ತಾಕತ್ತಿದ್ರೆ ಮುಖಾಮುಖಿಯಾಗಿ : ರಾಹುಲ್ಗೆ ಮೋದಿ ಸವಾಲ್
ಬೊಂಗೈಗಾಂವ್ (ಆಸ್ಸಾಂ), ಏ. 19 : "ರಾಹುಲ್ ಗಾಂಧಿ ನೀವು ಇಂದು (ಶನಿವಾರ) ಆಸ್ಸಾಂನಲ್ಲಿದ್ದೀರಿ, ನಾನೂ ಆಸ್ಸಾಂನಲ್ಲಿದ್ದೇನೆ. ಬನ್ನಿ ಮುಖಾಮುಖಿಯಾಗೋಣ" ಎಂದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಉಪಾಧ್ಯಕ್ಷರಿಗೆ ಸವಾಲು ಹಾಕಿದ್ದಾರೆ.
ಆಸ್ಸಾಂನ ಬೊಂಗೈಗಾಂವ್ ಜಿಲ್ಲೆಯ ಕಕೊಯ್ಜಾನ್ ನಲ್ಲಿ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ನರೇಂದ್ರ ಮೋದಿ ಅವರು, 'ಶೆಹಜಾದೆ' ರಾಹುಲ್ ಗಾಂಧಿ ಅವರನ್ನು ಮುಖಾಮುಖಿಯಾಗಲು ಆಹ್ವಾನ ನೀಡಿದ್ದಾರೆ. ರಾಹುಲ್ ಗಾಂಧಿ ಕೂಡ ಆಸ್ಸಾಂನಲ್ಲಿ ಶನಿವಾರ ಪ್ರಚಾರ ಸಭೆ ನಡುಸುತ್ತಿದ್ದಾರೆ.
"ಗುಜರಾತ್ ಅನ್ನು ಮರೆತುಬಿಡಿ. ಮೂರು ಬಾರಿ ಮುಖ್ಯಮಂತ್ರಿಯಾಗಿರುವ ತರುಣ್ ಗೊಗೊಯ್ ಬಂದ್ ಆಗಿರುವ ಅಶೋಕ ಪೇಪರ್ ಮಿಲ್ ತೆರೆಯಲು ಏನು ಕ್ರಮ ತೆಗೆದುಕೊಂಡಿದ್ದಾರೆ? ಎಷ್ಟು ಯುವಕರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ?" ಎಂದು ನರೇಂದ್ರ ಮೋದಿ ಗೊಗೊಯ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಸೋನಿಯಾ ಗಾಂಧಿ ಮತ್ತು ರಾಹುಲ್ ಅವರನ್ನು ತೀವ್ರವಾಗಿ ಟೀಕಿಸಿದ ಮೋದಿ, ತೆರೆಮರೆಯಿಂದಲೇ ಯುಪಿಎ ಸರಕಾರವನ್ನು ನಡೆಸುತ್ತಿದ್ದ ತಾಯಿ ಮಗ ಮುಂದೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ನುಡಿದರು.
ಮೋದಿ ಟೀಕಿಸಿದವರಿಗೆ ಉಳಿಗಾಲವಿಲ್ಲ : ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಟೀಕಿಸಿದವರಿಗೆ ಭಾರತದಲ್ಲಿ ಉಳಿಗಾಲವಿಲ್ಲ. ಅವರು ಭಾರತ ತೊರೆದು ಪಾಕಿಸ್ತಾನಕ್ಕೆ ಹೋಗಬೇಕಾಗುತ್ತದೆ ಎಂದು ಬಿಹಾರದ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಹೇಳಿ ವಿವಾದದ ಬಿರುಗಾಳಿ ಎಬ್ಬಿಸಿದ್ದಾರೆ.
ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಯತ್ನಿಸುತ್ತಿರುವವರು ಮುಂದಿನ ದಿನಗಳಲ್ಲಿ ಭಾರತ ಬಿಡಬೇಕಾಗುತ್ತದೆ. ಅವರು ಪಾಕಿಸ್ತಾನದತ್ತ ಮುಖ ಮಾಡಬೇಕಾಗುತ್ತದೆ ಎಂದು ಜಾರ್ಖಂಡ್ ನ ಗೊದ್ದ ಎಂಬಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಕಿಡಿ ಕಾರಿದ್ದಾರೆ. ಅವರು, ಬಿಹಾರದ ನಾವಡಾದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಮಾಜಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲೇ ಈ ರೀತಿ ನುಡಿದಿದ್ದಾರೆ.