ಕ್ಲೀನ್ ಗಂಗಾಕ್ಕೆ ದೇಣಿಗೆ ನೀಡಿ, ತೆರಿಗೆ ಲಾಭ ಪಡೆಯಿರಿ
ನವದೆಹಲಿ. ಸೆ. 25 : ಗಂಗಾ ನದಿಯನ್ನು ಸ್ವಚ್ಛಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಯೋಜನೆಗೆ ದೇಣಿಗೆ ನೀಡಿದರೆ ನೀವು ತೆರಿಗೆ ವಿನಾಯಿತಿ ಪಡೆಯಬಹುದು. 'ನಮಾಮಿ ಗಂಗಾ' ಯೋಜನೆಯ ಕ್ಲೀನ್ ಗಂಗಾ ಫಂಡ್(ಜಿಜಿಎಫ್)ಗೆ ದೇಣಿಗೆ ನೀಡಿದರೆ ತೆರಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಬುಧವಾರ ಸಭೆ ಸೇರಿದ ಕೇಂದ್ರ ಕ್ಯಾಬಿನೆಟ್ ಈ ತೀರ್ಮಾನ ತೆಗೆದುಕೊಂಡಿದೆ. ಭಾರತದ ನಾಗರಿಕರು, ಎನ್ಆರ್ಐಗಳು ಅಲ್ಲದೇ ವಿದೇಶಿಯರು ಸಹ ಈ ಯೋಜನೆಗೆ ದೇಣಿಗೆ ನೀಡಬಹುದು. ಭಾರತೀಯ ನಾಗರಿಕರಿಗೆ ತೆರಿಗೆ ವಿನಾಯಿತಿಯೊಂದಿಗೆ ಆದಾಯ ತೆರಿಗೆ ಲಾಭವೂ ದೊರೆಯಲಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮಾಹಿತಿ ನೀಡಿದ್ದಾರೆ.(ಕೇಂದ್ರದ ಗಂಗಾ ಶುದ್ಧೀಕರಣ ನೀಲನಕ್ಷೆಯಲ್ಲೇನಿದೆ?)
ಹಣ ಸಂಗ್ರಹಣೆ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಹಣಕಾಸು ಸಚಿವರ ನೇತೃತ್ವದ ಸಮಿತಿ ವಹಿಸಿಕೊಂಡಿರುತ್ತದೆ. ಬೃಹತ್ ಗಾತ್ರದ ಯೋಜನೆ ಅನುಷ್ಠಾನಕ್ಕೆ ಅಪಾರ ಪ್ರಮಾಣದ ಹಣದ ಅಗತ್ಯವಿದ್ದು ಸರ್ಕಾರದೊಂದಿಗೆ ಜನರು ಕೈಜೋಡಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.(ಅಮೆಜಾನ್ ತೆರಿಗೆ ಹೇರಿಕೆಗೆ ದಿಗ್ವಿಜಯ್ ಡಿಚ್ಚಿǃ)
ಸಂಗ್ರಹವಾಗುವ ಹಣವನ್ನು ವಿವಿಧ ಯೋಜನೆಗಳಿಗೆ ಬಳಸಲಾಗುವುದು. ಬಯಲು ಶೌಚ ಮುಕ್ತ ಮಾಡಲು ಶೌಚಾಲಯಗಳ ನಿರ್ಮಾಣ, ಕೃಷಿಗೆ ವಿಶೇಷ ಒತ್ತು, ನಗರದೆಡೆಗೆ ಆಗಮಿಸುತ್ತಿರುವ ಯುವಕರನ್ನು ಹಳ್ಳಿಯಲ್ಲೇ ಉಳಿಸಿಕೊಳ್ಳಲು ವಿನೀತನ ಯೋಜನೆ, ಸಾಕುಪ್ರಾಣಿಗಳಿಗೆ ಸಮರ್ಪಕ ಆಹಾರ ಪೂರೈಕೆ ಈ ರೀತಿಯ ಗಂಗಾ ನದಿ ಸ್ವಚ್ಛಗೊಳಿಸುವ ಕೆಲಸಕ್ಕೆ ಪೂರಕವಾದ ಕೆಲಸಗಳನ್ನು ಕೈಗೊತ್ತಿಕೊಳ್ಳಲಾಗುವುದು. ಇದು ಮಾಲಿನ್ಯ ನಿಯಂತ್ರಣದಲ್ಲಿ ಹೆಜ್ಜೆಯಾಗುತ್ತದೆ ಎಂದು ಕೇಂದ್ರ ಕ್ಯಾಬಿನೆಟ್ ತಿಳಿಸಿದೆ.