ವಾರಣಾಸಿಯಲ್ಲಿ ನಾ ಬಿಟ್ಟ ನನಗಿಷ್ಟವಾದ ಜಹಾಂಗೀರ್
ನಾನಿಂದು ಬರೆಯುತ್ತಿರುವ ಲೇಖನಕ್ಕೂ ಇಂದು ವಾರಣಾಸಿಯಲ್ಲಿ ನಡೆಯುತ್ತಿರುವ ಲೋಕಸಭಾ ಸಮರದ ಬಿಗ್ ಫೈಟಿಗೂ ಅದೇನೂ ಕಾಕತಾಳೀಯ ಸಂಬಂಧವೋ. ಸುಮಾರು ಮೂರು ದಶಕಗಳ ಹಿಂದಿನ ಕಾಶಿ (ವಾರಣಾಸಿ/ಬನಾರಸ್/ ಕಾಶಿ) ಯಾತ್ರೆಯ ಬಗ್ಗೆ ನನ್ನ ಅನುಭವದ ಬಗ್ಗೆ ಒಂದು ಪುಟ್ಟ ಲೇಖನ.
ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದ ಸಮಯ (ಉಡುಪಿಯಲ್ಲಿನ ಸರಕಾರಿ ಕನ್ನಡ ಶಾಲೆ). ತಂದೆ ಮತ್ತು ತಾಯಿ ಉತ್ತರ ಭಾರತ ಪ್ರವಾಸಕ್ಕೆ ಹೊರಟಿದ್ದರು. ಆ ಸಮಯದಲ್ಲಿ ವಾರ್ಷಿಕ ಸ್ಕೂಲ್ ಡೇ ಕಾರ್ಯಕ್ರಮವೊಂದರಲ್ಲಿ ನಾನು ಪಾತ್ರವೊಂದರಲ್ಲಿ ಅಭಿನಯಿಸ ಬೇಕಾಗಿತ್ತು.
ಸ್ಕೂಲ್
ಡೇ
ಕಾರ್ಯಕ್ರಮಕ್ಕೆ
ಚಕ್ಕರ್
ಹೊಡೆದು
ತಂದೆಯ
ಬಲವಂತದ
ಮೇಲೆ
ಅವರ
ಜೊತೆ
ನಾನೂ
ಉತ್ತರ
ಭಾರತ
ಪ್ರವಾಸಕ್ಕೆ
ಹೊರಟೆ.
ಉಡುಪಿಯಿಂದ
ಮುಂಬೈಗೆ
ಬಸ್ಸಿನಲ್ಲಿ
ಅಗಮಿಸಿ,
ಅಲ್ಲಿಂದ
ಅಲಹಾಬಾದಿಗೆ
ರೈಲಿನಲ್ಲಿ
ಪಯಣ.
ಮೊದಲ
ಬಾರಿಗೆ
ರೈಲಿನಲ್ಲಿ
ಪ್ರಯಾಣಿಸಿದ
ಅನುಭವ.
[ಕಾಶಿಯಾತ್ರೆ
ಎಂಬ
ಸುಸಂಬದ್ಧ
ಮದುವೆ
ಸಂಪ್ರದಾಯ]
ರೈಲು ರಾಜ್ಯದ ಗಡಿ ದಾಡಿದ ನಂತರ ಮುಖ್ಯವಾಗಿ ಉತ್ತರ ಪ್ರದೇಶದ ಗಡಿ ಆಗಮಿಸುತ್ತಿದಂತೆ, ಅಡ್ವಾನ್ಸ್ ಬುಕ್ಕಿಂಗ್, ಎಸಿ ಕೋಚು ಇದಕ್ಕೆ ಯಾವುದಕ್ಕೂ ಅಲ್ಲಿ ಬೆಲೆಯಿರಲಿಲ್ಲ. ಸೀಟು ಖಾಲಿ ಇದ್ದರೆ ಸಾಕು ಜನ ತುಂಬಿಕೊಳ್ಳುತ್ತಿದ್ದರು. ಇದಕ್ಕೆ ಚಕಾರ ಎತ್ತಿದರೆ, ಹಿಂದಿಯಲ್ಲಿ ತಿಂದು ಹಾಕಿಬಿಡುತ್ತಿದ್ದರು.
