ರಾಹುಲ್ ಗೆ ಅಟಲ್ ಮೇಲೆ ಅದ್ಯಾಕೋ ಬಹಳ ಪ್ರೀತಿ?
ನವದೆಹಲಿ, ಏ 21: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಬೇರೆನೂ ವಿಚಾರ ಸಿಗದೇ ಮೋದಿ ವಿರುದ್ದ ರಾಹುಲ್ ಗಾಂಧಿ ವಾಗ್ದಾಳಿ ನಡೆಸುತ್ತಿದ್ದಾರೆಂದು ಬಿಜೆಪಿ ವ್ಯಂಗ್ಯವಾಡಿದೆ.
ವಾಜಪೇಯಿ ಸಕ್ರಿಯ ರಾಜಕಾರಣದಲ್ಲಿದ್ದರೆ ಅವರನ್ನೂ ಮೋದಿ ಮೂಲೆಗೆ ತಳ್ಳುತ್ತಿದ್ದರು ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ಪ್ರತಿಕ್ರಿಯಿಸುತ್ತಾ, ಇಷ್ಟು ವರ್ಷಗಳ ಕಾಂಗ್ರೆಸ್ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಫಲಿತಾಂಶದ ಮುನ್ನವೇ ಕಾಂಗ್ರೆಸ್ ಶಸ್ತ್ರತ್ಯಾಗ ಮಾಡಿದಂತೆ ಕಂಡುಬರುತ್ತಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ವಿನಾಕಾರಣ ಮೋದಿ ಮೇಲೆ ಕಾಂಗ್ರೆಸ್ ಟೀಕಾ ಪ್ರಹಾರ ಮಾಡುತ್ತಿದೆ. ವಾಜಪೇಯಿ ಮೇಲೆ ಇಷ್ಟು ದಿನದ ಇಲ್ಲದ ಪ್ರೀತಿ ರಾಹುಲ್ ಗಾಂಧಿಗೆ ಯಾಕೆ ಬಂತು ಎನ್ನುವುದನ್ನು ಮತದಾರರು ಅರ್ಥ ಮಾಡಿಕೊಳ್ಳುತ್ತಾರೆಂದು ಬಿಜೆಪಿ ತಿರುಗೇಟು ನೀಡಿದೆ.
ದೇಶ ಇಂದು ಅನುಭಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಸೊಲ್ಲೆತ್ತದೇ, ಬಿಜೆಪಿಯನ್ನು ಕೋಮುವಾದಿ ಎಂದು ದೂರಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ನಾವು ಮಹಿಳೆಯರಿಗೆ ರಕ್ಷಣೆ, ರೈತರಿಗೆ ಅನುಕೂಲವಾಗುವ ಸ್ಥಿತಿ ನಿರ್ಮಾಣ, ಯುವಕರಿಗೆ ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ಕಾಂಗ್ರೆಸ್ ಬಿಜೆಪಿ ಕೋಮುವಾದಿ, ಜಾತಿವಾದಿ ಎನ್ನುವ ಮೂಲಕ ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸಕ್ಕೆ ಮುಂದಾಗಿದೆ ಎಂದು ಮೋದಿ ದೂರಿದ್ದಾರೆ.
ಛತ್ತೀಸಘಡದ ಬಿಲಾಸ್ಪುರದಲ್ಲಿ ಭಾನುವಾರ (ಏ 20) ಮಾತನಾಡುತ್ತಿದ್ದ ಮೋದಿ, ದೇಶದಲ್ಲಿ ಇಂದು ಎದ್ದಿರುವ ಕಾಂಗ್ರೆಸ್ ವಿರೋಧಿ ಅಲೆ, ಬಿಜೆಪಿ ಪರ ಅಲೆಯನ್ನು ಎದುರಿಸಲು ಕಾಂಗ್ರೆಸ್ಸಿಗೆ ಶಕ್ತಿ ಇಲ್ಲದೇ ನನ್ನ ಮತ್ತು ಅಟಲ್ ಬಿಹಾರಿ ವಾಜಪೇಯಿ ನಡುವೆ ಭಿನ್ನಾಭಿಪ್ರಾಯ ಮೂಡುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿರುವುದು ಶೋಚನೀಯ ಎಂದು ಮೋದಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಮುಂಬೈ, ರಾಜಸ್ಥಾನದ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂದಿ ಹೇಳಿದ್ದೇನು?
