ಕೇರಳ ಪ್ರವೇಶಿಸಿದ ಮುಂಗಾರು
ತಿರುವನಂತಪುರಂ, ಜೂ.6: ಭಾರತಕ್ಕೆ ಮುಂಗಾರು ಪ್ರವೇಶವಾಗಿದೆ. ಜೂನ್. 6 ಶುಕ್ರವಾರದಂದು ಕೇರಳಕ್ಕೆ ಮುಂಗಾರು ಮಾರುತ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕೇರಳದ ಶೇ.80ರಷ್ಟು ಭಾಗಗಳಲ್ಲಿ ಮಳೆ ಬೀಳಲಾರಂಭಿಸಿದೆ. ಜೂನ್ ಮೊದಲಾರ್ಧದಲ್ಲಿ ಕಡಿಮೆ ಪ್ರಮಾಣದ ಮಳೆ ಬೀಳಲಿದ್ದು, ಜುಲೈ 10ಕ್ಕೆ ಬಿಹಾರವನ್ನು ಮಾನ್ಸೂನ್ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾ ನಿರ್ದೇಶಕ ಎಲ್.ಎಸ್. ರಾಥೋರ್ ಹೇಳಿದ್ದಾರೆ.
ಅರಬ್ಬೀ ಸಮುದ್ರದ ಮೂಲಕ ಕೇರಳವನ್ನು ಪ್ರವೇಶಿಸಿರುವ ಮುಂಗಾರು ಮಾರುತ ತಮಿಳುನಾಡು ಮತ್ತು ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ಮಳೆ ಸುರಿಸಿದೆ. ಮೊದಲ ವಾರದಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ.40 ರಷ್ಟುಕಡಿಮೆ ಮಳೆಯಾಗಲಿದ್ದು, ಜೂನ್ 15ರ ವೇಳೆಗೆ ಇಡೀ ಭಾರತವನ್ನು ಆವರಿಸಲಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿದ್ದು ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಮಳೆಯ ಆಗಮನವಾಗಲಿದೆ. ಆರಂಭದಲ್ಲಿ ಆರಂಭದಲ್ಲಿ ಕರಾವಳಿ ಜಿಲ್ಲೆಗಳು, ಪಶ್ಚಿಮ ಘಟ್ಟ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತದೆ. ಇಡೀ ರಾಜ್ಯದಲ್ಲಿ ಮುಂಗಾರು ವ್ಯಾಪಿಸಿಕೊಳ್ಳಲು ಒಂದು ವಾರ ಬೇಕಾಗುತ್ತದೆ.
ಜುಲೈ ಆಗಸ್ಟ್ ತಿಂಗಳಿನಲ್ಲಿ ದೇಶದೆಲ್ಲೆಡೆ ವಾಡಿಕೆಯ ಪ್ರಕಾರ ಬೀಳಬೇಕಾದ ಮಳೆಯ ಪ್ರಮಾಣದಲ್ಲಿ ಈ ವರ್ಷ ಶೇ.95ರಷ್ಟು ಕಡಿಮೆ ಮಳೆ ಬೀಳಲಿದೆ ಎಂದು ಇಲಾಖೆ ಈ ಹಿಂದೆಯೇ ತಿಳಿಸಿದೆ.