ರಾಜಧಾನಿ ಎಕ್ಸ್ ಪ್ರೆಸ್ ರೈಲು ಅಪಘಾತದ ಚಿತ್ರಗಳು
ಚಪ್ರಾ/ಪಟ್ನಾ, ಜೂ. 25 : ಬಿಹಾರದ ಚಪ್ರಾ ಬಳಿ ಸಂಭವಿಸಿದ ರಾಜಧಾನಿ ಎಕ್ಸ್ ಪ್ರೆಸ್ ರೈಲು ದುರಂತದ ಹಿಂದೆ ಮಾವೋವಾದಿಗಳು ವಿಧ್ವಂಸಕ ಕೃತ್ಯ ಇರಬಹುದೆಂದು ರೈಲ್ವೆ ಇಲಾಖೆ ಶಂಕಿಸಿದೆ. ಆದರೆ, ಸ್ಥಳಕ್ಕೆ ಭೇಟಿ ನೀಡಿದ್ದ ರೈಲು ಸಚಿವ ಡಿವಿ ಸದಾನಂದ ಗೌಡ ಅವರು, ತನಿಖೆ ಪ್ರಗತಿಯಲ್ಲಿದೆ ಏನೂ ಹೇಳಲಾಗದು ಎಂದಿದ್ದಾರೆ.
ಬುಧವಾರ ಬೆಳಗಿನ ಜಾವ 2 ಗಂಟೆ 11 ನಿಮಿಷಕ್ಕೆ ದೆಹಲಿಯಿಂದ ದಿಬ್ರೂಗಡಕ್ಕೆ ಹೊರಟಿದ್ದ ರೈಲಿನ 12 ಬೋಗಿಗಳು ಹಳಿ ತಪ್ಪಿದ್ದರಿಂದ ಕನಿಷ್ಠಪಕ್ಷ 4 ಪ್ರಯಾಣಿಕರು ಅಸುನೀಗಿ, 23ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ 13 ಪ್ರಯಾಣಿಕರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ರೈಲು ಹಳಿಗಳ ಮೇಲೆ ಬಾಂಬ್ ಸ್ಪೋಟ ಸಂಭವಿಸಿ ರೈಲು ಹಳಿ ತಪ್ಪಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇದರ ಹಿಂದೆ ಮಾವೋವಾದಿ ಉಗ್ರರ ಕೈವಾಡವಿದೆ ಎಂದು ಚಂಪಾರಣ್ ಜಿಲ್ಲೆಯ ಎಸ್ಪಿ ವಿನಯ್ ಕುಮಾರ್ ಮತ್ತು ರೈಲ್ವೆ ಬೋರ್ಡ್ ಚೇರ್ಮನ್ ಅರುಣೇಂದ್ರ ಕುಮಾರ್ ಅವರು ಆರೋಪಿಸಿದ್ದಾರೆ.
ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಡಿವಿ ಸದಾನಂದ ಗೌಡ ಅವರು ಕೇಂದ್ರ ರೈಲು ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಸಂಭವಿಸಿದ ಮೊದಲ ಭಾರೀ ರೈಲು ದುರಂತವಿದು. ಸ್ಥಳಕ್ಕೆ ಸದಾನಂದ ಗೌಡರು ಭೇಟಿ ನೀಡಿದರಲ್ಲದೆ, ಸತ್ತವರ ಕುಟುಂಬಕ್ಕೆ 2 ಲಕ್ಷ ರು. ಮತ್ತು ಗಾಯಾಳುಗಳಿಗೆ 1 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ. [ಹಳಿ ತಪ್ಪಿದ ರಾಜಧಾನಿ ಎಕ್ಸ್ ಪ್ರೆಸ್]
ರೈಲು ದುರಂತದ ಚಿತ್ರಗಳು ಮುಂದಿವೆ.
