂಶಗಳು:
* ಸುಮಾರು 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದೆ ಎಂದು ತಿಳಿದು ಬಂದಿದೆ. ಇಂಥ ಬಿಸಿಲಿನಲ್ಲಿ ತಾಳ್ಮೆಯಿಂದ ಕುಳಿತಿರುವ ನಿಮಗೆ ನನ್ನ ವಿನಯಪೂರ್ವಕ ನಮಸ್ಕಾರಗಳು. ನಿಮ್ಮ ತಾಳ್ಮೆಗೆ ಬೆಲೆ ಸಿಗಬೇಕಿದೆ.
* ತ್ಯಾಗ ಬಲಿದಾನ ನಿಮ್ಮದು, ಅದರ ಸುಖಾನುಭವ ಕಾಂಗ್ರೆಸ್ ಪಕ್ಷದ್ದಾಗಿದೆ. ಇದು ಇಲ್ಲಿಗೆ ನಿಲ್ಲಬೇಕು.
* ತೆಲಂಗಾಣ ರಾಜ್ಯ ಯಾರೊಬ್ಬರ ಕೊಡುಗೆಯಲ್ಲ, ಅದು ನಿಮ್ಮ ರಾಜ್ಯ, ನಿಮ್ಮ ರಾಜ್ಯಕ್ಕೆ ಅನ್ಯಾಯ ಮಾಡಲು ಬಿಡುವುದಿಲ್ಲ.
* ತೆಲಂಗಾಣ ರಚಿಸಿ ಕಾಂಗ್ರೆಸ್ ಬರೀ ಗಡಿ ರೇಖೆ ಎಳೆದಿರಬಹುದು, ನಾನು ನಿಮ್ಮ ಭಾಗ್ಯರೇಖೆ ಬರೆಯಲು ಬಂದಿದ್ದೇನೆ.
* ಮರ್ ಜವಾನ್ ಮರ್ ಕಿಸಾನ್ ಸಿದ್ಧಾಂತ ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿದೆ.
* ಈ ಭಾಗದ ಸಂಪನ್ಮೂಲವನ್ನು ಲೂಟಿ ಮಾಡಿ ನೌಕರಿಗಾಗಿ ಜನ ಪರದಾಡುವಂತೆ ಮಾಡಿದ್ದಾರೆ.
* ತೆಲುಗು ತಾಯಿಯನ್ನು ಕೊಂದು ಮಗನನ್ನು ಬೆಳೆಸಲು ಕಾಂಗ್ರೆಸ್ ಯೋಜಿಸಿದೆ. ಇದು ನಿಮಗೆ ಬೇಕೆ? ಸೀಮಾಂಧ್ರ ಇರಲಿ ತೆಲಂಗಾಣ ಇರಲಿ ತಾಯಿ ಎಂದಿಗೂ ತಾಯಿ...ತಾಯಿ ಕೊಂದು ಖುಷಿ ಪಡಲು ಸಾಧ್ಯವೇ?
* ಸೂರತ್ ನಲ್ಲಿ ಸುಮಾರು 3 ಲಕ್ಷ ಮಂದಿ ತೆಲಂಗಾಣ ಮೂಲದವರಿದ್ದಾರೆ. ನಿಮ್ಮ ಜನರ ಆಶೋತ್ತರಗಳ ಅರಿವು ನನಗಿದೆ.
* ಹೊಸದಾಗಿ ರಾಜ್ಯ ರಚನೆ ಮಾಡಿ ಕೈಕಟ್ಟಿ ಕುಳಿತ ಕಾಂಗ್ರೆಸ್ ಸರ್ಕಾರದಿಂದ ನಿಮಗೇನಾದರೂ ಲಾಭವಾಗಿದೆಯೇ? ಹುಟ್ಟಿಸಿದರೆ ಸಾಲದು, ಪಾಲನೆ, ಪೋಷಣೆ ಕೂಡಾ ಗೊತ್ತಿರಬೇಕು.
ಪಿವಿ ನರಸಿಂಹರಾವ್ ಬಗ್ಗೆ: ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿ ನಿಜಕ್ಕೂ ಬೇಸರ ತರಿಸುತ್ತದೆ. ತಮ್ಮ ಅಧಿಕಾರ ಅವಧಿಯಲ್ಲಿ ಕೆಲವು ಉತ್ತಮ ಯೋಜನೆಗಳನ್ನು ನೀಡಿದ ನರಸಿಂಹ ರಾವ್ ಅವರನ್ನು ಕಾಂಗ್ರೆಸ್ ಎಂದಿಗೂ ಸ್ಮರಿಸಿಲ್ಲ.
* ರಾಜೀವ್ ಗಾಂಧಿ ಅವರು ದಲಿತ ಸಿಎಂ ಟಿ ಅಂಜಯ್ಯ ಅವರನ್ನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅವಮಾನ ಮಾಡಿದ್ದಕ್ಕೆ ಚುನಾವಣೆ ಸೋಲಬೇಕಾಗಿ ಬಂದಿತ್ತು ಎಂಬುದು ನಿಮಗೆ ನೆನಪಿರಲಿ.
* ಈ ಕುಟುಂಬ ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಅಧಿಕಾರ ನಡೆಸುತ್ತದೆ. ನೀವು ಸ್ವಾರ್ಥಿಗಳಲ್ಲ ನೀವು ಸ್ವಾಭಿಮಾನಿಗಳು, ನಿಮ್ಮ ರಾಜ್ಯದಿಂದ ಹೆಚ್ಚೆಚ್ಚು ಕಮಲಗಳನ್ನು ದೆಹಲಿಗೆ ಕಳುಹಿಸಿ ಎಂದು ಮೋದಿ ಕೇಳಿಕೊಂಡರು.
ಮೋದಿ
ಅವರ
ಭಾಷಣದ
ವಿಡಿಯೋ
ನೋಡಿ