'ಹುಟ್ಟಿದ ಕೂಡಲೇ ಅಮ್ಮ ನನ್ನನ್ನು ಕೊಂದಿದ್ದರೆ!'
ಭೋಪಾಲ್, ಜೂ. 28 : "'ಹೆಣ್ಣುಮಗಳೆಂದರೆ ಅದೊಂದು ಹೊರೆ. ಅದನ್ನು ಕೊಂದುಬಿಡಿ' ಹೀಗೆಂದು ನನ್ನ ಸಂಬಂಧಿಯೊಬ್ಬರು ನಾನು ಹುಟ್ಟಿದಾಗ ನನ್ನ ತಾಯಿಗೆ ಕಿವಿಯೂದಿದ್ದರು. ಆದರೆ, ನನ್ನ ತಾಯಿ ಭಾರೀ ಧೈರ್ಯವಂತೆ. ಹೀಗಾಗಿಯೇ ನಾನೀಗ ನಿಮ್ಮ ಮುಂದೆ ನಿಲ್ಲಲು ಸಾಧ್ಯವಾಗಿದ್ದು!"
ಹೀಗೆಂದು, ಕಣ್ಣಂಚಿನಲ್ಲಿ ಜಿನುಗಿದ ನೀರನ್ನು ಸೀರೆಯ ಚುಂಗಿನಿಂದ ಒರೆಸಿಕೊಂಡು ತನ್ನ ಕಥನವನ್ನು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಭಾವುಕರಾಗಿ ಹಂಚಿಕೊಂಡಿದ್ದಾರೆ. ಭ್ರೂಣ ಹತ್ಯೆಯ ಕುರಿತು ಶಾಲಾ ಬಾಲಕಿಯೊಬ್ಬಳು ಕೇಳಿದ ಪ್ರಶ್ನೆಗೆ ಸ್ಮೃತಿ ಅವರು ತಮ್ಮ ಜೀವನದಲ್ಲಿ ನಡೆದ ಘಟನೆಯನ್ನೇ ಹಂಚಿಕೊಂಡರು.
"ಈ ಘಟನೆಯನ್ನು ನಾನು ಮೊದಲ ಬಾರಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ಹುಟ್ಟಿದಾಗ ಸಂಬಂಧಿಯೊಬ್ಬರು, ಹೆಣ್ಣೆಂದರೆ ಹೊರೆಯಾಗಿರುತ್ತಾಳೆ, ಆಕೆಯನ್ನು ಕೊಂದುಬಿಡಿ, ಎಂದು ನಿರ್ದಯವಾಗಿ ಹೇಳಿದ್ದರು. ನನ್ನ ತಾಯಿ ಧೈರ್ಯವಂತೆ, ಗಟ್ಟಿಗಿತ್ತಿ ಹಾಗೆ ಮಾಡಲಿಲ್ಲ" ಎಂದು ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಸ್ಮೃತಿ ಅವರು ನೆನಪಿನಂಗಳಕ್ಕೆ ಜಾರಿದರು.
"ಭ್ರೂಣ ಹತ್ಯೆಯಂಥ ಹೇಯ ಕೃತ್ಯಕ್ಕೆ ಮಂಗಳ ಹಾಡಬೇಕು. ಕೇಂದ್ರ ಸರಕಾರ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಒಬ್ಬ ಬಾಲಕಿಗೆ ವಿದ್ಯಾದಾನ ಮಾಡಿದರೆ ಆಕೆಗೆ ಮಾತ್ರವಲ್ಲ, ಇಡೀ ಕುಟುಂಬಕ್ಕೆ ನಾವು ಶಿಕ್ಷಣ ನೀಡಿದಂತೆ. ಇದು ದೇಶ ಕಟ್ಟಲು ಸಹಾಯವಾಗುತ್ತದೆ" ಎಂದು ಸ್ಮೃತಿ ಅವರು ವಿಚಾರ ಮಂಡಿಸಿದರು.
ಬೇರೆಬೇರೆ ರಾಜ್ಯಗಳಲ್ಲಿ ಇರುವ ಶೈಕ್ಷಣಿಕ ವಿಭಿನ್ನತೆಯ ಬಗ್ಗೆ ಒಬ್ಬರು ಪ್ರಶ್ನಿಸಿದಾಗ, ಏಕರೀತಿಯ ಶಿಕ್ಷಣದ ಬಗ್ಗೆ ರಾಷ್ಟ್ರೀಯ ಶಿಕ್ಷಣ ನೀತಿ ನಿರ್ಧಾರ ತೆಗೆದುಕೊಳ್ಳುತ್ತದೆ. ದೇಶದ ನಿರುದ್ಯೋಗ ನಿವಾರಿಸಲು ಶಿಕ್ಷಣವನ್ನು ನೈಪುಣ್ಯತೆ ಅಭಿವೃದ್ಧಿಯ ಜೊತೆ ಜೋಡಿಸಲಾಗುವುದು ಮತ್ತು ಪಠ್ಯಕ್ರಮದಲ್ಲಿ ಪ್ರಾಯೋಗಿಕತೆಯನ್ನು ತರಲಾಗುವುದು ಎಂದು ಅವರು ವಿವರಿಸಿದರು.
ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಚರ್ಚೆ ನಡೆಸಿದ ನಂತರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗುವುದು. ಇಲಾಖೆ ರಾಷ್ಟ್ರೀಯ ಈ-ಲೈಬ್ರರಿ ಯೋಜನೆ ಕೂಡ ಹಾಕಿಕೊಂಡಿದ್ದು, ಅಗಾಧವಾದ ಜ್ಞಾನಸಂಪತ್ತು ವಿದ್ಯಾರ್ಥಿಗಳಿಗೆ ಮತ್ತು ಇತರರಿಗೆ ಸುಲಭವಾಗಿ ದೊರೆಯುವಂತೆ ಆಗುತ್ತದೆ ಎಂದು ಅವರು ಹೇಳಿದರು. (ಪಿಟಿಐ)