ಅಲಹಾಬಾದ್ (ಪ್ರಯಾಗ) ಪ್ರವೇಶಿಸುತ್ತಿದ್ದಂತೆ ರಾಜ್ಯದ ಪೌರೋಹಿತ್ಯರ ಒಡೆತನದ ಲಾಡ್ಜಿಂಗ್ ನಲ್ಲಿ ವಾಸ್ತವ್ಯ. ಅಲ್ಲಿಂದ ಗಂಗಾ ನದಿ ತಟದಲ್ಲಿ ಧಾರ್ಮಿಕ ವಿದಿವಿಧಾನ ಪೂರೈಸಲು ಕಿಂಚಿತ್ ಲೋಪದೋಷ ಬರದಂತೆ ವ್ಯವಸ್ಥೆ ಮಾಡಲಾಗಿತ್ತು. [ವಾರಣಾಸಿಯಲ್ಲಿ ಸತ್ತರೆ ಮುಕ್ತಿ ಸಿಗುವುದಂತೆ!]
ಪ್ರಯಾಗದಲ್ಲಿ ಗಂಗಾ ಪವಿತ್ರ ತ್ರಿವೇಣಿ ಸಂಗಮ ಸ್ನಾನದ ನಂತರ ಕಾಶಿಗೆ ಪ್ರಯಾಣ ಬೆಳಿಸಿದೆವು. ಅಲ್ಲಿ ಮತ್ತೆ ಕನ್ನಡಿಗರ ಮಾಲೀಕತ್ವದ ಲಾಡ್ಜಿಂಗ್ ನಲ್ಲಿ ವಾಸ್ತವ್ಯ. ಗಂಗಾ ಸ್ನಾನ ಮಾಡುತ್ತಿರುವಾಗಲೇ ಕಣ್ಮುಂದೆ ತೇಲಿ ಬರುತ್ತಿದ್ದ ಅರೆಬೆಂದ ಹೆಣಗಳು, ಧಾರ್ಮಿಕ ವಿದಿವಿಧಾನ, ತಂದೆಯಿಂದ ಪಿಂಡ ಪ್ರದಾನದ ನಂತರ ಕಾಶಿ ವಿಶ್ವೇಶ್ವರನ ದರ್ಶನ ಎಲ್ಲವೂ ಮರೆಯಲಾಗದ ನೆನಪು.
ಮೊದಲ ಬಾರಿಗೆ ಕಾಶಿ ವಿಶ್ವನಾಥನ ಲಿಂಗ ಮುಟ್ಟಿ ಪೂಜೆ ಮಾಡಿದ ಅನುಭವ, ಲಿಂಗಕ್ಕೆ ಗಂಗಾಜಲ ಹಾಕುತ್ತಿದ್ದಾಗ ಅದೇನೋ ಆನಂದ, ವಿಶೇಷ ಅನುಭವ. ವಿಶ್ವನಾಥನ ದರ್ಶನದ ನಂತರ ತಂದೆಯಿಂದ ಮತ್ತೆ ಪಿಂಡ ಪ್ರದಾನ.
ಕಾಶಿಯಲ್ಲಿ ಪಿಂಡಪ್ರಧಾನದ ನಂತರ ಪುರೋಹಿತರಿಂದ ನಿಮಗಿಷ್ಟವಾದ ಒಂದು ಸಿಹಿಭಕ್ಷವನ್ನು ನೀವು ಮತ್ತು ನಿಮ್ಮ ಪತ್ನಿ ಗಂಗೆಗೆ ಅರ್ಪಿಸಿ ಎನ್ನುವ ಮಾತು ಕೇಳಿಬಂತು. ನನ್ನ ತಂದೆಯಿಂದ ಜಿಲೇಬಿ ಭಕ್ಷ್ಯ ಎನ್ನುವ ಮಾತು ಕೇಳಿಬಂತು.
ಇದಾದ ನಂತರ ನಿಮ್ಮ ಮಗನನ್ನು ಕೇಳಿ ಎಂದು ಪೌರೋಹಿತ್ಯರು ಕೇಳಿದಾಗ, ಮಗನಿಗೆ ಇಷ್ಟವಾದ ಸಿಹಿತಿಂಡಿಯೆಂದರೆ ಜಹಾಂಗೀರ್ ಎಂದು, ತಂದೆ ಪುರೋಹಿತರ ಸಮ್ಮುಖದಲ್ಲೇ ಜಹಾಂಗೀರ್ ಇನ್ನು ಮುಂದೆ ನೀನು ತಿನ್ನಬಾರದೆಂದು ನನಗೆ ಹೇಳಿದರು. ನನಗೆ ಒಂದೇ ಕುತೂಹಲ, ತಂದೆ ಯಾಕೆ ಇನ್ನು ಮುಂದೆ ಜಹಾಂಗೀರ್ ತಿನ್ನ ಬೇಡ ಎಂದರೆಂದು. ಯಾಕೆ ನಾನು ಇನ್ನು ಮುಂದೆ ಅದನ್ನು ತಿನ್ನಬಾರದೆಂದು ನನ್ನ ತಾಯಿಯನ್ನು ಪೀಡಿಸಿಲಾರಂಭಿಸಿದೆ.
