ಟಾಯ್ಲೆಟ್ ಇಲ್ಲದಿರುವುದೇ ಅತ್ಯಾಚಾರಕ್ಕೆ ಕಾರಣ!
ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ಅತ್ಯಾಚಾರಗಳ ಬಗ್ಗೆ ಇಡೀ ದೇಶ ಮಮ್ಮಲಮರುಗಿರುವಾಗ ರಾಜಕಾರಣಿಗಳು ಅತ್ಯಾಚಾರದ ಬಗ್ಗೆ ನೀಡುವ ವಿಭಿನ್ನ/ವಿಚಿತ್ರ ವ್ಯಾಖ್ಯಾನಗಳು ಮುಜುಗುರವುಂಟುಮಾಡುತ್ತಿವೆ. ಕೆಲವೊಮ್ಮೆ ಅಸಹ್ಯಪಡುವಂತಾಗುತ್ತದೆ.
ಈ ಮಧ್ಯೆ, ಕಟುವಾಸ್ತವದ ನೆಲೆಗಟ್ಟಿನಲ್ಲಿ ಯೋಚಿಸಿರುವ ಕೇಂದ್ರ ಸಚಿವ ಗಿರಿಜಾ ವ್ಯಾಸ್ ಅವರು, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಕಾರಣವೇನು ಎಂಬುದನ್ನು ತಿಳಿದುಕೊಂಡಿದ್ದಾರೆ. ದೇಶದಲ್ಲಿ ಶೌಚಾಲಯಗಳ ಕೊರತೆ ಇರುವುದೇ ಅತ್ಯಾಚಾರ ಹೆಚ್ಚಲು ಕಾರಣ ಎಂದು ಅವರು ಹೇಳಿದ್ದಾರೆ.
ಅದು ಹೇಗೆ ಅಂದರೆ ಮನೆಗಳಲ್ಲಿ ಶೌಚಾಲಯಗಳು ಇಲ್ಲದ ಕಾರಣಕ್ಕಾಗಿ ಮಹಿಳೆಯರು ಬಹಿರ್ದೆಸೆಗೆ ಅನಿವಾರ್ಯವಾಗಿ ಮನೆಯಿಂದ ಹೊರಗೆ ಹೋಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲೇ ಅವರ ಮೇಲೆ ಹೆಚ್ಚು ಅತ್ಯಾಚಾರ ನಡೆಯುತ್ತಿದೆ. ಹೀಗಾಗಿ ಶೌಚಾಲಯ ಇಲ್ಲದೇ ಇರುವುದು ಕೂಡಾ ಪರೋಕ್ಷವಾಗಿ ಅತ್ಯಾಚಾರ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವ್ಯಾಸ್ ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ಪರಿಹಾರೋಪಯವಾಗಿ ಎಲ್ಲಾ ಸಂಸದರು ಮತ್ತು ಶಾಸಕರು ತಮ್ಮ ಅನುದಾನದ ಶೇ. 25ರಷ್ಟು ಹಣವನ್ನು ತಮ್ಮ ಕ್ಷೇತ್ರಗಳಲ್ಲಿ ಶೌಚಾಲಯ ನಿರ್ಮಾಣಕ್ಕೆಂದೇ ಮೀಸಲಿಡಬೇಕು ಎಂದೂ ವ್ಯಾಸ್ ಕಿವಿಮಾತು ಹೇಳಿದ್ದಾರೆ.
ಬಹಳ ಹಿಂದಿನಿಂದಲೂ ಶೌಚಾಲಯ ಅತ್ಯಗತ್ಯ ಎಂದು ಕಾಂಗ್ರೆಸ್ ಪ್ರತಿಪಾದಿಸಿಕೊಂಡು ಬಂದಿದೆ. ಇದು ಕಾಂಗ್ರೆಸ್ನ ಘೋಷಣೆ. ಆದರೆ ಇತ್ತೀಚೆಗೆ ನರೇಂದ್ರ ಮೋದಿ ಸಹ ಇದೇ ಮಂತ್ರ ಜಪಿಸಲಾರಂಭಿಸಿದ್ದಾರೆ. ಇದನ್ನು ಮೋದಿ ಅವರು ತಮ್ಮ ತವರು ರಾಜ್ಯದಲ್ಲಿ ಅಳವಡಿಸಿಕೊಳ್ಳುವುದಾದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ವ್ಯಾಸ್ ಹೇಳಿದ್ದಾರೆ.