ಕಾರ್ಗಿಲ್ ವಾರ್ ಬಳಿಕ ಭಾರತ ಶಕ್ತಿಶಾಲಿ ದೇಶವಾಗಿದೆ
ಕಾರ್ಗಿಲ್,ಜು.24: ಪಾಕಿಸ್ತಾನದ ಮೇಲೆ 1999ರಲ್ಲಿ ಭಾರತ ದಿಗ್ವಿಜಯ ಸಾಧಿಸಿದ ಸವಿನೆನಪಿಗಾಗಿ ಜುಲೈ 26ರಂದು ಪ್ರತಿವರ್ಷ 'ಕಾರ್ಗಿಲ್ ವಿಜಯ ದಿವಸ'ವನ್ನು ಆಚರಿಸಲಾಗುತ್ತಿದೆ. 'ಆಪರೇಷನ್ ವಿಜಯ್'ನ 15ನೇ ವಾರ್ಷಿಕೋತ್ಸವದ ವಿಶೇಷ ಲೇಖನಗಳನ್ನು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕಾರ್ಗಿಲ್ ವೀರರ ಕಥೆಗಳನ್ನು ಕಾರ್ಗಿಲ್ನಿಂದಲೇ ಒನ್ಇಂಡಿಯಾ ನಿಮಗೆ ನೀಡಲಿದೆ.
ಕಾರ್ಗಿಲ್ ಯುದ್ಧ ನಡೆದ ನೆಲ ಈಗಿನವರೆಗೆ ಕೇವಲ ದಿನಪತ್ರಿಕೆ ಮತ್ತು ಟಿವಿ ವಾಹಿನಿಗಳಿಗೆ ಮಾತ್ರ ಅವಕಾಶ ಮಾಡಿಕೊಟ್ಟಿತ್ತು. ಗ್ರೌಂಡ್ ಜೀರೋ ನೆಲವನ್ನು ಮೆಟ್ಟಿದ ಮೊದಲ ಆನ್ ಲೈನ್ ಪೋರ್ಟಲ್ ಒನ್ಇಂಡಿಯಾ. ಈ ವಿಶೇಷ ಸಂದರ್ಭದಲ್ಲಿ ವಿಶೇಷ ಲೇಖನಗಳನ್ನು ಒನ್ಇಂಡಿಯಾದ ಪ್ರತಿನಿಧಿ ರೀಚಾ ಬಾಜಪೈ ಬರೆಯುತ್ತಿದ್ದು ಈ ಸರಣಿಯ ಲೇಖನ ಇಲ್ಲಿದೆ.
ಕಾರ್ಗಿಲ್ ಯುದ್ದದಲ್ಲಿ ಅತಿಹೆಚ್ಚು ಹಾನಿಗೊಳಗಾದ ಪ್ರದೇಶ ದ್ರಾಸ್ ವಲಯ. ಪಾಕ್ ಯುದ್ದದ ಬಳಿಕ ಎಚ್ಚೆತ್ತ ಭಾರತೀಯ ಸೇನೆ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿದೆ. ನುಸುಳುಕೋರರನ್ನು ತಡೆಯಲು ಯೋಧರು ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿದ್ದಾರೆ.[ಭಾರತದಲ್ಲಿ ಪಾಕ್ ನಿರ್ಮಿಸಿದ ಬಂಕರ್ಗಳ ಕಥೆ]
" ಕಳೆದ 15 ವರ್ಷದಲ್ಲಿ ಭಾರತ ಸೇನೆಯ ವಿಚಾರದಲ್ಲಿ ಶಕ್ತಿಶಾಲಿ ದೇಶವಾಗಿ ಬದಲಾಗಿದೆ. ಭೂ ಸೇನೆ, ವಾಯು ಸೇನೆ, ನೌಕಾಸೇನೆಗಳು ತುಂಬಾ ಬಲವಾಗಿದ್ದು ಯಾವುದೇ ಕಠಿಣ ಪರಿಸ್ಥಿತಿ ಇದ್ದರೂ ನಮ್ಮ ಸೇನೆ ಎದುರಿಸುವಷ್ಟು ಶಕ್ತಿಯುತವಾಗಿದೆ" ಹೀಗೆಂದು ದ್ರಾಸ್ ಬ್ರಿಗೇಡ್ ಕಮಾಂಡರ್ ಜೆಪಿ ಸಿಂಗ್ ದೇಶದ ಸೈನ್ಯದಲ್ಲಿ ಬಗ್ಗೆ ಅಭಿಮಾನದಿಂದ ಹೇಳುತ್ತಾರೆ.
ಕಾರ್ಗಿಲ್ ಯುದ್ದ ಶಾಲೆಯಲ್ಲಿ ಒನ್ಇಂಡಿಯಾದ ಜೊತೆ ಮಾತನಾಡುತ್ತಿದ್ದ ಅವರು "ಕಾರ್ಗಿಲ್ ಯುದ್ಧದ ನಂತರ ಭಾರತೀಯ ಸೈನಿಕರಿಗೆ ನೀಡುತ್ತಿರುವ ತರಬೇತಿ ಶೈಲಿಯೇ ಬದಲಾಗಿದೆ. ಶ್ರೇಷ್ಠ ಮಟ್ಟದ ತರಬೇತಿಯನ್ನು ನೀಡಲಾಗುತ್ತಿದೆ. 1999ರ ಬಳಿಕ ಸರ್ಕಾರಗಳು ಸಾಕಷ್ಟು ಹಣವನ್ನು ಸೇನೆಗೆ ವಿನಿಯೋಗಿಸಿ ಶಕ್ತಿಶಾಲಿ ಸೈನ್ಯವನ್ನಾಗಿ ರೂಪಿಸಿದೆ" ಎಂದು ಹೇಳುತ್ತಾರೆ.
ಅಷ್ಟೇ ಅಲ್ಲದೇ " ಕಾರ್ಗಿಲ್ ಯುದ್ಧದ ಬಳಿಕ ಮತ್ತೊಂದು ಕಾರ್ಗಿಲ್ ಯುದ್ಧ ನಡೆಯಲು ಬಿಡುವುದಿಲ್ಲ. ದೇಶದ ಜನರು ನಮ್ಮಲ್ಲಿ ಭರವಸೆ ಇಡಬಹುದು" ಎಂದು ಸೇನೆಯ ಬಗ್ಗೆ ಬಹಳ ಆತ್ಮವಿಶ್ವಾಸದಿಂದ ಬ್ರಿಗೇಡ್ ಕಮಾಂಡರ್ ಜೆಪಿ ಸಿಂಗ್ ನುಡಿಯುತ್ತಾರೆ.
ಕಾರ್ಗಿಲ್ ವಿಜಯ ದಿವಸ ಸರಣಿಯ ಎಲ್ಲಾ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: ಕಾರ್ಗಿಲ್ ವಿಜಯ ದಿವಸ