ಮೋದಿಗೆ ನಮೋ ಎಂದ 'ಮೆಟ್ರೋ ಪುರುಷ' ಶ್ರೀಧರನ್
ನವದೆಹಲಿ,ಮಾರ್ಚ್ 8-ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿರುವ ಬೆನ್ನಿಗೆ 'ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ತಾವು ಬೆಂಬಲಿಸುವುದಾಗಿ' ಮೆಟ್ರೋ ಮನುಷ್ಯ ಇ ಶ್ರೀಧರನ್ ಹೇಳಿದ್ದಾರೆ.
ದೇಶದ ಮೆಟ್ರೋ ರೈಲ್ವೆ ಕ್ಷೇತ್ರದಲ್ಲಿ 'ಸರ್ ಎಂ ವಿಶ್ವೇಶ್ವರಯ್ಯ' ಎಂದು ಖ್ಯಾತಿಗಳಿಸಿರುವ ಶ್ರೀಧರನ್ 'ನರೇಂದ್ರ ಮೋದಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವಂತಹ ನಾಯಕ. ಅವರು ಪ್ರಧಾನಿಯಾದರೆ ಅಭಿವೃದ್ಧಿ ಕೆಲಸಗಳಲ್ಲಿ ಸರಕಾರ ಕೈಗೊಳ್ಳುವ ನಿರ್ಣಯಗಳು ವೇಗವಾಗಿ ಆಗುತ್ತವೆ' ಎಂದು ಅಭಿಪ್ರಾಯಟ್ಟಿದ್ದಾರೆ.
'ದೇಶವನ್ನು ಕಾಡುತ್ತಿರುವ ಸಮಸ್ಯೆಯೆಂದರೆ ಸರಕಾರಿ ನಿರ್ಧಾರಗಳು ವಿಳಂಬವಾಗುವುದು. ಇದಕ್ಕೆ ಆಡಳಿತಶಾಹಿಯೂ ಕಾರಣವಾಗಿದೆ. ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಆತ್ಮವಿಶ್ವಾಸದ ಕೊರತೆ ನಮ್ಮನ್ನು ಕಾಡುತ್ತದೆ' ಎಂದು ದಿಲ್ಲಿ ಮೆಟ್ರೋದ ಚುಕ್ಕಾಣಿ ಹಿಡಿದಿದ್ದ Metro man ಶ್ರೀಧರನ್ ಹೇಳಿದ್ದಾರೆ.
ಕೊಂಕಣ ರೈಲ್ವೆಗೆ ರಹದಾರಿ ಹಾಕಿದ ಕೇರಳ ಮೂಲದ ಶ್ರೀಧರನ್, ಮೋದಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಮುಂದೆ ಸರಕಾರಿ ನಿರ್ಣಯಗಳು ತ್ವರಿತವಾಗಿ ನಡೆಯಲಿವೆ. ನಾನು ಇದುವರೆಗೂ ಮೋದಿ ಕಾರ್ಯವೈಖರಿಯನ್ನು ಗಮನಿಸಿದಂತೆ ಅವರು ಕ್ಷಿಪ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತವರು. ಹಾಗಾಗಿ ಭವಿಷ್ಯದಲ್ಲಿ ನಿರ್ಣಯ ತೆಗೆದುಕೊಳ್ಳುವ ಪ್ರಕ್ರಿಯೆಲ್ಲಿ ಆಮೂಲಾಗ್ರ ಬದಲಾವಣೆ ಕಂಡುಬರಲಿದೆ' ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಗುಜರಾತಿನಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿದ 'ಮೆಟ್ರೋ ಪುರುಷ' ಶ್ರೀಧರನ್, ಗುಜರಾತಿನ ವಡೋದರಾ ಜಿಲ್ಲೆಯಲ್ಲಿ ಮೆಟ್ರೋ ಟ್ರೈನುಗಳ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಅದನ್ನು ಕೇವಲ 18 ತಿಂಗಳಲ್ಲಿ ಸ್ಥಾಪಿಸಲಾಯಿತು. ಅದು ನಿಜಕ್ಕೂ ದಾಖಲೆಯೇ ಸರಿ ಎಂದು ತಿಳಿಸಿದ್ದಾರೆ.
'ಭಾರತ ಮತ್ತು ಜಪಾನ್ ನಡುವಣ ಸಂಬಂಧ ಈಗ ಬಲಾಢ್ಯವಾಗಿದೆ. ಭಾರತದಲ್ಲಿ ಜಪಾನಿನ ಉಪಸ್ಥಿತಿ ಸದೃಢಗೊಂಡಿದೆ. ಈ ಸ್ನೇಹಮಯ ಸಂಬಂಧಕ್ಕೆ ದಿಲ್ಲಿ ಮೆಟ್ರೋ ಯೋಜನೆ ಗಣನೀಯ ಕೊಡುಗೆ ನೀಡಿದೆ. ಇದಕ್ಕೆ 'ಮೆಟ್ರೋ ಪುರುಷ' ಶ್ರೀಧರನ್ ಅವರ ಕೊಡುಗೆ ಅಪಾರವಾಗಿದೆ' ಎಂದು ಜಪಾನ್ ದೂತವಾಸ ಕಚೇರಿಯು ಶ್ರೀಧರನ್ ಅವರನ್ನು ಇಂದು ದಿಲ್ಲಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಧರನ್, ಮೆಟ್ರೋ ಅಭಿವೃದ್ಧಿಗೆ ಮೋದಿ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ದಿಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಸಂಸದರಾದ ಎನ್ ಕೆ ಸಿಂಗ್, ಅಶ್ವಿನಿ ಕುಮಾರ್ ಹಾಗೂ ತರುಣ್ ವಿಜಯ್ ಭಾಗವಹಿಸಿದ್ದರು. ಅಂದಹಾಗೆ ಮೆಟ್ರೋ ಯೋಜನೆಗಳಿಗೆ ಜಪಾನಿನಿಂದ ಅಪಾರ ಪ್ರಮಾಣದಲ್ಲಿ ಮೃದು ಸಾಲ ಹರಿದುಬಂದಿದೆ.