ಕಾಶಿ ಪ್ರವಾಸದ ನಂತರ ವಿಶ್ವನಾಥನ ದಯೆಯಿಂದ ಊರಿಗೆ ಕ್ಷೇಮವಾಗಿ ಸೇರಿದರೆ ಊರಿನಲ್ಲಿ ಕಾಶಿ ಸಮಾರಾಧನೆ ಮಾಡಬೇಕು. ಅಲ್ಲಿ ಯಾಕೆ ನಾವು ನಮಗಿಷ್ಟವಾದ ಸಿಹಿ ಪದಾರ್ಥವನ್ನು ಕಾಶಿಯಲ್ಲಿ ತ್ಯಜಿಸಬೇಕೆಂಕು ಎಂದು ವಿವರಿಸುತ್ತೇನೆಂದು ತಂದೆ ನನಗೆ ಸಮಾಧಾನ ಹೇಳಿದರು.
ಊರಿನಲ್ಲಿ ಎಲ್ಲಾ ಕಾರ್ಯಕ್ರಮದ ನಂತರ, ತಂದೆ ಕಾಶಿ ಯಾತ್ರೆಯ ಬಗ್ಗೆ ವಿವರಿಸಲಾರಂಭಿಸಿದರು. ಪೂರ್ವಜರು ಕಾಶಿಗೆ ಪ್ರಯಾಣ ಮಾಡಬೇಕೆಂದರೆ ಕಾಲ್ನಡಿಗೆಯಲ್ಲೇ ಪ್ರಯಾಣಿಸಬೇಕಿತ್ತಂತೆ. ದುರ್ಗಮವಾದ ರಸ್ತೆಗಳು, ಬೆಟ್ಟಗುಡ್ಡ, ಕಾಡುಪ್ರಾಣಿಗಳ ಹಾವಳಿ ಹೀಗೆ ತೀರ್ಥ ಯಾತ್ರೆಗೆ ಹೋದವರು ವಾಪಸ್ ಬರುತ್ತಾರೆ ಎನ್ನುವ ಗ್ಯಾರಂಟಿ ಇರಲಿಲ್ಲವಂತೆ.
ಕಾಶಿಗೆ ತೆರಳುವ ಮುನ್ನ ಮನೆದೇವರ ಮುಂದೆ ನಾಲ್ಕಾಣೆ (ಇಂದು ಚಲಾವಣೆಯಲ್ಲಿರದ ಇಪ್ಪತ್ತೈದು ಪೈಸಾ) ಕಾಣಿಕೆ ಇಟ್ಟು, ನಿನ್ನ ದರ್ಶನಕ್ಕೆ ನನ್ನ ಕುಟುಂಬದ ಅನುಮತಿ ಪಡೆದು ಬರುತ್ತಿದ್ದೇನೆ. ನಾನು ವಾಪಸ್ ಕುಟುಂಬ ಸೇರುವಂತಾಗುವುದು, ಬಿಡುವುದು ನಿನಗೆ ಬಿಟ್ಟ ವಿಚಾರ. ನೀನು ಕೊಟ್ಟ ಕ್ಷಣಿಕವಾದ ಈ ಜಗತ್ತಿನಲ್ಲಿ ನನಗಿಷ್ಟವಾದ ಒಂದು ಸಿಹಿಖಾದ್ಯವನ್ನು ನಿನ್ನ ಸನ್ನಿಧಾನದಲ್ಲಿ ಬಿಟ್ಟು ಬರುತ್ತೇನೆ ಎಂದು ಪ್ರಾರ್ಥನೆ ಮಾಡಬೇಕು. ಅದಕ್ಕಾಗಿಯೇ ಕಾಶಿಯಲ್ಲಿ ಇನ್ಮುಂದೆ ಆ ಸಿಹಿ ಪದಾರ್ಥವನ್ನು ತಿನ್ನಬೇಡ ಎಂದೆ ತಂದೆ ವಿವರಿಸಿದರು.
ಅದರಂತೆ ಕಾಶಿ ಯಾತ್ರೆಯ ಸಮಯದಲ್ಲಿ ಒಂದು ಸಿಹಿಖಾದ್ಯವನ್ನು ಬಿಟ್ಟುಬರುವ ಪದ್ದತಿ ಈಗಲೂ ನಮ್ಮ ಭಾಗದಲ್ಲಿ ಚಾಲ್ತಿಯಲ್ಲಿದೆ.