ಮೋದಿ ಹಿರಿಯರಿಗೆ ಬೆಲೆ ಕೊಡುತ್ತಿಲ್ಲ
ಮೋದಿ ಬಿಜೆಪಿಯಲ್ಲಿ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ. ಜಸ್ವಂತ್ ಸಿಂಗ್ ಅವರಂತಹ ಹಿರಿಯರಿಗೇ ಮೋದಿ ಬೆಲೆ ಕೊಡಲಿಲ್ಲ - ರಾಹುಲ್ ಗಾಂಧಿ ರಾಜಸ್ಥಾನದ ಕರೌಲಿಯ ಸಾರ್ವಜನಿಕ ಸಭೆಯಲ್ಲಿ (ಭಾನುವಾರ, ಏ 20).
ಅಟಲ್ ಅವರನ್ನೂ ಸೈಡ್ ಲೈನ್ ಮಾಡುತ್ತಿದ್ದರು
ಅಟಲ್ ಬಿಹಾರಿ ವಾಜಪೇಯಿ ದೇಶದ ಗೌರವಾನ್ವಿತ ರಾಜಕಾರಣಿ. ಅಟಲ್ ಇಂದು ಸಕ್ರಿಯ ರಾಜಕಾರಣದಲ್ಲಿದ್ದರೆ ಜಸ್ವಂತ್, ಅಡ್ವಾಣಿಯವರಂತೆ ಅವರಿಗೂ ನರೇಂದ್ರ ಮೋದಿ ಬೆಲೆಕೊಡುತ್ತಿರಲಿಲ್ಲ.
ಅಡ್ವಾಣಿ ದೂರ ಮಾಡಿದ ಮೋದಿ
ಪಕ್ಷದ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿಯವರಿಗೆ ಮೋದಿ ಬೆಲೆಕೊಡಲಿಲ್ಲ. ಅಡ್ವಾಣಿಯವರನ್ನು ದೂರವಿರಿಸಿ ಉದ್ಯಮಿ ಅದಾನಿ ಅವರನ್ನು ಹತ್ತಿರ ಮಾಡಿಕೊಂಡರು. ಇದು ಮೋದಿಯವರ ಬಡವರ ಪರ ನಿಲುವು.
ಮೋದಿ ಯಾರಿಗೆ ಚೌಕೀದಾರ್
ನರೇಂದ್ರ ಮೋದಿ ತನ್ನನ್ನು ಚೌಕೀದಾರ್ ಮಾಡಿ ಅನ್ನುತ್ತಿದ್ದಾರೆ. ಇವರು ಚೌಕೀದಾರ್ ಆದರೆ ಯಾರಿಗೆ ಆಗುತ್ತಾರೆ? ಜನಸಾಮಾನ್ಯರಿಗೋ ಅಥವಾ ವಾಣಿಜ್ಯೋದ್ಯಮಿಗಳಿಗೋ ಎನ್ನುವುದನ್ನು ಮೋದಿ ಸ್ಪಷ್ಟ ಪಡಿಸಬೇಕಾಗಿದೆ.
ಗುಜರಾತ್ ಅಭಿವೃದ್ದಿ
ತನ್ನ ಅಧಿಕಾರದ ಅವಧಿಯಲ್ಲಿ ಗುಜರಾತ್ ಅಭಿವೃದ್ದಿ ಬಗ್ಗೆ ಮೋದಿ ಡಂಗುರ ಸಾರಿಕೊಂಡು ಬರುತ್ತಿದ್ದಾರೆ. ಆ ರಾಜ್ಯದಲ್ಲಿನ ಅಭಿವೃದ್ದಿ ಮೋದಿ ಒಬ್ಬರಿಂದಲೇ ಆಯಿತೇ? ಅದಕ್ಕೆ ಇತರರ ಪಾಲು ಇಲ್ಲವೇ ಎಂದು ರಾಹುಲ್ ಪ್ರಶ್ನಿಸಿದ್ದಾರೆ.