ಅಡ್ವಾಣಿ ರಾಷ್ಟ್ರಪತಿಯಾಗಲು ಅರ್ಹ: ನಿತಿನ್ ಗಡ್ಕರಿ
ನವದೆಹಲಿ, ಜೂ.22: ಭಾರತದ ರಾಷ್ಟ್ರಪತಿಯಾಗಲು ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರು ಅರ್ಹ ವ್ಯಕ್ತಿಯಾಗಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, 'ಅಡ್ವಾಣಿ ಈ ಹಿಂದೆ ಉಪ ಪ್ರಧಾನಿಯಾಗಿದ್ದವರು ಹೀಗಾಗಿ ಅವರನ್ನು ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಪಕ್ಷ ಪರಿಗಣಿಸಲಿಲ್ಲ. ಅಡ್ವಾಣಿ ಅವರು ದೇಶದ 'ಪ್ರಥಮ ಪ್ರಜೆ' ಯಾಗಲು ಸೂಕ್ತ ವ್ಯಕ್ತಿ ಎಂದು ಹೇಳಿದರು.
ಪ್ರಣಬ್ ಮುಖರ್ಜಿ ಅವರು ಭಾರತದ 13ನೇ ಹಾಗೂ ಹಾಲಿ ರಾಷ್ಟ್ರಪತಿಗಳಾಗಿದ್ದಾರೆ. ಜುಲೈ 2012ರಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಇವರ ಅಧಿಕಾರ ಅವಧಿ ಐದು ವರ್ಷ. ಎಲ್ ಕೆ ಅಡ್ವಾಣಿ ಅವರ ಬಗ್ಗೆ ನಿತಿನ್ ಗಡ್ಕರಿ ಅವರು ಹೇಳಿದ ಮಾತುಗಳು, ಮೋದಿ ಸರ್ಕಾರ್ ಬಗ್ಗೆ ಸ್ಪಷ್ಟನೆ ಮುಂದಿದೆ ಓದಿ...
ಅಡ್ವಾಣಿ ಅವರನ್ನು ಸಂಪುಟಕ್ಕೆ ಆರಿಸಿಲ್ಲ ಏಕೆ?
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟದಲ್ಲಿ 75 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದ ಸಂಸದರನ್ನು ಆಯ್ಕೆ ಮಾಡುವುದು ಬೇಡ ಎಂದು ನಿರ್ಧರಿಸಿದ ಕಾರಣ ಎಲ್.ಕೆ ಅಡ್ವಾಣಿ ಅವರಿಗೆ ಸ್ಥಾನ ಕಲ್ಪಿಸಲಾಗಲಿಲ್ಲ. ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರಿಗೂ ಇದೇ ಕಾರಣಕ್ಕೆ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ.
ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಗೆ ಹೋಲಿಕೆ
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಇಂದಿಗೂ ಸ್ಟಾರ್ ವ್ಯಾಲ್ಯೂ ಇದೆ. ಆದರೆ, ಅವರು ವಯಸ್ಸಿಗೆ ತಕ್ಕ ಪಾತ್ರವನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ಹೀರೋ ಆಗಿ ನಟಿಸಿದರೆ ಮಾರುಕಟ್ಟೆ ಇರುವುದಿಲ್ಲ, ಈಗ ಹೊಸ ಪೀಳಿಗೆಯದ್ದೇ ಆಟ. ನನ್ನ ವಿಷಯದಲ್ಲೂ ಅಷ್ಟೇ ಬಿಜೆಪಿ ಅಧ್ಯಕ್ಷ ಪಟ್ಟ ಸಿಕ್ಕಿತ್ತು ಈಗ ಹೊಸ ಜವಾಬ್ದಾರಿ ಇದೆ. ಮುಂದಿನ 10 ವರ್ಷದ ನಂತರ ಬಿಜೆಪಿಯಲ್ಲಿ ಹೊಸ ಪೀಳಿಗೆ ನಾಯಕರೇ ತುಂಬಿರುತ್ತಾರೆ ಎಂದರು.
ನರೇಂದ್ರ ಮೋದಿ ಬೆಂಕಿ ನವಾಬರೇ?
ಹಾಗೇನಿಲ್ಲ, ಸಚಿವಾಲಯಗಳಲ್ಲಿರುವ ನೂನ್ಯತೆಗಳನ್ನು ಸರಿಪಡಿಸಲು ಮೋದಿ ಅವರು ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇಲಾಖಾವಾರು ಕಾರ್ಯದರ್ಶಿಗಳಿಗೆ ಇದರಿಂದ ಹೆಚ್ಚಿನ ಕೆಲಸದ ಒತ್ತಡ ಬೀಳುವುದು ಸಹಜ. ಮೋದಿ ಕಂಡು ಸಚಿವರು ಹೆದರಿಕೊಳ್ಳುತ್ತಿದ್ದಾರೆ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಜೋಶಿ ಅವರಿಗೆ ನಿರಾಶೆಯಾಗಿದೆಯೆ?
ಖಂಡಿತಾ ಇಲ್ಲ. ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರು ಯೋಜನಾ ಆಯೋಗದ ಉಪಾಧ್ಯಕ್ಷರಾಗಲು ಬಯಸಿದ್ದರು ಆದರೆ, ಆ ಸ್ಥಾನ ನೀಡಲು ಮೋದಿ ಒಪ್ಪಲಿಲ್ಲ ಎಂಬುದು ಸುಳ್ಳಿನ ಸಂಗತಿ.
ಜೋಶಿ ಅವರು ಬಿಜೆಪಿಯ ಆಸ್ತಿ. ಅವರ ಜ್ಞಾನಧಾರೆ ಪಕ್ಷಕ್ಕೆ ಬಲ ತರಲಿದ್ದು, ಅವರ ಯೋಗ್ಯತೆ ಘನತೆಗೆ ತಕ್ಕ ಸ್ಥಾನವನ್ನು ಕಲ್ಪಿಸಲು ಬಿಜೆಪಿ ಬದ್ಧವಾಗಿದೆ ಎಂದರು.