ಭಾರತಕ್ಕೆ ಹುಟ್ಟುಹಬ್ಬದ ಹೃತ್ಪೂರ್ವಕ ಶುಭಾಶಯ
ಸ್ವಾತಂತ್ರ್ಯ ದಿನಾಚರಣೆಯ ದಿನ ಸಂಭ್ರಮಾಚರಣೆಗೆ ದೇಶದೆಲ್ಲೆಡೆ ಭರದ ಸಿದ್ಧತೆ ನಡೆದಿದೆ. ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಪ್ರತಿ ವರ್ಷದಂತೆ ಕರ್ನಾಟಕ ರಾಜ್ಯ ರಾಷ್ಟ್ರದ ಸ್ವಾತಂತ್ರ್ಯೋತ್ಸವದ ಸಂಭ್ರಮ ಆಚರಿಸಲಿದೆ. ಸಂಭ್ರಮಾಚರಣೆ ದೇಶದೆಲ್ಲೆಡೆ ಯಾವ ರೀತಿ ತಯಾರಿ ನಡೆದಿದೆ ಎಂಬುದರ ಬಗ್ಗೆ ಚಿತ್ರಣ ಇಲ್ಲಿ ನೀಡಲಾಗಿದೆ.
ಅಭೂತಪೂರ್ವ ಭದ್ರತೆಯ ನಡುವೆ ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಕ್ಕೆ ವೇದಿಕೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಭಾಷಣ ಮಾಡಲಿದ್ದಾರೆ. ಈ ಭವ್ಯ ಸಮಾರಂಭವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಇದೆಲ್ಲದರ ನಡುವೆ ಸ್ವತಂತ್ರ ದಿನವೆಂದರೆ ಅದು ಮಕ್ಕಳಿಗೆ ಮಾತ್ರ ಹಬ್ಬವಾಗಿ ಮಾರ್ಪಾಡುವ ಭೀತಿ ನಮ್ಮ ಮುಂದಿದೆ. ವಿಶ್ವದ ಅತಿದೊಡ್ಡ ಗಣರಾಜ್ಯ ಭಾರತಕ್ಕೆ ಸ್ವತಂತ್ರ ಬಂದು 67 ವರ್ಷಗಳು ಕಳೆದರೂ ಬಡತನ, ನಿರುದ್ಯೋಗ, ಅನಕ್ಷರತೆ, ಭ್ರಷ್ಟಾಚಾರ, ಮಹಿಳೆ ಮಕ್ಕಳ ಮೇಲೆ ದೌರ್ಜನ್ಯದಿಂದ ಮುಕ್ತವಾಗಿಲ್ಲ. ನಕ್ಸಲರು, ಉಗ್ರರ ಜತೆ ಕಾದಾಟದ ಜತೆಗೆ ಕೋಮು ಗಲಭೆಗಳು, ರಾಜ್ಯ ವಿಭಜನೆಯ ಕೂಗು ಕಾಡುತ್ತಲೇ ಇದೆ.[ಆ.14ರಂದೇ ಪಾಕಿಸ್ತಾನದ ಸ್ವತಂತ್ರ ದಿನಾಚರಣೆ ಏಕೆ?]
ಸುಮಾರು 200ಕ್ಕೂ ಅಧಿಕ ವರ್ಷಗಳ ಕಾಲ ದಾಸ್ಯದಲ್ಲಿದ್ದ ಭಾರತ ರಾಜಕೀಯವಾಗಿ ಬ್ರಿಟಿಷರಿಂದ 1947ಕ್ಕೆ ಭಾರತಕ್ಕೆ ಅಧಿಕಾರ ಹಸ್ತಾಂತರಗೊಂಡರೂ, ಭಾರತ ಇನ್ನೂ ಅಭಿವೃದ್ಧಿ ಶೀಲ ರಾಷ್ಟ್ರವಾಗೇ ಉಳಿದಿದೆ. ಸಾಂಸ್ಕೃತಿಕವಾಗಿ, ನೈಸರ್ಗಿಕವಾಗಿ ಅಪಾರ ಸಂಪತ್ತು ಹೊಂದಿರುವ ರಾಷ್ಟ್ರ ಆರ್ಥಿಕವಾಗಿ ಅವನತಿ ಹಾದಿ ಹಿಡಿಯುತ್ತಿದೆ. [ಜಾಲತಾಣಗಳಲ್ಲಿ ನಿರಾತಂಕವಾಗಿ ಧ್ವಜ ಪ್ರದರ್ಶಿಸಿ]
ವಿಶ್ವದ ಎರಡನೇ ಅತಿ ಹೆಚ್ಚು ಜನಶಕ್ತಿ ಹೊಂದಿರುವ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿರುವ ದೇಶ ಇಂದಿಗೂ ಕೃಷಿ ಪ್ರಧಾನ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿದೆ. ಅಣುಶಕ್ತಿ, ಕ್ರಿಕೆಟ್, ವಿಜ್ಞಾನ, ತಂತ್ರ ಜ್ಞಾನ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ.