ತನಿಖೆ ನಡೆದಿದೆ ಏನೂ ಹೇಳುವಂತಿಲ್ಲ, ಸದಾನಂದ ಗೌಡ
ಅಪಘಾತದ ಹಿಂದೆ ಮಾವೋವಾದಿಗಳ ಕೃತ್ಯ ಇರಬಹುದೆಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತನಿಖೆ ಮುಗಿಯುವವರೆಗೆ ಏನೂ ಹೇಳುವಂತಿಲ್ಲ ಎಂದು ರೈಲ್ವೆ ಸಚಿವ ಸದಾನಂದ ಗೌಡರು ಹೇಳಿದ್ದಾರೆ.
ರೈಲಿನ ಕೆಳಗೆ ಇನ್ನೂ ಹಲವಾರು ಸಿಲುಕಿರುವ ಶಂಕೆ
ಹಳಿತಪ್ಪಿರುವ 12 ರೈಲು ಬೋಗಿಗಳನ್ನು ಸ್ಥಳಾಂತರಿಸಲಾಗುತ್ತಿದ್ದು, ಅವುಗಳ ಅಡಿಗಳಲ್ಲಿ ಇನ್ನೂ ಹಲವರು ಸಿಲುಕಿರಬಹುದು ಎಂದು ಊಹಿಸಲಾಗಿದೆ.
ಮಾವೋವಾದಿಗಳು ಬುಧವಾರ ಬಂದ್ ಕರೆ ನೀಡಿದ್ದರು
ಈ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದ್ದನ್ನು ವಿರೋಧಿಸಿ ಮಾವೋವಾದಿಗಳು ಬುಧವಾರ ಬಂದ್ ಗೆ ಕರೆ ನೀಡಿದ್ದರು.
ಜಿಲ್ಲೆಯಲ್ಲಿ ಇನ್ನೂ ಮೂರು ಬಾಂಬ್ ಪತ್ತೆ
ಜಿಲ್ಲೆಯಲ್ಲಿ ಇನ್ನೂ ಮೂರು ಬಾಂಬ್ ಗಳನ್ನು ಪತ್ತೆ ಹಚ್ಚಲಾಗಿದ್ದು, ಅವನ್ನು ನಿಷ್ಕ್ರಿಯಗೊಳಿಸಲಾಗಿದೆ.
700 ಅಡಿಗಳಷ್ಟು ಉರುಳಿಬಿದ್ದ ಬೋಗಿಗಳು
ಅಪಘಾತದ ಭೀಕರತೆ ಯಾವ ಮಟ್ಟದ್ದಿತ್ತೆಂದರೆ ಕೆಲ ಬೋಗಿಗಳು 700 ಅಡಿಗಳಷ್ಟು ಉರುಳಿಕೊಂಡು ಬಿದ್ದಿವೆ.
ಗೂಡ್ಸ್ ರೈಲಿನ ಬೋಗಿಗಳು ಕೂಡ ಹಳಿತಪ್ಪಿವೆ
ಗೋಲ್ಡನ್ ಗಂಜ್ ರೈಲು ನಿಲ್ದಾಣದಲ್ಲಿ ಮಾತ್ರವಲ್ಲ 60 ಕಿ.ಮೀ. ದೂರದಲ್ಲಿ ಕೂಡ ಗೂಡ್ಸ್ ರೈಲು ಹಳಿ ತಪ್ಪಿತ್ತು. ಅಲ್ಲಿ ಒಟ್ಟು 18 ಬೋಗಿಗಳು ಹಳಿ ತಪ್ಪಿವೆ.
13 ಗಾಯಾಳುಗಳ ಸ್ಥಿತಿ ಇನ್ನೂ ಚಿಂತಾಜನಕ
ಗಾಯಗೊಂಡವರನ್ನೆಲ್ಲ ಪಟ್ನಾ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಗಾಯಗೊಂಡವರಲ್ಲಿ 13 ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಗೌಹಾತಿಯಲ್ಲಿ ಪ್ರಯಾಣಿಕರ ಪರದಾಟ
ರಾಜಧಾನಿ ಎಕ್ಸ್ ಪ್ರೆಸ್ ರೈಲು ಅಪಘಾತದಿಂದಾಗಿ ಹಲವಾರು ರೈಲುಗಳು ಕ್ಯಾನ್ಸಲ್ ಆಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.