ಮೋದಿ ಪ್ರತಿಸ್ಪರ್ಧಿ ಮಧುಸೂದನ ಮಿಸ್ತ್ರಿ ಅರೆಸ್ಟ್
ವಡೋದರಾ, ಏ.3: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬ್ಯಾನರ್/ ಪೋಸ್ಟರುಗಳನ್ನು ಹರಿದುಹಾಕಿದ ಕಾಂಗ್ರೆಸ್ ಅಭ್ಯರ್ಥಿ ಮಧುಸೂದನ ಮಿಸ್ತ್ರಿ ಅವರನ್ನು ಇಂದು ಗುರುವಾರ ಬಂಧಿಸಿದ್ದಾರೆ. ನಗರದ ಡಿಸಿಪಿ ಡೀಪಾಂಕರ್ ತ್ರಿವೇದಿ ಅವರು ಮಿಸ್ತ್ರಿ ಬಂಧನವನ್ನು ಖಚಿತಪಡಿಸಿದರು.
ಮಧುಸೂದನ ಮಿಸ್ತ್ರಿ ಪುಂಡಾಟಿಕೆ: ನಗರದ ದಂಡಿಯಾ ಬಜಾರ್ ಪ್ರದೇಶದಲ್ಲಿ ಹಾಕಲಾಗಿದ್ದ ಜಾಹೀರಾತುಗಳಲ್ಲಿ ನರೇಂದ್ರ ಮೋದಿ ಅವರ ಫೋಟೋಗಳು ರಾರಾಜಿಸುತ್ತಿದ್ದವು. ಅದನ್ನು ಕಂಡು ಕೆರಳಿದ ಕಾಂಗ್ರೆಸ್ ಅಭ್ಯರ್ಥಿ/ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಖುದ್ದಾಗಿ ಸ್ಥಳಕ್ಕೆ ತೆರಳಿ ಫೋಟೋಗಳು ಹರಿಯಲಾರಂಭಿಸಿದ್ದಾರೆ. ಇದನ್ನು ಕಂಡ ಸ್ಥಳದಲ್ಲಿಯೇ ಇದ್ದ ಪೊಲೀಸರು ತಕ್ಷಣ ಮಧುಸೂದನ ಮಿಸ್ತ್ರಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಧುಸೂದನ ಮಿಸ್ತ್ರಿ ಜತೆಗೆ ಇನ್ನೂ ಹಲವು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಮಿಸ್ತ್ರಿ ತಂಡವು ರಸ್ತೆ ವಿಭಜಕಗಳಲ್ಲಿ ಹಾಕಲಾಗಿದ್ದ ಮೋದಿ ಜಾಹೀರಾತುಗಳಿಗೆ ಮಸಿ ಬಳಿಯುತ್ತಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಮಧುಸೂದನ ಮಿಸ್ತ್ರಿ ರಸ್ತೆ ವಿಭಜಕದಲ್ಲಿದ್ದ ಕಂಬವನ್ನು ಹತ್ತಿ ಮೋದಿ ಜಾಹೀರಾತನ್ನು ಹರಿದುಹಾಕಿ, ಅದರ ಮೇಲೆ ತಮ್ಮ ಭಾವಚಿತ್ರವಿರುವ ಜಾಹೀರಾತನ್ನು ಹಾಕುವ ಕಾಯಕದಲ್ಲಿ ತೊಡಗಿದ್ದರು. ಮಧುಸೂದನ ಮಿಸ್ತ್ರಿ ಮತ್ತು ಅವರ ತಂಡವು ಈ ಭಾಗದಲ್ಲಿ ಯಾವುದೇ ರಾಜಕೀಯ ಕಾರ್ಯಕ್ರಮ ನಡೆಸಲು ಸ್ಥಳೀಯ ಪೊಲೀಸರಿಂದ ಪೂರ್ವಾನುಮತಿಯನ್ನು ಪಡೆದಿರಲಿಲ್ಲ. ಘಟನಾವಳಿಯ ವಿಡಿಯೋ ನೋಡಿದ ಬಳಿಕ ಮಧುಸೂದನ ಮಿಸ್ತ್ರಿ ತಂಡದ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಡಿಸಿಪಿ ತ್ರಿವೇದಿ ಹೇಳಿದ್ದಾರೆ.