ತ್ರಿವರ್ಣ ದಿರಿಸಿನಲ್ಲಿ ಶಾಲಾ ವಿದ್ಯಾರ್ಥಿನಿ
ಅಜ್ಮೇರ್ ನಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬಳು ಭಾರತದ ತ್ರಿವರ್ಣ ದಿರಿಸು ಧರಿಸಿದ್ದಾಳೆ. ಪಿಟಿಐ ಚಿತ್ರ
ಚೆನ್ನೈನಲ್ಲಿ ಬೃಹತ್ ಧ್ವಜ ಬಳಕೆ
ಚೆನ್ನೈನಲ್ಲಿ ವಿದ್ಯಾರ್ಥಿಗಳು ಸುಮಾರು 200 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಬುಧವಾರ ಪ್ರದರ್ಶಿಸಿದರು. PTI Photo by R Senthil Kumar
ಶ್ರೀನಗರದಲ್ಲಿ ಕಾಶ್ಮೀರ ಕನ್ಯೆಯರ ನೃತ್ಯ
ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಕಾಲೇಜು ಕನ್ಯೆಯರು ಸ್ವತಂತ್ರ ದಿನಾಚರಣೆಗಾಗಿ ತಯಾರಿ ನಡೆಸಿದ್ದಾರೆ.
ಹಬ್ಬಕ್ಕಾಗಿ ಸ್ವಚ್ಛಗೊಂಡ ಇಂಡಿಯಾ ಗೇಟ್
ನವದೆಹಲಿ: ಸ್ವತಂತ್ರ ದಿನಾಚರಣೆ ಹಬ್ಬಕ್ಕಾಗಿ ಇಂಡಿಯಾ ಗೇಟ್ ಸ್ವಚ್ಛಗೊಳಿಸಿ ಅಣಿ ಮಾಡಲಾಗಿದೆ. PTI Photo by Subhav Shukla
ಲಡಾಕಿ ನೃತ್ಯ ನಿರತ ಯುವತಿಯರು
ಶ್ರೀನಗರದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಲಡಾಕಿ ನೃತ್ಯ ನಿರತ ಯುವತಿಯರು ಬಕ್ಷಿ ಸ್ಟೇಡಿಯಂನಲ್ಲಿ ತಾಲೀಮು ನಿರತರಾಗಿದ್ದರು.
ಬೆಂಗಳೂರಿನಲ್ಲಿ ಸ್ವತಂತ್ರ ದಿನಾಚರಣೆ
ಬೆಂಗಳೂರಿನ ಮಾನೇಕ್ ಶಾ ಪರೇಡ್ ಮೈದಾನದಲ್ಲಿ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನಕ್ಕಾಗಿ ನಡೆಯುತ್ತಿರುವ ತಾಲೀಮು. PTI Photo by Shailendra Bhojak
ದೆಹಲಿಯಲ್ಲಿ ಈಗ ಫುಲ್ ಟ್ರಾಫಿ ಜಾಮ್
ನವದೆಹಲಿ : ಸ್ವತಂತ್ರ ದಿನಾಚರಣೆ ಅಂಗವಾಗಿ ನಗರದ ವಿವಿಧೆಡೆ ವಿದ್ಯಾರ್ಥಿಗಳು, ಕಲಾವಿದರು ಅಭ್ಯಾಸ ನಿರತರಾಗಿದ್ದರೆ, ನಿಜಾಮುದ್ದೀನ್ ಸೇತುವೆ ಬಳಿ ಕಂಡು ಬಂದ ಟ್ರಾಫಿಕ್ ಜಾಮ್ ದೃಶ್ಯ ಇದಾಗಿದೆ. PTI Photo by Subhav Shukla
ಸ್ವತಂತ್ರ ಹಬ್ಬಕ್ಕಾಗಿ ದೀಪಾಲಂಕಾರ
ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಹಾಗೂ ಬಿಎಂಸಿ ಮುಖ್ಯ ಕಚೇರಿಗಳು ದೀಪದ ಬೆಳಕಿನಿಂದ ಪ್ರಜ್ವಲಿಸುತ್ತಿದ್ದು, ಸ್ವತಂತ್ರ ದಿನಾಚರಣೆಗೆ ಸಜ್ಜಾಗಿವೆ. PTI Photo by Shashank Parade
ಬೆಂಗಳೂರಿನಲ್ಲಿ ನಡೆದಿದೆ ತಾಲೀಮು
ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಂದ ನಡೆದಿರುವ ಸ್ವತಂತ್ರ ದಿನಾಚರಣೆ ತಾಲೀಮು
ಕೆಂಪುಕೋಟೆ ಬಳಿ ವಿದ್ಯಾರ್ಥಿಗಳು
ಕೆಂಪುಕೋಟೆ ಬಳಿ ವಿದ್ಯಾರ್ಥಿಗಳು ತಾಲೀಮು ನಡುವೆ ಸಿಕ್ಕ ವಿಶ್ರಾಂತಿ ಸಮಯದಲ್ಲಿ ನೀಡಿದ ಪೋಸ್ PTI Photo by Shahbaz Khan
ಗುರ್ ಗಾಂವ್ ನಲ್ಲಿ ಮಕ್ಕಳ ಕಸರತ್ತು
ಗುರ್ ಗಾಂವ್ ನಲ್ಲಿ ಶಾಲಾ ಮಕ್ಕಳು ಕಸರತ್ತು ನಡೆಸಿದ್ದು ಹೀಗೆ
ಭದ್ರತೆಗೆ ಮುಖ್ಯ ಆದ್ಯತೆ ನೀಡಲಾಗಿದೆ
ಅಲಹಾಬಾದ್: ಬಾಂಬ್ ನಿಷ್ಕ್ರಿಯ ದಳದವರು ಅಲಹಾಬಾದಿನ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ನಡೆಸಿದ ದೃಶ್ಯ
ಹೈದರಾಬಾದಿನಲ್ಲಿ ಪರೇಡ್ ಗೆ ಸಿದ್ದತೆ
ಹೈದರಾಬಾದ್: ಸಶಸ್ತ್ರ ಪಡೆಯ ಯೋಧರು ಗೋಲ್ಕೊಂಡ ಕೋಟೆಯ ಸಮೀಪ ಸ್ವತಂತ್ರ ದಿನಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ತೆಲಂಗಾಣ ರಾಜ್ಯ ರಚನೆಯಾದ ನಂತರ ಇದೇ ಮೊದಲ ಬಾರಿಗೆ ಸಿಎಂ ಕೆ ಚಂದ್ರಶೇಖರ್ ರಾವ್ ಧ್ವಜಾರೋಹಣ ಮಾಡಲಿದ್ದಾರೆ.
ಕೋಲ್ಕತ್ತಾದಲ್ಲಿ ಧ್ವಜ ಸಿದ್ಧತೆ
ಕೋಲ್ಕತ್ತಾದ ದರ್ಜಿಯೊಬ್ಬರು ಕೊನೆ ಗಳಿಗೆಯಲ್ಲಿ ತ್ರಿವರ್ಣ ಧ್ವಜಕ್ಕಾಗಿ ಹುಟ್ಟಿಕೊಂಡಿರುವ ಬೇಡಿಕೆಯನ್ನು ಈಡೇರಿಸಲು ಅವಿರತವಾಗಿ ದುಡಿಯುತ್ತಿದ್ದಾರೆ.